ನಾಪೋಕ್ಲು: ಪಟ್ಟಣ ಸತ್ತಮುತ್ತ ಬತ್ತದ ಪೈರಿಗೆ ಕಾಡು ಹಂದಿಗಳ ಕಾಟ ವಿಪರೀತವಾಗಿದೆ. ಪೈರು ಹೊಂಬಣ್ಣಕ್ಕೆ ತಿರುಗಿ ಕೊಯ್ಲಿಗೆ ಬರುವ ಹಂತದಲ್ಲಿದ್ದು, ಕಾಡು ಹಂದಿ ಕಾಟದಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.ಪಟ್ಟಣದಿಂದ ಕೇವಲ 1 ಕಿ.ಮೀ. ವ್ಯಾಪ್ತಿಯಲ್ಲಿರುವ ಬತ್ತದ ಗದ್ದೆಗಳಿಗೆ ಕಾಡು ಹಂದಿಗಳು ನುಗ್ಗಿ ಬೆಳೆ ನಾಶ ಮಾಡುತ್ತಿವೆ. ಇದರಿಂದಾಗಿ ರೈತರು ಮತ್ತಷ್ಟು ನಷ್ಟ ಅನುಭವಿಸುವಮತಾಗಿದೆ. ಬೆಳೆ ಕೈಗೆ ಸಿಗುವ ಹಂತದಲ್ಲಿ ಹಂದಿಗಳ ಉಪಟಳ ಹೆಚ್ಚಾಗಿದೆ.
ನಾಪೋಕ್ಲು ವ್ಯಾಪ್ತಿಯ ರೈತರಾದ ಸದ, ಕುಮಾರ, ರತ್ನ, ಪ್ರಕಾಶ, ಅಶೋಕ ಮತ್ತಿತರರ ಗದ್ದೆಗಳು ಕಾಡು ಹಂದಿ ದಾಳಿಗೆ ತುತ್ತಾಗಿವೆ. ಹತ್ತಾರು ಸಮಸ್ಯೆಗಳಲ್ಲಿ ಸಿಲುಕಿರುವ ರೈತರು ಬತ್ತ ಬೆಳೆಯುವಲ್ಲಿ ಆಸಕ್ತಿ ತೋರುತ್ತಿಲ್ಲ. ಇದಕ್ಕೆ ಕಾರ್ಮಿಕರ ಸಮಸ್ಯೆ, ರಸಗೊಬ್ಬರದ ಬೆಲೆ ಏರಿಕೆ, ಹವಾಮಾನದಲ್ಲಿ ಏರುಪೇರು ಮುಂತಾದ ಸಮಸ್ಯೆಗಳು ಇವೆ.
ವರ್ಷದಿಂದ ವರ್ಷಕ್ಕೆ ಬತ್ತ ಬೆಳೆಯುವವರ ಸಂಖ್ಯೆ ಇಳಿಮುಖಗೊಳ್ಳುತ್ತಿದೆ. ಇದರ ನಡುವೆಯೂ ಕೆಲವರು ಅಲ್ಲಲ್ಲಿ ಬತ್ತ ಬೆಳೆದಿದ್ದಾರೆ. ಈಗ ಆ ಬೆಳೆ ಕೂಡ ಕಾಡು ಪ್ರಾಣಿಗಳ ಪಾಲಾಗುತ್ತಿದೆ. ಇದರಿಂದ ರೈತರು ಚಿಂತಾಕ್ರಾಂತರಾಗಿದ್ದಾರೆ.
ಈ ಬಗ್ಗೆ ಮಾತನಾಡಿದ ರೈತ ಎ.ಎಂ. ಸದ, ಒಂದೂವರೆ ಎಕರೆ ಬತ್ತದ ಗದ್ದೆಯಲ್ಲಿ ತುಂಗಾ ತಳಿಯ ಬತ್ತ ಬೆಳೆದಿದ್ದೇನೆ. ಬತ್ತ ಬೆಳೆಯುವಲ್ಲಿ ಬಹಳಷ್ಟು ಖರ್ಚು ಆಗಿದೆ. ಈಗ ಕಾಡುಹಂದಿಯ ಉಪಟಳದಿಂದ ಪಸಲು ನಷ್ಟವಾಗುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.