ADVERTISEMENT

ನಾಲೆ ಜಾಗ ತೆರವಿಗೆ ವಿಳಂಬ

ನ್ಯಾಯಾಂಗ ನಿಂದನೆ: ದೂರು ದಾಖಲಿಸಲು ತೀರ್ಮಾನ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2013, 9:50 IST
Last Updated 14 ಡಿಸೆಂಬರ್ 2013, 9:50 IST

ಮಡಿಕೇರಿ: ಶ್ರೀಮಂಗಲ ಭಾಗದಲ್ಲಿ ಮಳೆಗಾಲದಲ್ಲಿ ಪ್ರವಾಹ ಭೀತಿಯನ್ನು ತಡೆಗಟ್ಟಲು ಈ ಹಿಂದೆಯೇ ನಿರ್ಮಿಸಿದ್ದ ನಾಲೆ ಜಾಗದ ಒತ್ತುವರಿ ತೆರವಿಗೆ ಹೈಕೋರ್ಟ್‌ ಸೂಚನೆ ನೀಡಿದ್ದರೂ, ಈ ಬಗ್ಗೆ ಕ್ರಮಗೊಳ್ಳದ ಜಿಲ್ಲಾಡಳಿತದ ವಿರುದ್ಧ ಪುನಃ ಕೋರ್ಟ್‌ಗೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗುವುದು ಎಂದು ಶ್ರೀಮಂಗಲ– ಶೆಟ್ಟಿಗೇರಿಯ ರೇವತಿ ಚಂಗಪ್ಪ ತಿಳಿಸಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರವಾಹ ಭೀತಿಯಿಂದ ತತ್ತರಿಸುತ್ತಿದ್ದ ಜನರನ್ನು ರಕ್ಷಿಸಲು ಈ ಹಿಂದೆಯೇ ನಾಲೆ ನಿರ್ಮಿಸಿ ಮಳೆಯ ನೀರು ಲಕ್ಷ್ಮಣ ತೀರ್ಥ ನದಿಗೆ ಹೋಗುವಂತೆ ಮಾಡಲಾಗಿತ್ತು ಎಂದರು. 

ಆದರೆ ಇತ್ತೀಚಿನ ದಿನಗಳಲ್ಲಿ ಹಲವು ವ್ಯಕ್ತಿಗಳು ಈ ಜಾಗವನ್ನು ಒತ್ತುವರಿ ಮಾಡಿಕೊಂಡಿರುವುದರಿಂದ ಈ ಭಾಗದ ಜನರಿಗೆ ತೊಂದರೆಯಾಗುತ್ತಿದೆ. ಇದನ್ನು ತೆರವುಗೊಳಿಸುವ ಭರವಸೆಗಳು ಈಡೇರದ ಹಿನ್ನೆಲೆಯಲ್ಲಿ ಹೈಕೋರ್ಟ್‌ಗೆ 2012ರಲ್ಲಿ ಅರ್ಜಿ ಸಲ್ಲಿಸಲಾಗಿತ್ತು.

ಇದನ್ನು ಪರಿಗಣಿಸಿದ ನ್ಯಾಯಾಲಯ, ಒತ್ತುವರಿ ಜಾಗದ ಸರ್ವೆಗೆ ಸೂಚಿಸಿದ್ದರಿಂದ ಆಗಿನ ಜಿಲ್ಲಾಧಿಕಾರಿ ಸೇರಿದಂತೆ ಪ್ರಮುಖ ಅಧಿಕಾರಿಗಳು ಸರ್ವೆ ಕಾರ್ಯ ಮಾಡಿಸಿ, ಈ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು ಎಂದರು.

ಈ ಮಾಹಿತಿ ಆಧಾರ ಮೇಲೆ ಒತ್ತುವರಿ ಜಾಗವನ್ನು ತೆರವುಗೊಳಿಸುವಂತೆ ಸೂಚಿಸಲಾಗಿತ್ತು. ಇದುವರೆಗೆ ಜಿಲ್ಲಾಡಳಿತ ಯಾವುದೇ ಕ್ರಮಕೈಗೊಂಡಿಲ್ಲ. ಡಿ.23ರಂದು ನಡೆಯಲಿರುವ ಜಿಲ್ಲಾಧಿಕಾರಿ ಅವರ ಕೋರ್ಟ್‌ಗೆ ಹಾಜರಾಗುವಂತೆ ಜಿಲ್ಲಾಧಿಕಾರಿ ಅವರು ಸೂಚಿಸಿದ್ದಾರೆ ಎಂದರು.

ಈ ಹಿನ್ನೆಲೆಯಲ್ಲಿ ಹೈಕೋರ್ಟ್‌ ನೀಡಿದ ಆದೇಶವನ್ನು ಉಲ್ಲಂಘಿಸಿರುವ ಜಿಲ್ಲಾಡಳಿತದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.

ಶ್ರೀಮಂಗಲ ಕಾವೇರಿ ಬಡಾವಣೆಯ ನಿವಾಸಿಗಳಾದ ಶ್ರೀಪತಿ, ಕೆ.ಸಿ. ದೇವಯ್ಯ, ವಾಸು, ಕಾವೇರಮ್ಮ, ಶಾರದಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.