ADVERTISEMENT

ಗಾಡ್ಗೀಲ್ ವರದಿ; ಮಿಶ್ರಕೃಷಿಗೆ ಮಾರಕ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2012, 5:58 IST
Last Updated 22 ಡಿಸೆಂಬರ್ 2012, 5:58 IST

ಮಡಿಕೇರಿ: ಪಶ್ಚಿಮ ಘಟ್ಟದ ಕುರಿತು ಮಾಧವ್ ಗಾಡ್ಗೀಲ್ ನೀಡಿರುವ ವರದಿಯನ್ನು ಯಥಾವತ್ತಾಗಿ ಅನುಷ್ಠಾನಗೊಳಿಸಿದರೆ ಕೊಡಗಿನಲ್ಲಿ ಕಾಫಿ, ಏಲಕ್ಕಿ, ಕರಿಮೆಣಸು ಕೃಷಿಗೆ ಧಕ್ಕೆ ಉಂಟಾಗಬಹುದು ಎಂದು ವಿಧಾನ ಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.

ಇಲ್ಲಿಗೆ ಸಮೀಪದ ಅಪ್ಪಂಗಳ ದಲ್ಲಿರುವ ಏಲಕ್ಕಿ ಸಂಶೋಧನಾ ಕೇಂದ್ರದ ಸುವರ್ಣ ಮಹೋತ್ಸವ ಸಮಾರೋಪ ಸಮಾರಂಭದಲ್ಲಿ ಶುಕ್ರವಾರ ದೀಪ ಬೆಳಗಿಸಿ ಅವರು ಮಾತನಾಡಿದರು.

ಕೊಡಗಿನಲ್ಲಿ ಒಂದೇ ಬೆಳೆಯನ್ನು ನಂಬಿಕೊಂಡು ಕೃಷಿ ಮಾಡುವುದು ಕಷ್ಟ. ಯಾವ ಯಾವ ಸಮಯದಲ್ಲಿ ಕಾಫಿಗೆ, ಕರಿಮೆಣಸಿಗೆ ಅಥವಾ ಏಲಕ್ಕಿಗೆ ಉತ್ತಮ ಬೆಲೆ ಬರುತ್ತದೆ ಎಂದು ಹೇಳುವುದು ಕಷ್ಟ. ಆ ಕಾರಣಕ್ಕಾಗಿ ಇಲ್ಲಿನ ರೈತರು ಮಿಶ್ರಬೆಳೆಯನ್ನು ನೆಚ್ಚಿಕೊಂಡಿದ್ದಾರೆ. ಆದರೆ ಈ ವರದಿಯಲ್ಲಿ  ಪಶ್ಚಿಮ ಘಟ್ಟಕ್ಕೆ ಒಳಪಡುವ ಪ್ರದೇಶದಲ್ಲಿ ಏಕಬೆಳೆ ಬೆಳೆಯುವಂತೆ ಸಲಹೆ ನೀಡಲಾಗಿದೆ. ಇದನ್ನು ಯಥಾವತ್ತಾಗಿ ಹೇಗೆ ತಾನೇ ಜಾರಿಗೊಳಿಸಲು ಸಾಧ್ಯ ಎಂದು ಅವರು ಪ್ರಶ್ನಿಸಿದರು.

ಕೃಷಿಯಲ್ಲಿ ಹಲವು ವರ್ಷಗಳಿಂದ ರಾಸಾಯನಿಕ ಗೊಬ್ಬರಗಳನ್ನು ಬಳಸುತ್ತ ಬಂದಿದ್ದೇವೆ. ಹೆಚ್ಚಿನ ಫಸಲು ಪಡೆಯಲು ಹಾಗೂ ಇಂದಿನ ಹೊಸ ತಳಿಗಳಿಗೆ ರೋಗನಿರೋಧಕ ಶಕ್ತಿ ತುಂಬಲು ಇಂದು ರಸಗೊಬ್ಬರ ಬಳಕೆ ಅನಿವಾರ್ಯ ವಾಗಿದೆ. ಇಂತಹ ಸಮಯದಲ್ಲಿ ಸಾವಯವ ಗೊಬ್ಬರವನ್ನು ಮಾತ್ರ ಉಪಯೋಗಿಸಬೇಕೆಂದು ಸಲಹೆ ನೀಡಿದರೆ ಅದನ್ನು ಪಾಲಿಸಲು ಸಾಧ್ಯವಾಗುತ್ತದೆಯೇ ಎಂದರು.

ಈಗಾಗಲೇ ಜಿಲ್ಲೆಯಲ್ಲಿ ಕೃಷಿ ಕುಂಟುತ್ತಾ ಸಾಗಿದೆ. ಬೆಲೆ ಏರುಪೇರಿ ನಿಂದಾಗಿ, ಮಳೆಯ ಅನಿಶ್ಚಿತತೆಯಿಂದಾಗಿ ಹಲವು ಜನ ಕೃಷಿಕರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಅವರ ಮಕ್ಕಳು ಉದ್ಯೋಗ ಅರಸಿ ನಗರಗಳತ್ತ ವಲಸೆ ಹೋಗುತ್ತಿದ್ದಾರೆ. ಇದನ್ನು ತಡೆಯ ಬೇಕಾದರೆ ಕೃಷಿಯನ್ನು ಸಶಕ್ತ ಗೊಳಿಸಬೇಕೆಂದು ಅವರು ಹೇಳಿದರು.

`ಪರಿಸರಪ್ರಿಯ ತಳಿ ಅಗತ್ಯ'
ಒಂದು ಕಾಲದಲ್ಲಿ ಮಡಿಕೇರಿ ಸುತ್ತಮುತ್ತ ಏಲಕ್ಕಿ ಸಮೃದ್ಧಿಯಾಗಿ ಕೆಲವು ವರ್ಷಗಳ ಹಿಂದೆ ನೆಲ್ಯಾಣಿ ಏಲಕ್ಕಿ ಎನ್ನುವ ತಳಿಯನ್ನು ಸಂಶೋಧಕರು ಅಭಿವೃದ್ಧಿಪಡಿಸಿ ಜಮೀನುಗಳಲ್ಲಿ ಬೆಳೆಸಿ ದ್ದರು. ಆದರೆ, ಪರಿಸರಕ್ಕೆ ಹೊಂದಾಣಿಕೆ ಯಾಗದೇ ಇದು ನಾಶವಾಯಿತು. 

ಜಿಲ್ಲೆಯ ಪರಿಸರಕ್ಕೆ ಹೊಂದುವಂತಹ ತಳಿಗಳನ್ನು ಸಂಶೋಧನಾ ಸಂಸ್ಥೆಗಳು ಅಭಿವೃದ್ಧಿಪಡಿಸಬೇಕು ಎಂದು ಅವರು ಕರೆ ನೀಡಿದರು.
ಜಿಲ್ಲೆಯ ಹಲವು ಭಾಗಗಳಲ್ಲಿ ಹಣ್ಣು, ತರಕಾರಿಗಳನ್ನು ರೈತರು ಬೆಳೆಯು ತ್ತಿದ್ದರೂ ಅವುಗಳನ್ನು ಸಂಗ್ರಹಿಸಿಡಲು ಶೀಥಲೀಕರಣ ಕೊಠಡಿ ಕೊರತೆ ಯಿಂದಾಗಿ ಸಾಕಷ್ಟು ನಷ್ಟವನ್ನು ಅನುಭವಿಸುತ್ತಿದ್ದಾರೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಬಾರ ಮಂಡಳಿಯ ನಿರ್ದೇಶಕ (ಮಾರ್ಕೇಟಿಂಗ್) ಡಾ. ಎಂ.ಆರ್. ಸುದರ್ಶನ್ ಮಾತನಾಡಿ, ಕೊಡಗಿನ ಏಲಕ್ಕಿಗೆ ಪುನರ್‌ವೈಭವ ತರುವ ದೃಷ್ಟಿಯಿಂದ ಅಪ್ಪಂಗಳದಲ್ಲಿ ಏಲಕ್ಕಿ ಬೆಳೆಗಳ ಸಂಶೋಧನಾ ಕೇಂದ್ರವನ್ನು ತೆರೆಯಲಾಗಿದೆ ಎಂದರು.

ಭಾರತೀಯ ಸಂಬಾರ ಬೆಳೆಗಳ ಸಂಶೋಧನಾ ಸಂಸ್ಥೆ (ಐಐಎಸ್‌ಆರ್) ನಿರ್ದೇಶಕ ಡಾ.ಎಂ. ಆನಂದರಾಜ್, ಏಲಕ್ಕಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ಎಸ್.ಜೆ. ಅಂಕೇಗೌಡ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.