ADVERTISEMENT

ಜಪಾನ್ ಮಾದರಿಯಲ್ಲಿ ಯುವ ಕೇಂದ್ರಗಳಿಗೆ ಬಲ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2011, 4:30 IST
Last Updated 14 ಅಕ್ಟೋಬರ್ 2011, 4:30 IST

ಮಡಿಕೇರಿ: ಯುವ ಸಂಘಗಳನ್ನು ಸರ್ಕಾ ರದ ಎಲ್ಲ ಇಲಾಖೆಗಳ ಜೊತೆಗೂಡಿಸಿ ಕೊಂಡು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಜಪಾನ್‌ನಲ್ಲಿ ಯೋಜನೆ ರೂಪಿಸಲಾಗಿದೆ. ಇಂತಹ ಜಪಾನ್ ಮಾದರಿಯನ್ನು ನಮ್ಮ ದೇಶ ದಲ್ಲಿಯೂ ಅಳವಡಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಸಂಸದ ಅಡಗೂರು ಎಚ್.ವಿಶ್ವನಾಥ್ ಹೇಳಿದರು.

 ನೆಹರು ಯುವ ಒಕ್ಕೂಟ, ಜಿಲ್ಲಾ ಯುವ ಒಕ್ಕೂಟ, ಮಹಿಳೋದಯ ಮಹಿಳಾ ಒಕ್ಕೂಟ, ಓಡಿಪಿ ಸಂಸ್ಥೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ತಾಲ್ಲೂಕು ಯುವ ಒಕ್ಕೂಟಗಳ ಸಂಯುಕ್ತಾಶ್ರಯದಲ್ಲಿ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ ಜಿಲ್ಲಾ ಮಟ್ಟದ ಯುವ ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೇಂದ್ರದ ಯುವಜನ ಸೇವಾ ಸಚಿವ ರಾಗಿ ಅಜಯ ಮಕೇನ್ ಅಧಿಕಾರ ವಹಿಸಿಕೊಂಡ ನಂತರ ಈ ಇಲಾಖೆಯಲ್ಲಿ ಸಾಕಷ್ಟು ಕ್ರಿಯಾಶೀಲ ಕೆಲಸಗಳನ್ನು ಹಮ್ಮಿಕೊಂಡಿದ್ದಾರೆ. ಇದರ ನಿಮಿತ್ತ ಈಗ ಜಪಾನ್ ಮಾದರಿಯ ಕಾರ್ಯ ತಂತ್ರವನ್ನು ಅನುಸರಿಸಲು ಯೋಜನೆ ಹಾಕಿಕೊಂಡಿದ್ದಾರೆ ಎಂದರು.

ಯುವ ಜನರ ಸುಪ್ತ ಪ್ರತಿಭೆಯನ್ನು ಪ್ರೋತ್ಸಾಹಿಸಲು ಹಾಗೂ ಯುವ ಶಕ್ತಿ ಸಾಮರ್ಥ್ಯವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ 1972 ರಲ್ಲಿ ಕೇಂದ್ರ ಸರ್ಕಾರವು ನೆಹರು ಯುವ ಕೇಂದ್ರಗಳನ್ನುಆರಂಭಿಸಿತ್ತು ಎಂದು ಅವರು ಸ್ಮರಿಸಿಕೊಂಡರು.

ರಾಷ್ಟ್ರದಲ್ಲಿನ 120 ಕೋಟಿ ಜನ ಸಂಖ್ಯೆಯಲ್ಲಿ 13 ರಿಂದ 35 ವರ್ಷ ದೊಳಗಿನ ಸುಮಾರು 45 ಕೋಟಿ ಯುವ ಜನರಿದ್ದು ಇವರ ಕ್ರೀಯಾ ಶೀಲತೆ, ಅಭಿರುಚಿ ಹಾಗೂ ಅಭಿವ್ಯಕ್ತಿ ಯನ್ನು ಸಮರ್ಪಕವಾಗಿ ಬಳಕೆ ಮಾಡಿ ಕೊಳ್ಳುವ ನಿಟ್ಟಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಮಾದರಿಯಲ್ಲಿ ನೆಹರು ಯುವ ಕೇಂದ್ರ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ತಿಳಿಸಿದರು.

ಜಿ.ಪಂ.ಅಧ್ಯಕ್ಷರಾದ ಶಾಂತೆಯಂಡ ರವಿಕುಶಾಲಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ,   ಹಿಂದೆ ಯುವ ಸಂಘಗಳು ಗ್ರಾಮಗಳಲ್ಲಿ ಶ್ರಮದಾನ, ರಸ್ತೆ ದುರಸ್ತಿ, ಕುಡಿಯುವ ನೀರು ಸರಬರಾಜು ಮತ್ತಿತರ ಸಮಸ್ಯೆ ಗಳನ್ನು ಎಲ್ಲರೂ ಒಟ್ಟುಗೂಡಿ ಇತ್ಯರ್ಥ ಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಆದರೆ, ಇಂದು ಎಲ್ಲ ಅಭಿವೃದ್ಧಿ ಕಾರ್ಯ ಗಳನ್ನು ಸರ್ಕಾರವೇ ಮಾಡಲಿ ಎಂದು ಎಲ್ಲರೂ ಎದುರು ನೋಡುತ್ತಿದ್ದಾರೆ ಎಂದು ಅವರು ಹೇಳಿದರು.

ಜಿಲ್ಲೆಯ ವಿವಿಧ ಭಾಗಗಳಲ್ಲಿ ಜಲ, ಸೌರ ವಿದ್ಯುತ್ ಬಳಕೆ ಕಾರ್ಯ ನಡೆಯುತ್ತಿದೆ. ಇದಕ್ಕಾಗಿ ಲೋಕಸಭಾ ಸದಸ್ಯರ ಅನುದಾನದಲ್ಲಿ ಬಡ ಕುಟುಂಬ ಗಳಿಗೆ ಯಂತ್ರೋಪಕರಣ ಖರೀದಿಸಲು ಸಹಾಯಧನ ನೀಡುವಂತಾಗಬೇಕು ಎಂದು ಸಂಸದ ಎಚ್. ವಿಶ್ವನಾಥ್ ಅವರಲ್ಲಿ ಜಿ.ಪಂ.ಅಧ್ಯಕ್ಷರು ಮನವಿ ಮಾಡಿದರು.

ಜಿ.ಪಂ.ಉಪಾಧ್ಯಕ್ಷೆ ಎಚ್.ಎಂ. ಕಾವೇರಿ ಮಾತನಾಡಿ, ಪ್ರತಿಯೊಬ್ಬರೂ ಸಮಾನ ಚಿಂತನೆ ಮತ್ತು ಸಮಾನ ಆಸಕ್ತಿ ಹೊಂದಿದಾಗ ಮಾತ್ರ ಸಮಾಜ ಕಟ್ಟಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಸೂರ್ಯನ ಬೆಳಕು ಚೆದುರಿದಂತೆ ಯುವಜನರು ತಮ್ಮಲ್ಲಿರುವ ಅದ್ಭುತ ಪ್ರತಿಭೆ, ಸಾಮರ್ಥ್ಯವನ್ನು ಅರಿತು ಸಮಯ ವ್ಯರ್ಥ ಮಾಡದೆ ಇರುವ ಅವ ಕಾಶವನ್ನು ಬಳಸಿಕೊಂಡು ಮುನ್ನಡೆ ಯಬೇಕು ಎಂದು ಅವರು ಸಲಹೆ ನೀಡಿದರು.

ಜಿ.ಪಂ. ಮುಖ್ಯಕಾರ್ಯನಿರ್ವ ಹಣಾಧಿಕಾರಿ ಎನ್.ಕೃಷ್ಣಪ್ಪ ಮಾತನಾಡಿ ನೆಹರು ಯುವ ಕೇಂದ್ರವು ಯುವ ಜನರಿಗೆ ಉತ್ತಮ ಮಾರ್ಗ ದರ್ಶನ ನೀಡುವುದರ ಜೊತೆಗೆ ಹಲವು ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು.

 ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ಗೋವಿಂದ ಭಟ್ ಅವರು ಪ್ರಾಸ್ತಾವಿಕವಾಗಿ ಮಾತ ನಾಡಿದರು. ಜಿಲ್ಲಾಧಿಕಾರಿ ಡಾ.      ಎನ್.ವಿ.ಪ್ರಸಾದ್, ನೆಹರು ಯುವ ಕೇಂದ್ರದ ಸಲಹೆಗಾರರಾದ ವಿಮಲ, ಲೋಕನಾಥ ಅಮೆಚೂರು, ಓಡಿಪಿ ಸಂಸ್ಥೆಯ ಚಾಯ್ಸಿ ಮನೆಜಸ್ ಉಪಸ್ಥಿತರಿದ್ದರು.

ಕೊಡಗು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷರಾದ ಕಂದಾ ದೇವಯ್ಯ ಸ್ವಾಗತಿಸಿದರು, ಸಬಾ ಸುಬ್ರಮಣಿ ನಿರೂಪಿಸಿದರು, ಗಣೇಶ್ ಭಟ್ ತಂಡದವರು ಪ್ರಾರ್ಥಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.