ADVERTISEMENT

ಪರವಾನಗಿ ಇಲ್ಲದೆ ವ್ಯಾಪಾರ; ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಜೂನ್ 2017, 9:25 IST
Last Updated 13 ಜೂನ್ 2017, 9:25 IST
ಮಡಿಕೇರಿ ನಗರಸಭೆ ಸಭಾಂಗಣದಲ್ಲಿ ಸೋಮವಾರ ಪಾಲ್ಗೊಂಡಿದ್ದ ಸದಸ್ಯರು
ಮಡಿಕೇರಿ ನಗರಸಭೆ ಸಭಾಂಗಣದಲ್ಲಿ ಸೋಮವಾರ ಪಾಲ್ಗೊಂಡಿದ್ದ ಸದಸ್ಯರು   

ಮಡಿಕೇರಿ: ಪರವಾನಗಿ ಇಲ್ಲದೆ. ನಗರದ ಎಲ್ಲೆಂದರಲ್ಲಿ ಮೀನು ಮಾರಾಟ ಕೇಂದ್ರಗಳು, ಹೋಟೆಲ್ ಸೇರಿದಂತೆ ವಿವಿಧ ವಾಣಿಜ್ಯ ಕಟ್ಟಡಗಳು ತಲೆ ಎತ್ತುತ್ತಿವೆ. ನಗರಸಭೆ ವತಿಯಿಂದ ಕೂಡಲೇ ಪರಿಶೀಲಿಸುವಂತೆ  ಪೌರಾಯುಕ್ತರಿಗೆ ಸೋಮವಾರ ನಗರಸಭೆ ಸದಸ್ಯರು ಒತ್ತಾಯಿಸಿದರು.

ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅಧ್ಯಕ್ಷತೆಯಲ್ಲಿ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರಾದ ಪಿ.ಡಿ.ಪೊನ್ನಪ್ಪ, ಮುಡಾ ಅಧ್ಯಕ್ಷ ಚುಮ್ಮಿ ದೇವಯ್ಯ ಈ ಕುರಿತು ಗಮನಸೆಳೆದರು.

‘ಮಂಗಳೂರು ರಸ್ತೆಯಲ್ಲಿ ಇರುವ ಹೋಟೆಲ್‌ ಒಂದಕ್ಕೆ ಉದ್ದಿಮೆ ಪರವಾನಿಗೆ ನೀಡುವಾಗ ನಿಯಮ ಪಾಲನೆಯಾಗಿಲ್ಲ. ಮೀನು ವ್ಯಾಪಾರ ಸ್ಟಾಲ್‌ಗಳು ಪರವಾನಗಿ ಇಲ್ಲದೆ ವ್ಯಾಪಾರ ನಡೆಸುತ್ತಿರುವುದು ಕಂಡುಬಂದಿದೆ. ಇವುಗಳ ಬಗ್ಗೆ ತನಿಖೆ ಆಗಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಹಾಗೂ ಪೌರಾಯುಕ್ತೆ ಬಿ.ಶುಭಾ ಅವರು ಈ ಕುರಿತು ಪರಿಶೀಲನೆ ನಡೆಸಿ, ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ನಗರಸಭೆ ಸದಸ್ಯ ಉದಯಕುಮಾರ್, ‘ಮಹದೇವಪೇಟೆ ರಸ್ತೆ ದುಸ್ಥಿತಿಗೆ ತಲುಪಿದೆ. ಒಳಚರಂಡಿ ಕಾಮಗಾರಿ ಹಾಗೂ ಇಂಟರ್‌ ಲಾಕ್ ಅಳವಡಿಸುವ ಕೆಲಸ ಆಗಿಲ್ಲ. ಇದರಿಂದ ಮಳೆ ಬಂದಾಗ ಜನರು ಓಡಾಡಲು ಸಮಸ್ಯೆ ಎದುರಿಸುವಂತಾಗಿದೆ’ ಎಂದು ಸಭೆಯ ಗಮನಸೆಳೆದರು.

ಸದಸ್ಯರಾದ ಪೀಟರ್ ಹಾಗೂ ಯತೀಶ್, ‘10 ದಿನಗಳಲ್ಲಿ ಕೆಲಸ ಆಗದಿದ್ದಲ್ಲಿ ನಗರಸಭೆ ಕಚೇರಿ ಮುಂದೆ ಧರಣಿ ಕೋರಲಾಗುವುದು’ ಎಂದು ಎಚ್ಚರಿಸಿದರು. ಸದಸ್ಯ ಅಮಿನ್ ಮೊಹಿಸಿನ್‌, ನಗರದಲ್ಲಿ ಕಾಮಾಲೆ ಸೋಂಕು ಹರಡುತ್ತಿರುವ ದೂರುಗಳಿವೆ.  ಆರೋಗ್ಯಾಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ, ವಾರ್ಡ್‌ಗಳಿಗೆ ಭೆೇಟಿ ನೀಡಿ ನೀರಿನ ಪರೀಕ್ಷೆಗಳನ್ನು ಕ್ರಮ ಬದ್ದವಾಗಿ ಮಾಡಬೇಕಿತ್ತು. ಇಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ’ ಎಂದು ಆರೋಪಿಸಿದರು.

ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಬಿ.ಗಣೇಶ್, ‘ಹಿಂದೆ ಸ್ಥಾಯಿ ಸಮಿತಿ ಸಭೆಯಲ್ಲಿ ಎಲ್ಲ ವಾರ್ಡ್‌ಗಳಿಗೆ ಭೇಟಿ ನೀಡಿ ವರದಿ ಸಿದ್ದಪಡಿಸಲು ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಈ ವರದಿಯು ಪೂರ್ಣ ವಿವರ ಒಳಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಡತ ವಿಲೇವಾರಿ ಅಭಿಯಾನ: ನಗರದಲ್ಲಿ ಸಾಕಷ್ಟು ವರ್ಷಗಳಿಂದ ಆಶ್ರಯ ಯೋಜನೆ ಹಾಗೂ ನೀರು, ವಿದ್ಯುತ್ ಸಂಬಂಧ ಅರ್ಜಿ ಸಲ್ಲಿಕೆಯಾಗಿದೆ. ಶೇ 50ರಷ್ಟು ಕಡತಗಳು ಬಾಕಿ ಇರುವುದು ಬೆಳಕಿಗೆ ಬಂದಿದೆ. ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು ಎಮದು ಸದಸ್ಯರು ಒತ್ತಾಯಿಸಿದರು.

ಮುಂದಿನ ದಿನಗಳಲ್ಲಿ ಕಡತ ವಿಲೇವಾರಿ ಅಭಿಯಾನ ನಡೆಸಬೇಕು ಎಂದು ಸದಸ್ಯರು ಒತ್ತಾಯಿಸಿದರು. ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಸದಸ್ಯರ ನಿರ್ಣಯಕ್ಕೆ ಒಪ್ಪಿಗೆ ಸೂಚಿಸಿದರು. ನಗರಸಭೆ ಉಪಾಧ್ಯಕ್ಷ ಪ್ರಕಾಶ್ ಹಾಜರಿದ್ದರು.

‘ವಾರ್ಡ್‌ ಅಭಿವೃದ್ಧಿ ಕಡೆಗಣಿಸಲಾಗಿದೆ’
ಮಡಿಕೇರಿ: ‘ನಮ್ಮನ್ನು ಅಮಾನತು ಪಡಿಸಿದ್ದ ಅವಧಿಯಲ್ಲಿ ವಾರ್ಡ್‌ನ ಅಭಿವೃದ್ಧಿಯನ್ನು ಅಧ್ಯಕ್ಷೆ ಕಡೆಗಣಿಸಿದ್ದಾರೆ’ ಎಂದು  ವೀಣಾಕ್ಷಿ ಹಾಗೂ ಶ್ರೀಮತಿ ಬಂಗೇರ ಆರೋಪಿಸಿದರು

‘ನಮ್ಮನ್ನು ಎರಡು ತಿಂಗಳು ವೈಯುಕ್ತಿಕ ದ್ವೇಷದಿಂದ ಅಮಾನತು ಮಾಡಲಾಗಿತ್ತು. ಆಗ ವಾರ್ಡ್‌ ಅಭಿವೃದ್ಧಿ ಕಡೆಗಣಿಸಲಾಗಿತ್ತು. ಇತರೆ ವಾರ್ಡ್‌ಗಳಿಗೆ ಸಿಕ್ಕಿರುವ ಪ್ರಾತಿನಿಧ್ಯ ನಮ್ಮ ವಾರ್ಡ್‌ಗೆ ಸಿಕ್ಕಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

* * 

ಪೌರಾಯುಕ್ತರು, ಅಧ್ಯಕ್ಷರ ನಡುವಿನ ವೈಮನಸ್ಸಿನಿಂದ ಅಭಿವೃದ್ಧಿ ಕುಂಠಿತವಾಗುತ್ತಿದೆ . ಪರಸ್ಪರ ಹೊಂದಾಣಿಕೆಯಿಂದ ಅಭಿವೃದ್ದಿ ಕೆಲಸಗಳು ಆಗಬೇಕಿದೆ
ಅಮೀನ್ ಮೊಹಿಸ್ಸಿನ್‌
ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.