ಸುಂಟಿಕೊಪ್ಪ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ಓಟ್ ಬ್ಯಾಂಕಿಗಾಗಿ ಟಿಪ್ಪು ಜಯಂತಿ ಆಚರಿಸುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿರುವುದು ಪಕ್ಷದ ಅವನತಿಗೆ ಹಾಕುತ್ತಿರುವ ಅಡಿಪಾಯ’ ಎಂದು ಸೋಮವಾರಪೇಟೆ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಅಭಿಮನ್ಯು ಕುಮಾರ್ ಅಭಿಪ್ರಾಯಪಟ್ಟರು.
ಸುಂಟಿಕೊಪ್ಪ ಬಿಜೆಪಿ ಸ್ಥಾನೀಯ ಸಮಿತಿಯಿಂದ ಭಾನುವಾರ ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆ ಮತ್ತು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ಆಡಳಿತ ವೈಫಲ್ಯ’ ಕುರಿತು ಹಮ್ಮಿಕೊಂಡಿದ್ದ ಜನಜಾಗೃತಿ ಆಂದೋಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೊಡಗಿನ ಮೇಲೆ ಸುಮಾರು 31 ಬಾರಿ ದಾಳಿ ಮಾಡಿದ ಟಿಪ್ಪುವನ್ನು ವೈಭವೀಕರಿಸುವುದು ಎಷ್ಟು ಸರಿ. ಕೊಡಗಿನ ಹಲಲು ದೇವಾಲಯಗಳನ್ನು ಭಗ್ನಗೊಳಿಸಿರುವುದು ಅವನ ಸಾಧನೆಯೇ ಎಂದು ಪ್ರಶ್ನಿಸಿದರು.
ಒಂದು ವೇಳೆ ಟಿಪ್ಪು ಜಯಂತಿ ಮಾಡಿದ್ದೇ ಆದರೆ ಅದು ಸಿದ್ದರಾಮಯ್ಯ ಅವರ ಕೊನೆಯ ಜಯಂತಿ ಆಗಲಿದೆ ಎಂದು ಕಿಡಿಕಾರಿದರು. ಸ್ವಸ್ಥ್ಯ ಸಮಾಜ ನಿರ್ಮಾಣಕ್ಕಾಗಿ, ಬಡಜನರ ಅಭಿವೃದ್ಧಿಗಾಗಿ ನರೇಂದ್ರ ಮೋದಿ ನಾಯಕತ್ವದ ಕೇಂದ್ರ ಸರ್ಕಾರ ಉಚಿತವಾಗಿ ಗ್ಯಾಸ್ ಸಿಲಿಂಡರ್ ವಿತರಿಸುತ್ತಿದೆ ಎಂದು ಹೇಳಿದರು.
ಶಾಸಕರಾದ ಕೆ.ಜಿ.ಬೋಪಯ್ಯ, ಅಪ್ಪಚ್ಚು ರಂಜನ್ ಮಾತನಾಡಿದರು. ಬಿಜೆಪಿ ನಗರಾಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಮುಖಂಡ ವೈ.ಯಂ.ಕರುಂಬಯ್ಯ, ಕುಮಾರಪ್ಪ, ಮೋಹನ ದಾಸ್, ಮಹೇಶ್, ಓಡಿಯಪ್ಪನ ವಿಮಲಾವತಿ, ಚೈತ್ರಾ ಭಾರತೀಶ್, ಆರ್.ಎಂ.ಸಿ ಅಧ್ಯಕ್ಷ ಸತೀಶ್, ಸೋಮವಾರಪೇಟೆ ನಗರ ಸ್ಥಾನೀಯ ಸಮಿತಿ ಅಧ್ಯಕ್ಷ ಸೋಮೇಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.