ADVERTISEMENT

ತಡೆಗೋಡೆ ಬಿರುಕು; ನಾಗರಿಕರಲ್ಲಿ ಆತಂಕ

​ಪ್ರಜಾವಾಣಿ ವಾರ್ತೆ
Published 8 ಜುಲೈ 2013, 8:46 IST
Last Updated 8 ಜುಲೈ 2013, 8:46 IST

ಮಡಿಕೇರಿ: ಪ್ರಸ್ತುತ ವರ್ಷ ಜೂನ್ ತಿಂಗಳಿನಲ್ಲಿ ದಾಖಲೆ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಮಡಿಕೇರಿ ನಗರದಲ್ಲಿ ಮನೆ ಹಾನಿ, ಬರೆಕುಸಿತದಂತಹ ವರದಿಗಳು ಕೇಳಿಬರುತ್ತಿವೆ. ನಗರದ ರೇಸ್  ಕೋರ್ಸ್ ರಸ್ತೆಯ ತೋಡಿಗೆ ಇತ್ತೀಚೆಗೆ ನಿರ್ಮಿಸಲಾದ ಸಿಮೆಂಟ್ ತಡೆಗೋಡೆ ವಾಲಿದ್ದು, ಮೇಲಿನ ಭಾಗದಲ್ಲಿ ವಾಸವಿರುವ ಜನರು ಆತಂಕಕ್ಕೆ ಒಳಗಾಗಿದ್ದಾರೆ.

ಕಳೆದ ವರ್ಷ ಮಳೆಗಾಲದ ಸಂದರ್ಭದಲ್ಲಿಯೂ ಈ ಭಾಗದಲ್ಲಿ ಸಾಕಷ್ಟು ಹಾನಿಗೊಳಗಾಗಿತ್ತು. ತೋಡಿನ ಪಕ್ಕದಲ್ಲಿದ್ದ ಬಾಳೆ ಗಿಡಗಳು, ಇತರ ಸಸ್ಯಗಳು ಕೊಚ್ಚಿಕೊಂಡು ಹೋಗಿದ್ದವು. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸುಮಾರು 30ಲಕ್ಷಕ್ಕೂ ಹೆಚ್ಚಿನ ಮೊತ್ತದಲ್ಲಿ ಸಿಮೆಂಟ್ ತಡೆಗೋಡೆ ನಿರ್ಮಿಸಲಾಯಿತು.

ಆದರೆ, ತಡೆಗೋಡೆ ನಿರ್ಮಾಣವಾಗಿ ತಿಂಗಳು ಕಳೆಯುವಷ್ಟರಲ್ಲಿ ಮಳೆಗಾಲ ಶುರುವಾಗಿದೆ. ಮಡಿಕೇರಿ ಸುರಿಯುತ್ತಿರುವ ವಿಪರೀತ ಮಳೆಯಿಂದಾಗಿ ಹಳ್ಳ ಕೊಳ್ಳಗಳು, ಚರಂಡಿ, ತೋಡುಗಳು ತುಂಬಿಹರಿಯುತ್ತಿವೆ. ನೀರಿನ ರಭಸಕ್ಕೆ ತೋಡಿನ ಪಕ್ಕದ ಮಣ್ಣಿನ ಗುಡ್ಡೆ ಕೊಚ್ಚಿಕೊಂಡು ಹೋಗುತ್ತಿದೆ. ಮಣ್ಣಿನ ಬೆಟ್ಟದ ಮೇಲೆ ವಾಸವಿರುವ ನಿವಾಸಿಗಳು ಹಗಲು- ರಾತ್ರಿ ಎನ್ನದೇ ಆತಂಕದಲ್ಲಿ ದಿನಗಳನ್ನು ಕಳೆಯುತ್ತಿದ್ದಾರೆ.

ಅವೈಜ್ಞಾನಿಕ- ಆರೋಪ:
ನೀರು ಹರಿಯುವ ಪಕ್ಕದ ಪ್ರದೇಶದಲ್ಲಿ ಮಣ್ಣು ಜರೆಯುತ್ತದೆ. ಅದಕ್ಕಾಗಿ ಹೆಚ್ಚು ಆಳದಲ್ಲಿ ತಳಪಾಯ ಹಾಕಬೇಕು ಮತ್ತು ದಪ್ಪವಾದ ಕಬ್ಬಿಣದ ರಾಡ್‌ಗಳನ್ನು ಬಳಸಬೇಕು. ಆದರೆ, ಇಲ್ಲಿ ಇದ್ಯಾವುದನ್ನೂ ಮಾಡಲಾಗಿಲ್ಲ. ಈ ತಡೆಗೋಡೆಯನ್ನು ಕಾಟಾಚಾರಕ್ಕೆ ಎಂಬಂತೆ ಎಂಜಿನಿಯರ್‌ಗಳು ನಿರ್ಮಿಸಿದ್ದಾರೆ ಎಂದು ನಗರಸಭೆಯ ಮಾಜಿ ಸದಸ್ಯ ಬೇಬಿ ಮ್ಯಾಥ್ಯು ಅವರು ಅಭಿಪ್ರಾಯಪಟ್ಟರು.

`ನಗರಸಭೆಯ ಕಾಮಗಾರಿಗಳಿಗೆ ರಾಜ್ಯ ಸರ್ಕಾರದಿಂದ ಸಾಕಷ್ಟು ಅನುದಾನ ಹರಿದುಬಂದಿದೆ. ಇದಕ್ಕೆ ತಕ್ಕಂತೆ ಕಾಮಗಾರಿಗಳನ್ನು ಸಹ ಕೈಗೆತ್ತಿಕೊಳ್ಳಲಾಯಿತು. ಆದರೆ, ಗುಣಮಟ್ಟವನ್ನು ಕಾಯ್ದುಕೊಳ್ಳು ವುದರ ಬಗ್ಗೆ ಗಮನ ಹರಿಸಲಿಲ್ಲ. ಸಿಬ್ಬಂದಿ ಕೊರತೆ ಕೂಡ ಇದಕ್ಕೆ ಪ್ರಮುಖ ಕಾರಣವಾಗಿದೆ. ಕೇವಲ 2-3 ಜನ ಎಂಜಿನಿಯರ್‌ಗಳಿಂದ ಎಷ್ಟು ತಾನೇ ನಿರೀಕ್ಷಿಸಬಹುದು' ಎಂದು ಅವರು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.