ವಿರಾಜಪೇಟೆ: ವಿರಾಜಪೇಟೆಯ ಸೋಷಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಸ್ಥಳೀಯ ಶಾಖೆ ಸದಸ್ಯರು ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಮಂಗಳವಾರ ಇಲ್ಲಿಯ ಪಟ್ಟಣ ಪಂಚಾಯಿತಿ ಕಚೇರಿ ಮುಂದೆ ಧರಣಿ ನಡೆಸಿದರು.
ವಿರಾಜಪೇಟೆ ಖಾಸಗಿ ಬಸ್ ನಿಲ್ದಾಣದಿಂದ ಗೋಣಿಕೊಪ್ಪ ರಸ್ತೆಗೆ ಹೋಗುವ ಸುಣ್ಣದ ಬೀದಿಯ ಕಾಂಕ್ರೀಟ್ ರಸ್ತೆ ಕಳಪೆಯಾಗಿದೆ. ರಸ್ತೆ ಸಂಚಾರದ ಆರಂಭದಿಂದಲೇ ಗುಂಡಿಗಳು ಕಾಣಿಸುತ್ತಿವೆ. ಗುತ್ತಿಗೆದಾರರ ಬಿಲ್ ತಡೆ ಹಿಡಿಯಬೇಕು ಎಂದು ಆಗ್ರಹಿಸಿದರು.
ಪಟ್ಟಣ ಪಂಚಾಯಿತಿ ನಾಗರಿಕರಿಗೆ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ವಿಫಲಗೊಂಡಿದೆ. ಪಟ್ಟಣದ ಜನತೆಗೆ ನಲ್ಲಿ ನೀರು ಸಮರ್ಪಕವಾಗಿ ಪೂರೈಕೆಯಾಗದಿದ್ದರೂ ಪಂಚಾಯಿತಿ ಆಡಳಿತ ನೀರು ಪೂರೈಕೆಗೆ ಮೀಟರ್ ಅಳವಡಿಸಲು ಹೊರಟಿರುವುದಕ್ಕೆ ಸಂಘಟನೆಯ ವಿರೋಧವಿದೆ.
ಪಂಚಾಯಿತಿ ಪಟ್ಟಣ ನೈರ್ಮಲ್ಯ ಕುರಿತು ನಿರ್ಲಕ್ಷ್ಯ ತಾಳಿದೆ. ಮುಖ್ಯ ಬೀದಿಗಳಲ್ಲಿ ಚರಂಡಿಯಲ್ಲಿ ದುರ್ವಾಸನೆ ಬರುತ್ತಿದೆ ಎಂದು ಸಂಘಟನೆ ದೂರಿದೆ.
ಪ್ರತಿಭಟನೆಯಲ್ಲಿ ಸಂಘಟನೆ ಅಧ್ಯಕ್ಷ ಏಜಾಸ್ ಅಹಮ್ಮದ್, ಕಾರ್ಯದರ್ಶಿ ಮಹಮ್ಮದ್ ರಾಫಿ, ಇಬ್ರಾಹಿಂ ಮತ್ತಿತರ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಪಟ್ಟಣ ಪಂಚಾಯಿತಿ ಕಚೇರಿ ಮುಂದೆ ಧರಣಿ ನಡೆಸಿದ ಕಾರ್ಯಕರ್ತರು ಪಂಚಾಯಿತಿ ಅಧ್ಯಕ್ಷ ವಿ.ಕೆ.ಸತೀಶ್ಕುಮಾರ್ ಹಾಗೂ ತಹಶೀಲ್ದಾರ್ ಹನುಮಂತಪ್ಪ ಅವರಿಗೆ ಮನವಿ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.