ADVERTISEMENT

ಕೋವಿ ವಿನಾಯಿತಿ ನೀಡಲು ಮನವಿ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2013, 8:09 IST
Last Updated 10 ಡಿಸೆಂಬರ್ 2013, 8:09 IST

ಮಡಿಕೇರಿ: ಕೋವಿ ವಿನಾಯಿತಿ ಬಗ್ಗೆ ಎದ್ದಿರುವ ಗೊಂದಲ ನಿವಾರಿಸಬೇಕು ಹಾಗೂ ವಿನಾಯಿತಿ ನೀಡಲು ಕೇಳುತ್ತಿರುವ ದಾಖಲೆಗಳನ್ನು ಸರಳೀಕರಣಗೊಳಿಸಬೇಕೆಂದು ಕೊಡವ ಸಮಾಜಗಳ ಒಕ್ಕೂಟ ಹಾಗೂ  ಗೌಡ ಸಮಾಜಗಳ ಒಕ್ಕೂಟದ ಸದಸ್ಯರು ಜಿಲ್ಲಾಧಿಕಾರಿ ಅನುರಾಗ್‌ ತಿವಾರಿ ಅವರಿಗೆ ಸೋಮವಾರ ಮನವಿ ಮಾಡಿದರು.

ನಗರದ  ಕೋಟೆ ಆವರಣದಲ್ಲಿ ಜಿಲ್ಲಾಧಿಕಾರಿ ಅವರನ್ನು ಭೇಟಿ ಮಾಡಿದ ಸದಸ್ಯರು, ಬ್ರಿಟಿಷರ ಕಾಲದಿಂದಲೂ ಕೋವಿ ಬಳಕೆಗೆ ವಿನಾಯಿತಿ ಹಕ್ಕು ನೀಡಲಾಗಿದೆ. ಕೊಡವ ಜನಾಂಗದಲ್ಲಿ ಜನಿಸಿದವರಿಗೆ ಹಾಗೂ ಜಮ್ಮಾ ಹಿಡುವಳಿದಾರರಿಗೆ ವಿನಾಯಿತಿ ಹಕ್ಕು ನೀಡಲಾಗಿದೆ. ಕೊಡವರಲ್ಲದೇ, ಅರೆಭಾಷೆ ಗೌಡ, ಮುಸ್ಲಿಂ ಜನಾಂಗದವರ ಬಳಿಯೂ ಜಮ್ಮಾ ಭೂಮಿ ಇದೆ. ಇವರು ಕೂಡ ಕೋವಿ ವಿನಾಯಿತಿ ಹಕ್ಕು ಹೊಂದಿದ್ದಾರೆ.

ನಮ್ಮ ಹಕ್ಕುಗಳಿಗೆ ಯಾವುದೇ ರೀತಿಯಲ್ಲಿ ಧಕ್ಕೆ ತರಬಾರದು ಎಂದು ಅವರು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಅನುರಾಗ್‌ ತಿವಾರಿ ಅವರು, ವಿನಾಯಿತಿ ಕೋರಿ ಅರ್ಜಿ ಸಲ್ಲಿಸುವವರ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಸಮರ್ಪಕವಾಗಿ ದಾಖಲೆಗಳನ್ನು ನೀಡಿದವರಿಗೆ ವಿನಾಯಿತಿ ಹಕ್ಕು ನೀಡಲಾಗುತ್ತಿದೆ ಎಂದು ಹೇಳಿದರು.

ಇದಕ್ಕೂ ಮೊದಲು ನಗರದ ಕಾಫಿ ಸೊಸೈಟಿ ಕಚೇರಿಯಲ್ಲಿ ಸಭೆ ಸೇರಿದ ಒಕ್ಕೂಟಗಳ ಸದಸ್ಯರು ತಮ್ಮ ಅಭಿಪ್ರಾಯಗಳನ್ನು ಪರಸ್ಪರ ಹಂಚಿಕೊಂಡಿದ್ದರು. ಅಖಿಲ ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಮಾತಂಡ ಮೊಣ್ಣಪ್ಪ, ಉಪಾಧ್ಯಕ್ಷ ಎನ್‌. ಮಾದಯ್ಯ ಸುಬ್ರಮಣಿ, ಖಜಾಂಚಿ ಮಂಡೇಪಂಡ ಸುಗುಣ ಮುತ್ತಣ್ಣ, ಜಂಟಿ ಕಾರ್ಯದರ್ಶಿ ರಾಜಾ ನಂಜಪ್ಪ, ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಪೈಕೇರಾ ಅನಂತರಾಮ, ಪದಾಧಿಕಾರಿಗಳಾದ ಕೆ.ಆರ್‌. ಅನಂತಕುಮಾರ್‌, ಹೊಸೂರು ರಮೇಶ್‌ ಜೋಯಪ್ಪ, ಕೊಡಗು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಬಿ.ಟಿ. ಪ್ರದೀಪ್‌, ಕೊಲ್ಯದ ಗಿರೀಶ್‌,  ಯಾಲದಾಳು ಮನೋಜ್‌ ಬೋಪಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT