ADVERTISEMENT

ಬಲ್ಲಮಾವಟಿ: ಮರಳು ತೆಗೆಯುವ ತೊಟ್ಟಿ ವಶ

​ಪ್ರಜಾವಾಣಿ ವಾರ್ತೆ
Published 13 ಜನವರಿ 2012, 9:35 IST
Last Updated 13 ಜನವರಿ 2012, 9:35 IST

ನಾಪೋಕ್ಲು: ಬಲ್ಲಮಾವಟಿ ಗ್ರಾಮದ ಕಾವೇರಿ ಹೊಳೆ ಬದಿಯಲ್ಲಿ ಅಕ್ರಮ ಮರಳುಗಾರಿಕೆಯ ಸುಳಿವು ದೊರೆತ ಹಿನ್ನೆಲೆಯಲ್ಲಿ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇಲಾಖೆಯ ಅಧಿಕಾರಿಗಳಾದ ಧನಲಕ್ಷ್ಮಿ, ಚೈತ್ರಾ, ನಾಪೋಕ್ಲು ಠಾಣಾಧಿಕಾರಿ ಪುನೀತ್‌ಕುಮಾರ್ ಹಾಗೂ ಕಂದಾಯ ಪರಿವೀಕ್ಷಕ ವಿಠಲ್  ಬಲ್ಲಮಾವಟಿ ಗ್ರಾಮದ ಮೂರು ಭಾಗಗಳಲ್ಲಿ ದಾಳಿ ನಡೆಸಿ ಮರಳು ತೆಗೆಯುವ ಏಳು ತೊಟ್ಟಿ ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಮೊಕದ್ದಮೆ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮರಳುಗಾರಿಕೆ; ಸ್ಥಳ ಪರಿಶೀಲನೆ: ದೋಣಿ ಕಡುವಿನ ಕಾವೇರಿ ಹೊಳೆಯಲ್ಲಿ ಜೆಸಿಬಿಯಿಂದ ಅಕ್ರಮ ಮರಳುಗಾರಿಕೆಗೆ ತೋಡಲಾಗಿರುವ ಬೃಹತ್ ಗುಂಡಿಯನ್ನು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಗಿರೀಶ್ ಮತ್ತು ಕಿರಿಯ ಎಂಜಿನಿಯರ್ ಮಧು ಈಚೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಂತರ ಮಾತನಾಡಿದ ಅವರು, ಡಿಸೆಂಬರ್ 3ರಿಂದ 2012ರ ಮಾರ್ಚ್ ಅಂತ್ಯದವರೆಗೆ ಕೆಲವು ನಿಬಂಧನೆಗಳನ್ನು ವಿಧಿಸಿ ಬಿ.ಎಂ. ಅಬ್ದುಲ್ ನಾಜಿರ್ ಎಂಬವರಿಗೆ ಮರಳುಗಾರಿಕೆಗೆ ಪರವಾನಗಿ ನೀಡಲಾಗಿದೆ. ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿರುವುದರಿಂದ ಸಾಧಕ ಬಾಧಕಗಳನ್ನು ಪರಿಶೀಲಿಸಿ ಮುಂದಿನ ಕ್ರಮಕ್ಕಾಗಿ ವರದಿಯನ್ನು ಉನ್ನತಾಧಿಕಾರಿಗಳಿಗೆ ಕಳುಹಿಸಿಕೊಡಲಾಗುವುದು ಎಂದರು.

ನಾಪೋಕ್ಲು ಗ್ರಾ.ಪಂ ಅಧ್ಯಕ್ಷ ಸಲೀಂ ಹ್ಯಾರಿಸ್, ಸದಸ್ಯ ಮಹಮದ್ ಹನೀಫ್ ಮತ್ತಿತರರು ಅಕ್ರಮ ಮರಳುಗಾರಿಕೆಗೆ ಆಕ್ಷೇಪ ವ್ಯಕ್ತಪಡಿಸಿದರಲ್ಲದೆ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.