ADVERTISEMENT

ನಾಪೋಕ್ಲು: ಸಿಎನ್‌ಸಿಯಿಂದ ಮಾನವ ಸರಪಳಿ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2012, 7:50 IST
Last Updated 2 ಅಕ್ಟೋಬರ್ 2012, 7:50 IST

ನಾಪೋಕ್ಲು: ಕೊಡವ ಜನಾಂಗದ ಹಕ್ಕೋತ್ತಾಯದ ಬಗ್ಗೆ ಸರ್ಕಾರದ ಗಮನ ಸೆಳೆಯಲು ಕೊಡವ ನ್ಯಾಷನಲ್ ಕೌನ್ಸಿಲ್‌ನ ಮುಖಂಡ ಎನ್.ಯು.ನಾಚಪ್ಪ ನೇತೃತ್ವದಲ್ಲಿ ನಾಪೋಕ್ಲು ಪಟ್ಟಣದಲ್ಲಿ ಸೋಮವಾರ ಮಾನವ ಸರಪಳಿ ರಚಿಸಲಾಯಿತು.

ಇಲ್ಲಿನ ಮಾರುಕಟ್ಟೆ ಆವರಣದಿಂದ ಸಾಂಪ್ರದಾಯಿಕ ಉಡುಪು ಹಾಗೂ ಕೋವಿಯೊಂದಿಗೆ ಸಿ.ಎನ್.ಸಿ. ನೇತೃತ್ವದಲ್ಲಿ ಮೆರವಣಿಗೆ ನಡೆಸಿ ಮಾನವ ಸರಪಳಿ ರಚಿಸಿದರು. ಎನ್.ಯು. ನಾಚಪ್ಪ ಮಾತನಾಡಿ, ಭಾರತೀಯ ಆರ್ಮ್ಸ ಆ್ಯಕ್ಟ್ ಸೆಕ್ಷನ್ 3 ಮತ್ತು 4ರ ಪ್ರಕಾರ ಕೊಡಗು ಜಿಲ್ಲೆಯಲ್ಲಿ ಕೊಡವರು ಕೋವಿ ಹೊಂದಲು ವಿನಾಯತಿ ಪ್ರಮಾಣ ಪತ್ರ ಹೊಂದಿದ್ದು, ಇದನ್ನು 1959ರಲ್ಲಿ ಪಾರ್ಲಿಮೆಂಟ್ ವಿಶೇಷ ಕೇಂದ್ರ ಶಾಸನದ ಪ್ರಕಾರ ವಿತರಿಸಲಾಗಿದೆ. ಈ ಹಕ್ಕನ್ನು ಯಾರಾದರೂ ಅವಹೇಳನ ಮಾಡಿದರೆ ಅಥವಾ ದಾರಿ ತಪ್ಪಿಸುವ ಸುತ್ತೋಲೆ ಹೊರಡಿಸಿದರೆ ಅದು ಪಾರ್ಲಿಮೆಂಟ್ ಶಾಸನಕ್ಕೆ ಅವಮಾನ ಮಾಡಿದಂತೆ ಎಂದರು.

ಕೊಡಗಿನ ಜಮ್ಮಾ ಜಾಗವನ್ನು ಯಾರಿಗೂ ಪರಭಾರೆ ಮಾಡಬಾರದು. ಜಾಗವನ್ನು ಮಾರಾಟ ಮಾಡಿದಲ್ಲಿ ಕೊಡಗಿನಲ್ಲಿ ಕೊಡವರ ಅಸ್ತಿತ್ವ ಇಲ್ಲದಂತಾಗುವ ಪರಿಸ್ಥಿತಿ ಬಂದೊದಗಬಹುದು ಎಂದರು. ಬಳಿಕ ಕೊಡವ ಹಕ್ಕುಗಳ ಬಗ್ಗೆ ಸಿ.ಎನ್.ಸಿ ಸದಸ್ಯರಿಗೆ ಪ್ರಮಾಣವಚನ ಬೋಧಿಸಲಾಯಿತು.

ಕುಂಡ್ಯೋಳಂಡ ರಮೇಶ್ ಮುದ್ದಯ್ಯ, ಕಲಿಯಂಡ ವಿಠಲ ಮಾತನಾಡಿದರು. ಕುಲ್ಲೇಟಿರ ಅರುಣ್ ಬೇಬ ಮಣವಟೀರ ಜಗದೀಶ್, ಚಿಯಕಪೂವಂಡ ಮನು ಅರೆಯಡ ಗಿರೀಶ್, ಕಾಟುಮಣಿಯಂಡ ಉಮೇಶ್ ಮುಂಡಂಡ ಶಾಂತ ಅಯ್ಯಣ್ಣ, ಬಿದ್ದಾಟಂಡ ದಿನೇಶ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.