ADVERTISEMENT

ದೇವಳ ಲೋಕಾರ್ಪಣೆಗೆ ಸಜ್ಜು

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2014, 6:05 IST
Last Updated 3 ಮಾರ್ಚ್ 2014, 6:05 IST

ಸೋಮವಾರಪೇಟೆ: ತಾಕೇರಿ ಗ್ರಾಮದಲ್ಲಿ ನೂರಾರು ವರ್ಷಗಳ ಇತಿಹಾಸವಿದೆ ಎಂದು ಹೇಳಲಾದ ಉಮಾಮಹೇಶ್ವರ ದೇವಾಲಯದ ಜೀರ್ಣೋದ್ಧಾರ ಕಾರ್ಯ ಭರದಿಂದ ಸಾಗಿದ್ದು, ಲೋಕಾರ್ಪಣೆಗೆ ಸಿದ್ಧವಾಗುತ್ತಿದೆ.

ಕೇರಳ ಹಾಗೂ ಮಂಗಳೂರು ದೇವಾಲಯಗಳ ಶೈಲಿಯಲ್ಲಿ ನಿರ್ಮಾಣವಾಗುತ್ತಿರುವ ದೇವಸ್ಥಾನ ಸೋಮವಾರಪೇಟೆಯಿಂದ 9 ಕಿ.ಮೀ ದೂರದಲ್ಲಿರುವ ತಾಕೇರಿ ಗ್ರಾಮದ ಹೃದಯಭಾಗದಲ್ಲಿದೆ. ಎರಡು ವರ್ಷಗಳಿಂದ ದೇವಾಲಯದ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಮಾರ್ಚ್‌ 28ರಂದು ದೇವಾಲಯ ಲೋಕಾರ್ಪಣೆಯಾಗಲಿದೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ.

ಗ್ರಾಮದ 1.86 ಎಕರೆ ಪ್ರದೇಶದ ವಿಶಾಲ ಜಾಗದಲ್ಲಿ ದೇವಾಲಯ ನಿರ್ಮಾಣವಾಗುತ್ತಿದ್ದು, ಗರ್ಭಗುಡಿಯ ಕಲ್ಲುಗಳನ್ನು ಕಾರ್ಕಳದಿಂದ ತರಿಸಲಾಗಿದೆ. ಕಾರ್ಕಳದ ಶಿಲ್ಪಿ ಸದಾಶಿವ ಗುಡಿಗಾರ್ ಅವರು ದೇವರ ಮೂರ್ತಿಯನ್ನು ನಿರ್ಮಿಸಿದ್ದು, ಗರ್ಭಗುಡಿ, ಮುಖಮಂಟಪಗಳನ್ನು ಮಂಗಳೂರು ಹಾಗೂ ಕೇರಳ ರಾಜ್ಯದ ದೇವಾಲಯಗಳ ಮಾದರಿಯಲ್ಲಿ ನಿರ್ಮಿಸಲಾಗಿದೆ.

ಗ್ರಾಮಸ್ಥರು ಹಾಗೂ ದಾನಿಗಳ ಧನಸಹಾಯದಿಂದ ₨ 1.50 ಕೋಟಿ ವೆಚ್ಚದಲ್ಲಿ ದೇವಾಲಯ ನಿರ್ಮಾಣಗೊಳ್ಳುತ್ತಿದೆ. ಆ ಸ್ಥಳದಲ್ಲಿ ಈ ಹಿಂದೆ ಸಣ್ಣ ಗುಡಿಯೊಂದನ್ನು ನಿರ್ಮಿಸಿ ಪೂಜೆ ಸಲ್ಲಿಸಲಾಗುತ್ತಿತ್ತು.

ಮಳೆ,ಗಾಳಿಗೆ ದೇವಾಲಯ ಶಿಥಿಲಾವಸ್ಥೆಗೆ ತಲುಪಿದ್ದರಿಂದ ನೂತನವಾಗಿ ದೇವಾಲಯ ನಿರ್ಮಿಸಲು ಗ್ರಾಮಸ್ಥರು ಮುಂದಾದರು. ಅದರಂತೆ ನೆಲ್ಯಾಡಿಯ ಶ್ರೀಧರ್ ಘೋರೆ ಅವರ ಮೂಲಕ ಅಷ್ಟಮಂಗಲ ಪ್ರಶ್ನೆ ನೋಡಿದಾಗ, ಇದುವರೆಗೂ ಈಶ್ವರ ದೇವಾಲಯ ಎಂದೇ ನಂಬಲಾಗಿದ್ದ ಈ ಸ್ಥಳ, ಅಷ್ಟಮಂಗಲ ಪ್ರಶ್ನೆಯಲ್ಲಿ ಉಮಾಮಹೇಶ್ವರ ದೇವರ ಸನ್ನಿಧಿ ಎಂಬದು ತಿಳಿದುಬಂದಿತು. 

ದೇವಾಲಯದ ನಿರ್ಮಾಣಕ್ಕೆ ಧನಸಹಾಯ ಮಾಡಲು ಇಚ್ಛಿಸುವವರು ಸೋಮವಾರಪೇಟೆಯ ಕೆನರಾ ಬ್ಯಾಂಕ್ ಖಾತೆ ಸಂಖ್ಯೆ 0563101014642ಗೆ ಸಂದಾಯ ಮಾಡಬಹುದು ಎಂದು ದೇವಾಲಯ ಸಮಿತಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.