ಮಡಿಕೇರಿ: ಕೊಡಗು ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಮಡಿಕೇರಿ ಅಚ್ಚುಮೆಚ್ಚಿನ ಸ್ಥಳವಾಗಿದೆ. ಪಶ್ಚಿಮ ಘಟ್ಟಗಳ ರಮಣೀಯ ದೃಶ್ಯವನ್ನು ಇಲ್ಲಿಂದ ಮನಸ್ಸೋಇಚ್ಛೆ ಸವಿಯ ಬಹುದು. ಆದರೆ, ನಿಸರ್ಗ ಸೌಂದರ್ಯದ ವೀಕ್ಷಣೆಗೆಂದು ಇಲ್ಲಿಗೆ ಬರುವ ಕೆಲವು ಪ್ರವಾಸಿಗರು ಇತರರಿಗೆ ಕಿರಿಕಿರಿ ಉಂಟು ಮಾಡುವಂತೆ ವರ್ತಿಸುತ್ತಿರುವುದು ಕಂಡು ಬಂದಿದೆ.
ಈಗಷ್ಟೇ ಬೇಸಿಗೆ ಕಾಲ ತನ್ನ ಪ್ರಖರವನ್ನು ತೋರುತ್ತಿದೆ. ಬಿಸಿಲ ಬೇಗೆಗೆ ಬೆಂದ ಇತರ ನಗರಗಳ ವಾಸಿಗಳಿಗೆ ಮಡಿಕೇರಿಯು ಕಾಶ್ಮೀರ ದಂತೆ ಕಾಣಿಸುತ್ತಿದೆ. ಇಲ್ಲಿನ ತಂಪಾದ ಹವೆಯನ್ನು ಅರಿಸಿ ದೂರದೂರದ ಊರುಗಳಿಂದ ಪ್ರವಾಸಿಗರು ಬರುವುದು ಸಾಮಾನ್ಯ.
ಹೀಗೆ ಬರುವ ಪ್ರವಾಸಿಗರಲ್ಲಿ ಕೆಲವರ ವರ್ತನೆಯು ಮೀತಿ ಮೀರುವಂತಿದೆ. ಅಕ್ಕಪಕ್ಕದ ಜನರಿಗೆ ಮುಜುಗರವನ್ನು ಉಂಟು ಮಾಡುವಂತಿದೆ. ವಾಹನಗಳಲ್ಲಿ ತೆರಳು ವಾಗ ಜೋರಾಗಿ ಕಿರುಚುವುದು, ಅಸಂಬದ್ಧವಾಗಿ ವರ್ತಿಸುವುದು ಕೂಡ ಕಂಡುಬರುತ್ತಿದೆ.
ರಾಜಾಸೀಟ್ ಉದ್ಯಾನದಲ್ಲಿ ಯಂತೂ ಇವರ ಹುಚ್ಚಾಟಕ್ಕೆ ಮಿತಿಯೇ ಇಲ್ಲ. ಗುಂಪು ಗುಂಪಾಗಿ ಬರುವ ಖಾಸಗಿ ಕಂಪೆನಿಗಳ ಉದ್ಯೋಗಿಗಳು, ಯುವಕ-ಯುವತಿ ಯರು ಕೂಗಾಟ, ಚೀರಾಟ ಹೇಳ ತೀರದು.
ಯುವಕರಿಗಿಂತ ತಾವೇನು ಕಮ್ಮಿ ಎಂದು ಯುವತಿಯರು ಕೂಡ ಸಾಥ್ ನೀಡುವುದು ಖೇದದ ಸಂಗತಿಯಾಗಿದೆ ಎಂದು ಸ್ಥಳೀಯ ನಿವಾಸಿ ರಾಜ್ ಹೇಳಿದರು.
ರಾಜಾಸೀಟ್ ಮಂಟಪದ ಬಳಿಯೇ ನಿಂತು ನಿಸರ್ಗ ಸೌಂದರ್ಯವನ್ನು ಸವಿಯಬಹುದು. ಆದರೆ, ಕೆಲವು ಪುಂಡ ಪ್ರವಾಸಿಗರು ಮಂಟಪದ ಕೆಳಗೆ ಇಳಿದು ಕಾಡಿನ ಮಧ್ಯೆ ನಡೆದು ಕೊಂಡು ಹೋಗಿ, ಗುಡ್ಡದ ತುದಿಗೆ ತಲುಪುತ್ತಾರೆ. ಇಲ್ಲಿಂದ ಆಯ ತಪ್ಪಿದರೆ ನೂರಾರು ಮೀಟರ್ ಕಣಿವೆಯೊಳಗೆ ಬಿದ್ದಂತೆ. ಇಂತಹ ಅವಘಡಗಳು ಸಂಭವಿಸಿದರೆ ಯಾರು ಹೊಣೆ ಎನ್ನುವುದನ್ನು ಪ್ರವಾಸಿಗರು ಯೋಚಿಸಬೇಕಾಗಿದೆ.
ಪಕ್ಕದಲ್ಲಿಯೇ ಇರುವ ಪುಟಾಣಿ ರೈಲಿನಲ್ಲಂತೂ ಪ್ರವಾಸಿಗರ ಕೇಕೇ ಎಲ್ಲೆ ಮೀರಿದ್ದನ್ನು ನೋಡಬಹುದು. ಚಲಿಸುವ ರೈಲಿನಿಂದ ಹೊರಗೆ ಇಣು ಕುವುದು, ರೈಲಿನ ಒಂದು ಬೋಗಿ ಯಿಂದ ಮತ್ತೊಂದು ಬೋಗಿಗೆ ಜಿಗಿಯುವುದು, ಕ್ಯಾಮೆರಾ ಹಿಡಿದು ಕೊಂಡು ಅಡ್ಡಡ್ಡ ಮಲಗಿ ಫೋಟೋ ತೆಗೆಯಲು ಪಡುವ ಕಸರತ್ತು ಎಲ್ಲವೂ ಅಪಾಯಕಾರಿ. ಇದರ ಬಗ್ಗೆ ಕನಿಷ್ಠ ಜ್ಞಾನವೂ ಪ್ರವಾಸಿಗರಿಗೆ ಇರುವುದಿಲ್ಲವೇ?
ಮಡಿಕೇರಿ ಸಮೀಪದ ಅಬ್ಬಿಫಾಲ್ಸ್ ಬಳಿಯೂ ಇಂತಹ ಹುಚ್ಚಾಟಗಳನ್ನು ನೋಡಬಹುದು. ಕಾಲು ಸೇತುವೆ ಕೆಳಗೆ ಇಳಿಯುವುದು, ಬೆಟ್ಟದ ತುದಿಗೆ ಹೋಗಲು ಪ್ರಯತ್ನಿಸುವುದು, ಇಂತಹ ಹತ್ತಾರು ಕಸರತ್ತುಗಳನ್ನು ಮಾಡುವ ಬೇಕಾದಷ್ಟು ಪ್ರವಾಸಿಗರು ಕಾಣುತ್ತಾರೆ.
ದುಬಾರೆ, ನಿಸರ್ಗಧಾಮ, ಇರ್ಫು ಫಾಲ್ಸ್ ಸೇರಿದಂತೆ ಜಿಲ್ಲೆಯ ಇತರೆ ಪ್ರವಾಸಿ ತಾಣಗಳಲ್ಲಿಯೂ ಇಂತಹ ಹುಚ್ಚಾಟಗಳನ್ನು ನೋಡಬಹುದು. ಇವುಗಳಿಗೆ ತಡೆ ಹಾಕಲು ಪೊಲೀಸರು ಕ್ರಮಕೈಗೊಳ್ಳಬೇಕು. ಪ್ರತಿಯೊಂದು ಪ್ರವಾಸಿ ಕೇಂದ್ರಗಳಲ್ಲಿ ಪೊಲೀಸರನ್ನು ನಿಯೋಜಿಸಬೇಕು ಎನ್ನುವುದು ಸಾರ್ವಜನಿಕರ ಬೇಡಿಕೆಯಾಗಿದೆ.
ಪ್ರವಾಸೋದ್ಯಮ ಬೆಳೆಯಬೇಕು ನಿಜ, ಜಿಲ್ಲೆಗೆ ಪ್ರವಾಸಿಗರ ಆಗಮನ ದಿಂದ ವ್ಯಾಪಾರ ವೃದ್ಧಿಯಾಗುತ್ತದೆ ಎನ್ನುವುದು ಕೂಡ ನಿಜ. ಆದರೆ, ಇದರ ಬದಲು ಸ್ಥಳೀಯರ ನೆಮ್ಮದಿ ಹಾಳುಮಾಡುವುದಾದರೆ ಇದ್ಯಾ ವುದೂ ಬೇಡ ಎನ್ನುವುದು ಅವರ ಅಭಿಪ್ರಾಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.