ADVERTISEMENT

ಬದುಕಿಗೆ ಕ್ರೀಡೆ ದಾರಿ ತೋರಲಿ: ಬೋಪಯ್ಯ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2012, 10:14 IST
Last Updated 18 ಡಿಸೆಂಬರ್ 2012, 10:14 IST

ಗೋಣಿಕೊಪ್ಪಲು: ಜಿಲ್ಲೆಯಲ್ಲಿ ಹಾಕಿ ಜೊತೆಗೆ ಕ್ರಿಕೆಟ್ ಕೂಡ ಪ್ರಭಾವ ಬೀರುತ್ತಿದೆ. ಇದು ಮುಂದಿನ ಪೀಳಿಗೆಗೆ ಬದುಕಿನ ದಾರಿ ತೋರಲಿ ಎಂದು ವಿಧಾನಸಭೆ ಅಧ್ಯಕ್ಷ ಕೆ.ಜಿ. ಬೋಪಯ್ಯ ಆಶಿಸಿದರು.

ಬಾಳೆಲೆಯ ವಿಜಯಲಕ್ಷ್ಮಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಏಪ್ರಿಲ್‌ನಲ್ಲಿ ನಡೆಯಲಿರುವ ಅಡ್ಡೇಂಗಡ ವಕ್ಕ ಕ್ರಿಕೆಟ್ ಕಪ್ 2013ಕ್ಕೆ ಅಲ್ಲಿನ ಶ್ರೀ ಶ್ರೀ ಕಾಂಪ್ಲೆಕ್ಸ್‌ನಲ್ಲಿರುವ ನೂತನ ಕಚೇರಿಯನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು. ಕೊಡಗು ಕ್ರೀಡಾಪಟುಗಳು ಹಾಗೂ ಸೈನಿಕರ ತವರೂರು ಆಗಿದೆ. ಕ್ರೀಡೆಯಲ್ಲಿ ಇಂದು ಕೂಡ ಉತ್ತಮ ಸಾಧನೆಯನ್ನು ಮಾಡುತ್ತ ಬಂದಿದೆ. ಕೊಡವ ಕೌಟುಂಬಿಕ ಹಾಕಿ ಉತ್ಸವ ಜಗತ್ತನ್ನು ತನ್ನೆಡೆಗೆ ಸೆಳೆದು ಗಿನ್ನೀಸ್ ಬುಕ್‌ನಲ್ಲಿ ದಾಖಲಾಗಿರುವುದು ಇತಿಹಾಸ ಎಂದು ನುಡಿದರು.

ಅಡ್ಡೇಂಗಡ ಕುಟುಂಬ ಅಧ್ಯಕ್ಷ ಎ.ಜಿ. ಬೋಪಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಡ್ಡೇಂಗಡ ಕುಟುಂಬದ 33 ಮಾತ್ರ ಇತ್ತು. ಇಂತಹ ಕ್ರೀಡಾಕೂಟ ನಡೆಸಲು ಉತ್ಸುಕರಾಗಿದ್ದೇವೆ. ಈ ಬಾರಿ ಕ್ರೀಡಾಕೂಟಕ್ಕೆ 300 ಕೊಡವ ಕುಟುಂಬದ ತಂಡವನ್ನು ಆಡಿಸುವ ಮೂಲಕ ಕ್ರೀಡೆಗೆ ಉತ್ತೇಜನ ನೀಡಲಾಗುವುದು ಎಂದು ಹೇಳಿದರು.

ಬಾಳೆಲೆಯಲ್ಲಿ ಈ ಕ್ರೀಡಾಕೂಟ ನಡೆಯುತ್ತಿರುವುದರಿಂದ ಕೊಡವ ಕ್ರಿಕೆಟ್ ಅಕಾಡೆಮಿಗೆ ತಾಂತ್ರಿಕ ವ್ಯವಸ್ಥೆಯನ್ನು ನಿಭಾಯಿಸುವ ಕೆಲಸ ಮಾತ್ರ ಇದೆ. ಈ ಗ್ರಾಮದಲ್ಲಿ  ಕ್ರೀಡೆಗೆ ಪೂರಕ ಸ್ಪಂದನೆ ದೊರೆಯುವುದರಿಂದ ಉತ್ತಮ ಕ್ರಿಕೆಟ್ ಅನಾವರಣಗೊಳ್ಳಲಿದೆ ಎಂದು ಕೊಡವ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷರಾದ ಕೀತಿಯಂಡ ಕಾರ್ಸನ್ ಕಾರ್ಯಪ್ಪ ಅಭಿಪ್ರಾಯ ಪಟ್ಟರು.

ಕೊಡವ ಕ್ರಿಕೆಟ್ ಅಕಾಡೆಮಿ ಕಾರ್ಯದರ್ಶಿ ಬಲ್ಲಚಂಡ ಶರಿ ಚಂಗಪ್ಪ, ನಿರ್ದೆಶಕರಾದ ಬೊವ್ವೇರಿಯಂಡ ಸುಬ್ಬಯ್ಯ, ಕಾಂಡೇರ ಜಿಮ್ಮಿ, ಬಾಳೆಲೆ ಕೊಡವ ಸಮಾಜ ಅಧ್ಯಕ್ಷ ಮಲ್ಚೀರ ಬೋಸ್, ಗೋಣಿಕೊಪಲ್ಪು ಕಷಿ ಉತ್ಪನ್ನ ಮಾರುಕಟ್ಟೆ ಮಾಜಿ ಸದಸ್ಯ ಅಳಮೇಂಗಡ ಬೋಸ್ ಮಂದಣ್ಣ, ವಿಜಯಲಕ್ಷ್ಮಿ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಪಾರುವಂಗಡ ಬೋಸ್, ಪೆಮ್ಮಯ್ಯ,  ಸಿಆರ್‌ಸಿ ಬ್ಯಾಂಕ್ ಅಧ್ಯಕ್ಷ ಚಿಮ್ಮಣಮಾಡ ಕಷ ಗಣಪತಿ ಹಾಗೂ ಅಡ್ಡೇಂಗಡ ಕುಟುಂಬಸ್ತರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.