ವಿರಾಜಪೇಟೆ: ವಿರಾಜಪೇಟೆ ತಾಲ್ಲೂಕು ಕಚೇರಿಯಲ್ಲಿ ನಿರಂತರವಾಗಿ ನಡೆಯು ತ್ತಿರುವ ಭ್ರಷ್ಟಾಚಾರವನ್ನು ತಡೆಗಟ್ಟುವಂತೆ ಒತ್ತಾಯಿಸಿ ಜಿಲ್ಲಾ ಸಾರ್ವಜನಿಕ ಹಿತ ರಕ್ಷಣಾ ಸಮಿತಿ ಸದಸ್ಯರು ಬುಧವಾರ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ವಿರಾಜಪೇಟೆ ತಾಲ್ಲೂಕು ಕಚೇರಿಯಲ್ಲಿ ಯಾವುದೇ ಕಡತಗಳು ವಿಲೇವಾರಿ ಯಾಗುತ್ತಿಲ್ಲ, ಇದರಿಂದ ಕಚೇರಿಗೆ ಬರುವ ಹಿಡುವಳಿದಾರರಿಗೆ ತೊಂದರೆಯಾಗುತ್ತಿದೆ. ಆರ್ಟಿಸಿಯನ್ನು ನಿಗದಿತ ಸಮಯದಲ್ಲಿ ವಿತರಣೆ ಮಾಡುತ್ತಿಲ್ಲ, ಸಿಬ್ಬಂದಿಯನ್ನು ಕೇಳಿದರೆ ಕಂಪ್ಯೂಟರ್ ದುರಸ್ತಿ ಎಂಬ ಸಬೂಬು ಹೇಳಿ ನುಣುಚಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಕಚೇರಿ ಸಿಬ್ಬಂದಿಗೆ ಪರೋಕ್ಷವಾಗಿ ಹಣ ನೀಡಿದರೆ ತಕ್ಷಣ ಆರ್ಟಿಸಿ ದೊರೆಯುತ್ತಿದೆ ಎಂದು ದೂರಿದ ಸದಸ್ಯರು ತಹಶೀಲ್ದಾರ್ ಹನುಮಂತರಾಯಪ್ಪ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ತಹಶೀಲ್ದಾರ್ ಭರವಸೆ
ತಹಶೀಲ್ದಾರ್ ಹನುಂತರಾಯಪ್ಪ ಮಾತನಾಡಿ `ತಾಲ್ಲೂಕು ಕಚೇರಿಯಲ್ಲಿ ಲಂಚ ಕೇಳುವ ಸಿಬ್ಬಂದಿಯನ್ನು ಪತ್ತೆ ಹಚ್ಚಿ ದೂರು ನೀಡಿದರೆ ಕ್ರಮ ಕೈಗೊಳ್ಳ ಲಾಗುವುದು. ಕಂಪ್ಯೂಟರ್ ದುರಸ್ತಿಯ ಸಮಸ್ಯೆಯಿಂದಾಗಿ ಆರ್ಟಿಸಿ ವಿತರಣೆ ವಿಳಂವಾಗುತ್ತಿದ್ದು, ಇದನ್ನು ತಿಂಗಳೊಳಗೆ ಸರಿಪಡಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂತೆಗೆದುಕೊಂಡರು.
ಸಮಿತಿಯ ಜಿಲ್ಲಾ ಅಧ್ಯಕ್ಷ ಕಟ್ಟಿಮಂದಯ್ಯ, ತಾಲ್ಲೂಕು ಅಧ್ಯಕ್ಷ ಕೇಚಮಾಡ ಕುಶಾಲಪ್ಪ, ಜಿಲ್ಲಾ ಸಮಿತಿ ಕಾರ್ಯದರ್ಶಿ ಎ. ಹರೀಶ್, ಕೆ.ಎನ್.ಬೋಪಣ್ಣ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.