ADVERTISEMENT

ಭಾರಿ ಮಳೆ: ಕೆಸರು ಗದ್ದೆಯಾದ ಕೂಡಿಗೆ- ಶಿರಂಗಾಲ ರಸ್ತೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2011, 8:25 IST
Last Updated 3 ಸೆಪ್ಟೆಂಬರ್ 2011, 8:25 IST

ಕುಶಾಲನಗರ: ಕಳೆದ ಮೂರು ದಿನಗಳಿಂದ ಸುರಿದ ಭಾರಿ ಮಳೆಗೆ ಇಲ್ಲಿಗೆ ಸಮೀಪದ ಕೂಡಿಗೆ- ಶಿರಂಗಾಲ ರಾಜ್ಯ ಹೆದ್ದಾಗಿ ಕೆಸರು ಗದ್ದೆಯಂತಾಗಿದೆ.

ಮಳೆಗೆ ರಸ್ತೆಯ ಡಾಂಬರು ಕಿತ್ತು ಹೋಗಿದೆ. ರಸ್ತೆಯ ಹೊಂಡಗಳಲ್ಲಿ ನೀರು ತುಂಬಿದೆ. ಎಡಬಿಡದ ಮಳೆಯಿಂದಾಗಿ ವಾಹನ ಸವಾರರು ಪರದಾಡುತ್ತಿದ್ದಾರೆ.

ಕಣಿವೆ, ಹುಲುಸೆ, ಹೆಬ್ಬಾಲೆ, ತೊರೆನೂರು, ಮಣಜೂರು, ಶಿರಂಗಾಲದ ಬಳಿಯ ರಸ್ತೆಯಲ್ಲಿ ವಾಹನಗಳು ಸಂಚರಿಸುವುದೇ ದುಸ್ತರವಾಗಿದೆ. ವಾಹನ ಸಂಚರಿಸಿದರೆ ರಸ್ತೆಯಂಚಿನ ಮನೆಗಳಿಗೆ ರಾಡಿ ಸಿಡಿಯುತ್ತಿದೆ. ಕೆಸರಿನ ರಸ್ತೆಯಲ್ಲಿ ಬೈಕ್ ಸವಾರರು ಕಾಲು ಕೆಳಗಿಡುವುದೇ ಕಷ್ಟವಾಗಿದೆ.

ಹದಗೆಟ್ಟ ರಸ್ತೆಯಲ್ಲಿನ ಹೊಂಡಗಳನ್ನು ತಾತ್ಕಾಲಿಕವಾಗಿ ಮುಚ್ಚಿ ಸುಗಮ ಸಂಚಾರಕ್ಕೆ ಮುಕ್ತಗೊಳಿಸಬೇಕು ಎಂದು ಗ್ರಾಮಸ್ಥರು ಈಚೆಗೆ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರಿಗೆ ಮನವಿ ಸಲ್ಲಿಸಿದ ಮೇರೆಗೆ ರಸ್ತೆಗೆ ಕಲ್ಲು ಮತ್ತು ಮರಳಿನ ಮಣ್ಣು ಹಾಕಲಾಯಿತು. ಆದರೆ ಮಳೆ ತೀವ್ರವಾದ ಹಿನ್ನೆಲೆಯಲ್ಲಿ ಮಳೆ ನೀರಿಗೆ ಮಣ್ಣು ಸಿಲುಕಿ ರಸ್ತೆ ಮತ್ತಷ್ಟು ಕೆಸರುಮಯವಾಗಿದೆ.

ಮಳೆ ನಿಂತ ನಂತರ ಶಾಶ್ವತ ರಸ್ತೆ ನಿರ್ಮಾಣಕ್ಕೂ ಮುನ್ನ ರಸ್ತೆಯಲ್ಲಿನ ಹೊಂಡಗಳನ್ನು ಮುಚ್ಚಬೇಕು. ತಾತ್ಕಾಲಿಕವಾಗಿ ರಸ್ತೆ ಸರಿಪಡಿಸುವ ಮೂಲಕ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

`ಕೆಆರ್‌ಡಿಸಿಲ್ ವತಿಯಿಂದ ರೂ. 60 ಕೋಟಿ ವೆಚ್ಚದಲ್ಲಿ ಹಾಸನ ಜಿಲ್ಲೆಯ ಗಡಿಭಾಗದ ಕಡುವಿನ ಹೊಸಹಳ್ಳಿಯಿಂದ ಹಿಡಿದು ಕೊಡಗಿನ ಗಡಿಭಾಗದ ಶಿರಂಗಾಲದ ಮೂಲಕ ಕುಶಾಲನಗರದ ತನಕ 22 ಕಿ.ಮೀ. ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಲಾಗುತ್ತದೆ~ ಎಂದು ಶಾಸಕ ಅಪ್ಪಚ್ಚು ರಂಜನ್ ತಿಳಿಸಿದ್ದಾರೆ.

ರಸ್ತೆ ಅಭಿವೃದ್ಧಿಪಡಿಸಲು ಈಗಾಗಲೇ ಗಡಿ ಗುರುತಿಸಲಾಗಿದೆ. ರಸ್ತೆಯಂಚಿನ ನಿವಾಸಿಗಳು ರಸ್ತೆ ನಿರ್ಮಾಣಕ್ಕೆ ಅಗತ್ಯ ಜಾಗ ಬಿಟ್ಟುಕೊಡಬೇಕು~ ಎಂದು ಶಾಸಕರು ಮನವಿ ಮಾಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.