ಸೋಮವಾರಪೇಟೆ: ಸಮೀಪದ ಚೌಡ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ ಅಧ್ಯಕ್ಷ ಕೆ.ಟಿ. ಪರಮೇಶ್ ಅಧ್ಯಕ್ಷತೆಯಲ್ಲಿ ತೋಳೂರುಶೆಟ್ಟಳ್ಳಿ ಸಹಕಾರ ಸಮುದಾಯ ಭವನದಲ್ಲಿ ನಡೆಯಿತು.
ಮಳೆಹಾನಿಯಿಂದ ಕೃಷಿಕರು ಬೆಳೆ ನಷ್ಟ ಅನುಭವಿಸಿದ್ದು, ಸಹಕಾರ ಸಂಘದಲ್ಲಿ ತೆಗೆದುಕೊಂಡ ಬೆಳೆ ಸಾಲವನ್ನು ಮರುಪಾವತಿ ಮಾಡಲು ಅಸಾಧ್ಯವಾಗಿದೆ.
ಈ ಕಾರಣದಿಂದ ಸಾಲ ಮನ್ನಾ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡುವಂತೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ಸ್ವಸಹಾಯ ಸಂಘಗಳು, ಬ್ಯಾಂಕಿನಲ್ಲಿ ಪಡೆದ ಸಾಲದ ಮರುಪಾವತಿಗೆ ಹೆಚ್ಚಿನ ಅವಧಿ ನಿಗದಿಪಡಿಸುವಂತೆ, ಸದಸ್ಯೆ ಜಲಾ ಹೂವಯ್ಯ ಒತ್ತಾಯಿಸಿದರು.
ಗ್ರಾಮದ ಜನರಿಗೆ ಕುಡಿಯುವ ನೀರನ್ನು ಸಹಕಾರ ಸಂಘದ ವತಿಯಿಂದ ನಿರ್ಮಾಣವಾಗಿರುವ ಕೊಳವೆ ಬಾವಿಯಿಂದ ಸರಬರಾಜು ಮಾಡಲು ಗ್ರಾಮ ಪಂಚಾಯಿತಿ ಠೇವಣಿ ನೀಡಬೇಕಾಗುತ್ತದೆ ಎಂದು ಅಧ್ಯಕ್ಷರು ಸದಸ್ಯರೊಬ್ಬರ ಪ್ರಶ್ನೆಗೆ ಉತ್ತರಿಸಿದರು. ಸಂಘದ ವತಿಯಿಂದ ನಿರ್ಮಾಣವಾಗಿರುವ ಭೋಜನಶಾಲೆಯನ್ನು ಉದ್ಘಾಟಿಸಲಾಯಿತು. ಉಪಾಧ್ಯಕ್ಷೆ ಜಾನಕಿ ವೆಂಕಟೇಶ್, ನಿರ್ದೇಶಕ ಡಿ.ಡಿ. ಪೊನ್ನಪ್ಪ, ಎಸ್.ಎಂ. ನಂದಕುಮಾರ್, ವೈ.ಎಂ. ನಾಗರಾಜು, ಎಸ್.ಬಿ. ಈರಪ್ಪ, ಎಲ್.ಜಿ. ಮದನ್, ವೈ.ಡಿ. ಜಗದೀಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.