ಗೋಣಿಕೊಪ್ಪಲು: ದಕ್ಷಿಣ ಕೊಡಗಿನಲ್ಲಿ ಕಾಡಾನೆ ಹಾವಳಿ ಮುಂದುವರಿದಿದ್ದು ಬೆಳೆದು ನಿಂತಿರುವ ಭತ್ತದ ಫಸಲನ್ನು ಕಾಡನೆಗಳು ತಿಂದು ನಷ್ಟ ಉಂಟು ಮಾಡುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ವೆಸ್ಟ್ ನೆಮ್ಮಲೆ ರೈತ ಮಾಣೀರ ಪಿ. ಅಯ್ಯಪ್ಪ ಅವರ 4.5 ಎಕರೆ ಗದ್ದೆಯಲ್ಲಿ ಬೆಳೆದಿದ್ದ ಭತ್ತದ ಫಸಲನ್ನು ಸಂಪೂರ್ಣ ಹಾಳು ಮಾಡಿವೆ. ಕುರ್ಚಿ ಗ್ರಾಮದ ಭತ್ತದ ಗದ್ದೆಗಳ ಮೇಲೂ ದಾಳಿ ಮಾಡಿವೆ. ಕಾಡಾನೆಯ ಹಿಂಡು ಸಮೀಪದ ಬ್ರಹ್ಮಗಿರಿ ಬೆಟ್ಟದ ಅರಣ್ಯದಲ್ಲಿ ಬೀಡುಬಿಟ್ಟಿದ್ದು ಸಂಜೆಯ ವೇಳೆಗೆ ಗುಂಪಾಗಿ ಸುತ್ತಮುತ್ತಲಿನ ರೈತರ ಗದ್ದೆಗಳಿಗೆ ದಾಳಿ ಮಾಡಿ ಫಸಲನ್ನು ನಾಶ ಮಾಡುತ್ತಿವೆ ಎಂದು ದೂರಿದ್ದಾರೆ.
ಕಾಡಾನೆ ಹಿಂಡು ಕುರ್ಚಿ, ಬೀರುಗ, ವೆಸ್ಟ್ ನೆಮ್ಮಲೆಯ ಭಾಗದಲ್ಲಿ ಸಂಚರಿಸುತ್ತಿದ್ದು ನಿತ್ಯ ಸ್ಥಳವನ್ನು ಬದಲಾಯಿಸುತ್ತಿವೆ ಇದು ಅರಣ್ಯ ಇಲಾಖೆ ಸಿಬ್ಬಂದಿಗೂ ತಲೆನೋವಾಗಿದೆ. ಕಾಫಿ ತೋಟ ಫಸಲನ್ನು ತಿಂದು ನಷ್ಟ ಪಡಿಸುತ್ತಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಗದ್ದೆಗಳಿಗೆ ಶ್ರೀಮಂಗಲ ಹೋಬಳಿಯ ಕಂದಾಯ ಪರಿವೀಕ್ಷಕ ಪಿ.ಎಸ್. ದೇವಯ್ಯ, ಕೃಷಿ ಅಧಿಕಾರಿ ಶಿವಯ್ಯಗೌಡ ಈಚೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಜೆಡಿಎಸ್ ಜಿಲ್ಲಾ ಅಧ್ಯಕ್ಷ ಸಂಕೇತ್ ಪೂವಯ್ಯ, ರಾಜ್ಯ ರೈತ ಸಂಘದ ಜಿಲ್ಲಾ ಸಂಚಾಲಕ ಶ್ರೀಮಂಗಲದ ಚಿಮ್ಮಂಗಡ ಗಣೇಶ್, ಅಜ್ಜಮಾಡ ಚಂಗಪ್ಪ, ಬಾಚಮಾಡ ಭವಿ ಕುಮಾರ್, ಅಜ್ಜಮಾಡ ಕುಶಾಲಪ್ಪ, ಚಂಗುಲಂಡ ರಾಜಪ್ಪ, ಬೋಡಂಗಡ ಕಾರ್ಯಪ್ಪ ಅವರು ನಷ್ಟಕ್ಕೆ ಒಳಗಾದ ರೈತರಿಗೆ ಪರಿಹಾರ ವಿತರಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
* *
ಕಾಡಾನೆಯ ನಿರಂತರ ದಾಳಿಯಿಂದ ರೈತರು ಕಂಗಲಾಗಿದ್ದಾರೆ. ತಕ್ಷಣ ಪರಿಹಾರ ಬಿಡುಗಡೆಯಾಗಬೇಕು.
ಚಿಮ್ಮಂಗಡ ಗಣೇಶ್, ಜಿಲ್ಲಾ ಸಂಚಾಲಕ, ರೈತ ಸಂಘ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.