ADVERTISEMENT

ಕೊಡವ ಭಾಷಾ ಬೆಳವಣಿಗೆಗೆ ಕ್ರಮ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2011, 4:30 IST
Last Updated 14 ಅಕ್ಟೋಬರ್ 2011, 4:30 IST

ಮಡಿಕೇರಿ: ಯಾವುದೇ ಭಾರತೀಯ ಭಾಷೆ ಅವನತಿಯ ಹಾದಿ ಹಿಡಿಯಬಾರದು. ಭಾಷೆಯನ್ನು ನಾವು ಸಂಪೂರ್ಣವಾಗಿ ಬಳಕೆ ಮಾಡಿದರೆ ಬೆಳವಣಿಗೆ ಸಾಧ್ಯ ಎಂದು ಮೈಸೂರಿನ ಭಾಷಾ ಸಂಸ್ಥಾನದ (ಸಿ.ಐ.ಐ.ಎಲ್) ರೀಚರ್ ಮತ್ತು ಸಂಶೋಧನಾ ಅಧಿಕಾರಿಗಳಾದ ಡಾ. ಸಿ.ವಿ. ಶಿವರಾಮಕೃಷ್ಣನ್ ಹೇಳಿದರು.

ಮೈಸೂರಿನ ಸಿ.ಐ.ಐ.ಎಲ್ ಸಂಸ್ಥೆಯ ಆಶ್ರಯದಲ್ಲಿ ನಗರದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಸಭಾಭವನದಲ್ಲಿ ಆಯೋಜಿಸಲಾಗಿರುವ ಏಳು ದಿನಗಳ ಕೊಡವ ಒಗಟುಗಳ ರಚನೆಯ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಭಾರತದಲ್ಲಿ ಸಾವಿರಾರು ಭಾಷೆಗಳನ್ನು ನೂರಾರು ಧರ್ಮದವರು ಬಳಸುತ್ತಿದ್ದಾರೆ. ಕೆಲವು ಭಾಷೆಗಳಿಗೆ ಲಿಪಿ ಇಲ್ಲ. ಕೊಡವ ಭಾಷೆಯು ಕನ್ನಡದ ಲಿಪಿಯೊಂದಿಗೆ ಬೆಳವಣಿಗೆ ಸಾಧಿಸಿದೆ ಎಂದರು.

ಕೊಡವ ಭಾಷೆಯಲ್ಲಿ ಇನ್ನೂ ಹಳೆಯ ಪದಗಳು ಬಳಕೆಯಾಗುತ್ತಿಲ್ಲ. ಕನ್ನಡ, ತುಳು, ಮಲಯಾಳಿ, ತಮಿಳು ಮತ್ತು ಇಂಗ್ಲೀಷ್ ಭಾಷೆಯ ಮಿಶ್ರಣವಿದೆ. ಕೊಡವ ಭಾಷೆಯ ಹಿರಿಯತಜ್ಞರು, ಅನುಭವಿಗಳಿಂದ ಒಗಟು ನುಡಿಗಟ್ಟುಗಳನ್ನು ರಚಿಸಿ, ಭಾಷಾ ಸಂಸ್ಥಾನದ ಸಹಕಾರದೊಂದಿಗೆ ಕೊಡವ ಭಾಷೆಯ ಬೆಳವಣಿಗೆಗೆ ಶ್ರಮಿಸಲಾಗುವುದು ಎಂದರು.

ರೀಜನಲ್ ಕಾಲೇಜಿನ ಮಾಹಿತಿ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ನಾಗರಾಜ್ ಮಾತನಾಡಿ, ಗ್ರಾಮೀಣ ಸೊಗಡಿನ ಹಿನ್ನೆಲೆ ಇರುವ ಗಾದೆ ಮಾತುಗಳು ಜನಜೀವನದ ವ್ಯವಸ್ಥೆಯನ್ನು ಪ್ರತಿಬಿಂಬಿಸಲಾಗುತ್ತದೆ. ಒಂದು ಒಗಟು ನೂರಾರು ಅರ್ಥವನ್ನು ಕೊಡುತ್ತದೆ ಎಂದರು.

ಸಿ.ಐ.ಐ.ಎಲ್ ಸಂಸ್ಥೆಯ ಡಾ. ಭಾಮಿನಿ ರಾಘವಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಸಾಹಿತಿ ಬಾಚರಣೆಯಂಡ ಅಪ್ಪಣ್ಣ ಕಾರ್ಯಾಗಾರವನ್ನು ಉದ್ಘಾಟಿಸಿದರು.

ಕೊಡವ ಗಾದೆ ರಚನೆ ಕಾರ್ಯಾಗಾರದಲ್ಲಿ ಬಾಚರಣೆ ಇಯಂಡ ರಾಣು ಅಪ್ಪಣ್ಣ, ಮಂಡೇಪಂಡ ಗೀತಾ ಮಂದಣ್ಣ, ತೇಲಪಂಡ ಕವನ್ ಕಾರ್ಯಪ್ಪ, ಮಲಚೀರ ಕಾರ್ಯಪ್ಪ, ಕಾಳಿಮಾಡ ಮೋಟಯ್ಯ, ಕಲಿಯಂಡ ಸರಸ್ವತಿ ಚಂಗಪ್ಪ, ಐಮುಡಿಯಂಡ ರಾಣಿ ಮಾಚಯ್ಯ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.