ADVERTISEMENT

ಗ್ಯಾಸ್ ಏಜೆನ್ಸಿ ವಿರುದ್ಧ ನಾಗರಿಕರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2012, 6:10 IST
Last Updated 15 ಜೂನ್ 2012, 6:10 IST

ವಿರಾಜಪೇಟೆ: ಅಸಮರ್ಪಕ ಅಡುಗೆ ಅನಿಲ ವಿತರಣೆ ಮಾಡುತ್ತಿದ್ದ ಗ್ಯಾಸ್ ಏಜೆನ್ಸಿ ವಿರುದ್ಧ ವಿರಾಜಪೇಟೆಯಲ್ಲಿ ಗುರುವಾರ ನಾಗರಿಕ ಸಮಿತಿಯ ನೇತೃತ್ವದಲ್ಲಿ ಭಾರಿ ಪ್ರತಿಭಟನೆ ನಡೆಯಿತು. 

ಪಟ್ಟಣ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಅಡುಗೆ ಅನಿಲ ವಿತರಣೆಯನ್ನು ಸಮರ್ಪಕವಾಗಿ ಮಾಡುತ್ತಿಲ್ಲ ಹಾಗೂ ಈವರೆಗೆ ಇದ್ದ ಮನೆ ಬಾಗಿಲಿಗೆ ಅನಿಲ ವಿತರಣೆೆ ಸೌಲಭ್ಯವನ್ನು ಏಕಾಏಕಿ ಸ್ಥಗಿತಗೊಳಿಸಲಾಗಿದೆ ಎಂದು ಸಮಿತಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿನ ಗಡಿಯಾರ ಕಂಬದಿಂದ ಮೆರವಣಿಗೆಯಲ್ಲಿ ಹೊರಟ ಪ್ರತಿಭಟನಾಕಾರರು ಗ್ಯಾಸ್ ಏಜನ್ಸಿ ವಿರುದ್ಧ ಘೋಷಣೆ ಕೂಗಿದರು. ಅಡುಗೆ ಅನಿಲ ಪ್ರತಿಯೊಬ್ಬ ನಾಗರಿಕನ ಮೂಲ ಅಗತ್ಯವಾಗಿದ್ದು, ಸರಕಾರದ ಸಹಾಯಧನವನ್ನು ಪಡೆದು ವಿತರಿಸುವ ಅಡುಗೆ ಅನಿಲ ತನ್ನ ಸ್ವಂತದ ಸರಕಿನಂತೆ ವ್ಯವಹಾರ ಮಾಡುತ್ತಿರುವ ಏಜನ್ಸಿಯ ಕ್ರಮ  ಖಂಡನಾರ್ಹ ಎಂದರು.

ಹಿಂದೂಸ್ತಾನ್ ಪೆಟ್ರೋಲಿಯಂ ಕಂಪೆನಿಯ ನಿಯಮದಂತೆ ಪಟ್ಟಣ ವ್ಯಾಪ್ತಿಯ ಪ್ರತಿ ಮನೆಗೂ ಸಾಗಣೆ ವೆಚ್ಚ ಪಡೆಯದೆ ಗ್ಯಾಸ್ ವಿತರಿಸಬೇಕಾದುದು ಏಜನ್ಸಿಯ ಕರ್ತವ್ಯ. ಈ ನಿಯಮವನ್ನು ಉಲ್ಲಂಘಿಸುತ್ತಿರುವ ಏಜನ್ಸಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.

ಕ್ರಮ ತೆಗೆದುಕೊಳ್ಳಬೇಕಾದ ಆಹಾರ ಇಲಾಖೆ ಅಧಿಕಾರಿಗಳು ಏಜನ್ಸಿಯೊಂದಿಗೆ ಶಾಮೀಲಾಗಿರುವುದುದರಿಂದ ಈ ಸ್ಥಿತಿ ಬಂದಿದೆ. ಕೂಡಲೇ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದೆ ಉಗ್ರ ಹೋರಾಟ ನಡೆಸುವುದಾಗಿ ನಾಗರಿಕ ಸಮಿತಿಯವರು ಎಚ್ಚರಿಕೆ ನೀಡಿದರು.

ಪ್ರತಿಭಟನೆಯ ಮಧ್ಯೆ ಪ್ರವೇಶಿಸಿದ ವಿರಾಜಪೇಟೆ ತಹಶೀಲ್ದಾರ್ ಅವರು ಏಜೆನ್ಸಿ ವಿರುದ್ಧ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯಲಾಯಿತು.

ನಾಗರಿಕ ಸಮಿತಿ ಅಧ್ಯಕ್ಷ ನಾಯಡ.ಸಿ.ನಂಜಪ್ಪ, ಸಂಚಾಲಕ ಡಾ.ಐ.ಆರ್.ದುರ್ಗಾಪ್ರಸಾದ್, ಲೋಕನಾಥ್ ಮಾತನಾಡಿದರು. ಕಾವೇರಿ ಲಘು ವಾಹನ ಹಾಗೂ ಆಟೋ ಚಾಲಕರ ಸಂಘ, ಯೂತ್‌ವಿಂಗ್ ಜಮಾಅತೆ ಇಸ್ಲಾಮೀ, ಸಿ.ಪಿ.ಐ ಸಂಘಟನೆಗಳ ಪದಾಧಿಕಾರಿಗಳು  ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.