ADVERTISEMENT

ಬೋಪಯ್ಯ ರಾಜೀನಾಮೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 28 ಜನವರಿ 2012, 10:50 IST
Last Updated 28 ಜನವರಿ 2012, 10:50 IST

ಮಡಿಕೇರಿ: ಪಕ್ಷೇತರ ಶಾಸಕರನ್ನು ಅನರ್ಹಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಿಂದ ತರಾಟೆಗೆ ಒಳಗಾಗಿರುವ ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ಒತ್ತಾಯಿಸಿದೆ.

ನಗರದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಟಿ.ಪ್ರದೀಪ್ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಂ.ನಾಣಯ್ಯ, ಈ ಪ್ರಕರಣದಲ್ಲಿ ವಿಧಾನಸಭಾಧ್ಯಕ್ಷರು ಪಕ್ಷಪಾತ ಧೋರಣೆ ತೋರಿದ್ದಾರೆ. ಸಭಾಧ್ಯಕ್ಷರು ಕಾನೂನು ಬದ್ಧವಾಗಿ ನಡೆದುಕೊಂಡಿಲ್ಲ; ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಸುಪ್ರೀಂ ಕೋರ್ಟ್ ತೀರ್ಪಿನಲ್ಲಿರುವುದು ಗಮಿಸಬೇಕಾದ ಅಂಶ ಎಂದರು.

ಒಂದು ವೇಳೆ ಸಭಾಧ್ಯಕ್ಷರು ರಾಜೀನಾಮೆ ನೀಡದಿದ್ದರೆ ಈಗಾಗಲೇ ಕಾಂಗ್ರೆಸ್ ಅವಿಶ್ವಾಸ ಮಂಡಿಸಲು ಮುಂದಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಹೇಳಿಕೆ ನೀಡಿದ್ದಾರೆ. ಕೆಪಿಸಿಸಿ ನೀಡುವ ಆದೇಶದಂತೆ ಪಕ್ಷದಿಂದ ಬೀದಿಗಿಳಿದು ಹೋರಾಟ ಮಾಡುವುದಾಗಿ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬತ್ತ ಖರೀದಿಯಲ್ಲಿ ಗೊಂದಲ
ಎಪಿಎಂಸಿಯಲ್ಲಿ ಬತ್ತ ಖರೀದಿ ವ್ಯವಹಾರದಲ್ಲಿ ಹಲವಾರು ಗೊಂದಲಗಳು ಇವೆ ಎಂದು ಹೇಳಿದ ಬಿ.ಟಿ.ಪ್ರದೀಪ್, ಬತ್ತ ಸಂಗ್ರಹಿಸಲು ಗೋದಾಮು ಇಲ್ಲ ಎಂದು ನೆಪ ಹೇಳಲಾಗುತ್ತಿದೆ ಎಂದರು.

ರೈತರು ಎನ್ನುವುದಕ್ಕೆ ದೃಢೀಕರಣ ಪತ್ರ ತರಬೇಕು ಎನ್ನುವ ನಿಯಮ ಹಾಗೂ ತೇವಾಂಶದ ಬಗ್ಗೆಯೂ ಗೊಂದಲ ಹುಟ್ಟು ಹಾಕಲಾಗಿದೆ. ಈ ನಿಟ್ಟಿನಲ್ಲಿ ಸರಳವಾದ ನಿಯಮ ರೂಪಿಸಿ, ಎಲ್ಲ ಬಗೆಯ ಭತ್ತವನ್ನು ಖರೀದಿಸುವ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.  ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಎಚ್.ಅಬ್ದುಲ್ ರೆಹಮಾನ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.