ಸೋಮವಾರಪೇಟೆ: ಮನಸ್ಸು ಶುದ್ಧವಾಗಬೇಕಾದರೆ ಸಾಮೂಹಿಕ ಧಾರ್ಮಿಕ ಆಚರಣೆಗಳಲ್ಲಿ ಭಾಗಿಯಾಗಬೇಕು ಎಂದು ಅರಕಲಗೋಡು ಮಠದ ಮಲ್ಲಿಕಾರ್ಜುನ ಸ್ವಾಮಿಗಳು ಹೇಳಿದರು.
ಶ್ರಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ವಲಯ ಪ್ರಗತಿ ಬಂಧು ಸ್ವ ಸಹಾಯ ಒಕ್ಕೂಟ ಮತ್ತು ನೇರುಗಳಲೆ ಶ್ರಿ ಸತ್ಯನಾರಾಯಣ ಪೂಜಾ ಸಮಿತಿ ಆಶ್ರಯದಲ್ಲಿ ಮಂಗಳವಾರ ತಣ್ಣೀರುಹಳ್ಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಪ್ರತಿನಿತ್ಯ ಒಂದು ಬಾರಿಯಾದರೂ ಭಗವಂತನ ನಾಮಸ್ಮರಣೆ ಮಾಡಿದರೆ ನೂರು ದೋಷಗಳು ಪರಿಹಾರವಾಗುತ್ತವೆ. ದೇಶದ ಅನ್ನದಾತ ಸುಭಿಕ್ಷೆಯಾಗಿದ್ದರೆ, ರಾಷ್ಟ್ರವೂ ಸುಭಿಕ್ಷೆಯಾಗುತ್ತದೆ. ಎಲ್ಲಾ ಕಡೆ ಭಗವಂತನನ್ನು ಪೂಜಿಸಿದರೆ ಸುಭಿಕ್ಷೆಯನ್ನು ಅವನು ಕರುಣಿಸುತ್ತಾನೆ ಎಂದರು.
ನೂರಾರು ಭಕ್ತಾದಿಗಳ ಸಮ್ಮುಖದಲ್ಲಿ ಸತ್ಯನಾರಾಯಣ ಪೂಜೆಯನ್ನು ಶಾಂತಳ್ಳಿ ಗಣೇಶ್ ಭಟ್ ನೆರವೇರಿಸಿದರು. ಅಧ್ಯಕ್ಷತೆಯನ್ನು ಶ್ರಿ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಮಸಗೋಡು ಸುರೇಶ್ ವಹಿಸಿದ್ದರು. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನಾಧಿಕಾರಿ ಕೆ.ಚಿದಾನಂದ, ಪತ್ರಿಕಾ ಭವನ ಅಧ್ಯಕ್ಷ ಎಸ್.ಮಹೇಶ್, ಮಸಗೋಡು ಗ್ರಾಮದ ಪ್ರಗತಿಪರ ಕೃಷಿಕ ಎ.ಎಲ್.ಮಂಜುನಾಥ್ ಉಪಸ್ಥಿತರಿದ್ದರು.
ವಲಯ ಮೇಲ್ವಿಚಾರಕ ನಾಗರಾಜ್ ಸ್ವಾಗತಿಸಿ, ಸಮಿತಿಯ ಉಪಾಧ್ಯಕ್ಷ ಎಸ್.ಎಂ.ಡಿಸಿಲ್ವಾ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.