ನಾಪೋಕ್ಲು: ಮೂರ್ನಾಡಿನ ಸರ್ಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ನೂತನವಾಗಿ ನಿರ್ಮಿಸಲಾದ ಮೆಟ್ಟಿಲುಗಳ ಉದ್ಘಾಟನಾ ಸಮಾರಂಭ ಮಂಗಳವಾರ ನಡೆಯಿತು.
ಮುತ್ತಾರುಮುಡಿ ಗ್ರಾಮದ ದಾನಿ ಪೆಮ್ಮುಡಿಯಂಡ ಮಂದಣ್ಣ ಶಾಲೆಯ ಮೆಟ್ಟಿಲು ಉದ್ಘಾಟಿಸಿದರು.
ನಂತರ ಮಾತನಾಡಿ, ಸ್ವಪ್ರೇರಣೆಯಿಂದ ದಾನ ಮಾಡುವ ಮನಸ್ಸು ಇರಬೇಕು. ಆಗಮಾತ್ರ ಅಭಿವೃದ್ದಿ ಹೊಂದಲು ಸಾಧ್ಯ. ವಿದ್ಯಾರ್ಥಿಗಳು ದಿನನಿತ್ಯದ ಪಾಠಪ್ರವಚನಗಳನ್ನು ಮನೆಯಲ್ಲಿ ಅಭ್ಯಾಸ ಮಾಡಿದರೆ ಮುಂದೆ ಉತ್ತಮ ಅಂಕಗಳಿಸಲು ಸಹಕಾರಿಯಾಗುತ್ತದೆ. ವಿದ್ಯಾರ್ಥಿ ಜೀವನದಲ್ಲಿ ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೇ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದರು.
ಶಾಲಾ ಶೈಕ್ಷಣಿಕ ಸಮಿತಿ ಸದಸ್ಯೆ ಪ್ರೇಮಲತಾ ಗೋಪಾಲಕೃಷ್ಣ ಮಾತನಾಡಿ, ಜಿಲ್ಲೆಯಲ್ಲಿ ಹಲವು ಸರ್ಕಾರಿ ಶಾಲೆಗಳು ಸ್ಥಳೀಯರು ದಾನ ನೀಡಿದ ಸ್ಥಳದಲ್ಲಿ ನಿರ್ಮಾಣವಾಗಿದೆ. ಹಿರಿಯರು ವರ್ಷಗಳ ಹಿಂದೆ ವಿದ್ಯೆಗೆ ಹೆಚ್ಚಿನ ಮಹತ್ವ ನೀಡಿದರು. ವಿದ್ಯೆಯ ಬೆಳವಣಿಗೆಗೆ ಅಗತ್ಯವಾದ ಸ್ಥಳದಾನ ಮಾಡುವ ಮನಸ್ಸು ಹಿಂದಿನವರಲ್ಲಿತ್ತು ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ದೀರ್ಘಕೇಶಿ ಶಿವಣ್ಣ, ಮೂರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಕೇಶವ ಮಾತನಾಡಿದರು. ಶಾಲಾ ಅಭಿವೃದ್ದಿ ಸಮಿತಿ ಅಧ್ಯಕ್ಷ ಶೇಖ್ ಅಹಮದ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಶಾಲಾ ಸ್ಥಾಪನ ಸಮಿತಿ ಸದಸ್ಯ ವಿಠಲ, ಎಸ್ಡಿಎಂಸಿ ಸದಸ್ಯರಾದ ಚಿನ್ನ, ಫಾತಿಮ, ಬಾಲಕೃಷ್ಣ, ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
ಈ ಸಂದರ್ಭ ಶಾಲೆಗಳಿಗೆ ಮೆಟ್ಟಿಲು ನಿರ್ಮಾಣ ಮಾಡಲು ಐವತ್ತು ಸಾವಿರ ರೂ. ಸಹಾಯಧನ ನೀಡಿದ ಪೆಮ್ಮುಡಿಯಂಡ ಮಂದಣ್ಣ ಅವರನ್ನು ಶಾಲಾ ವತಿಯಿಂದ ಸನ್ಮಾನಿಸಲಾಯಿತು. ಶಾಲಾ ಮುಖ್ಯ ಶಿಕ್ಷಕ ಶಿವಕುಮಾರ್ ಸ್ವಾಗತಿಸಿದರು. ಶಿಕ್ಷಕಿ ಸಿಸಿಲಾ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.