ಮಡಿಕೇರಿ: ‘ಜಸ್ಟ್ ಆಸ್ಕಿಂಗ್ ಆಂದೋಲನದ ಪ್ರಮುಖ ಪ್ರಕಾಶ್ ರೈಗೆ ಕೆಲಸವಿಲ್ಲ. ಅದಕ್ಕೆ ರಾಷ್ಟ್ರದ ಅಭಿವೃದ್ಧಿಗಾಗಿ ನಿರಂತರ ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುತ್ತಿದ್ದಾರೆ’ ಎಂದು ನಟ ‘ಹುಚ್ಚ’ ವೆಂಕಟ್ ತಿರುಗೇಟು ನೀಡಿದರು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ರಾಜಕಾರಣವು ಸಿನಿಮಾದಲ್ಲಿ ಡೈಲಾಗ್ ಹೇಳಿದಂತೆ ಅಲ್ಲ. ರೈ ಸಿನಿಮಾದಲ್ಲಿ ಖಳನಾಯಕ. ಅದಕ್ಕೆ ಸಿನಿಮಾದಂತೆಯೇ ಡೈಲಾಗ್ ಹೇಳಿರಬೇಕು. ಮೋದಿ ಬಗ್ಗೆ ಮಾತನಾಡುವ ಯೋಗ– ಯೋಗ್ಯತೆ ಎರಡೂ ಆತನಿಗಿಲ್ಲ’ ಎಂದು ಎಚ್ಚರಿಸಿದರು.
‘ಯಾವ ಸಿನಿಮಾವೂ ಸಿಕ್ಕಿಲ್ಲ. ಅದಕ್ಕಾಗಿಯೇ ಮೋದಿ ವಿರುದ್ಧ ಟೀಕಿಸುತ್ತಾ ಕಾಲಹರಣ ಮಾಡುತ್ತಿದ್ದಾನೆ’ ಎಂದು ಏಕ ವಚನದಲ್ಲಿ ವಾಗ್ದಾಳಿ ನಡೆಸಿದರು.
‘ರಾಷ್ಟ್ರವನ್ನು ಮೋದಿ ಯಾವ ದಿಕ್ಕಿನೆಡೆಗೆ ಕೊಂಡೊಯ್ದಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳ ಬೇಕಿತ್ತು. ವಿದೇಶದವರೂ ಭಾರತೀಯ ಪ್ರಜೆಗಳಾಗಬೇಕೆಂದು ಬಯಸಿದ್ದಾರೆ. ಮೋದಿ ಅವರು ರಾಷ್ಟ್ರವನ್ನು ಪ್ರೀತಿಸುತ್ತಾರೆ’ ಎಂದು ಹೇಳಿದರು.
‘ಎಷ್ಟು ಮಂದಿ ಅಸಹಾಯಕರಿಗೆ ರೈ ನೆರವು ನೀಡಿದ್ದಾರೆ ಎಂಬುದರ ಮಾಹಿತಿ ನೀಡಲಿ. ಪ್ರಧಾನಿ ಸ್ಥಾನದಲ್ಲಿದ್ದವರು ಇಡೀ ರಾಷ್ಟ್ರದ ಜನರ ಹಿತಕಾಯಬೇಕು. ಅದು ಅಷ್ಟು ಸುಲಭದ ಕೆಲಸವಲ್ಲ. ಮೋದಿಯ ಬಗ್ಗೆ ಇನ್ಮುಂದೆ ಟೀಕಿಸಿದರೆ ಜನರೇ ಪ್ರಕಾಶ್ ರೈಗೆ ಕಲ್ಲು ಎಸೆಯುತ್ತಾರೆ’ ಎಂದು ಎಚ್ಚರಿಸಿದರು.
‘ಮತ ಮಾರಿಕೊಳ್ಳಬೇಡಿ’: ‘ಬೆಂಗಳೂರಿನ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದೇನೆ. ಕೇವಲ ₹1 ಲಕ್ಷ ಮಾತ್ರ ಖರ್ಚು ಮಾಡಲು ನಿರ್ಧರಿಸಿರುವೆ. ಆದರೆ, ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ಕೋಟಿ ಕೋಟಿ ಖರ್ಚು ಮಾಡಿ, ಗೆದ್ದ ಬಳಿಕ ಆ ಹಣವನ್ನೆಲ್ಲಾ ಅನ್ಯಮಾರ್ಗದಲ್ಲಿ ಗಳಿಸಲು ತುದಿಗಾಲ ಮೇಲೆ ನಿಂತಿದ್ದಾರೆ’ ಎಂದು ದೂರಿದರು. ‘ಹಣ, ಮದ್ಯಕ್ಕೆ ಯಾರೂ ಮತ ಮಾರಿಕೊಳ್ಳಬೇಡಿ’ ಎಂದು ಕೋರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.