ADVERTISEMENT

ಮರಳು ಕಲಾಕೃತಿಗೆ ಮರುಳಾದ ಜನ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2011, 5:25 IST
Last Updated 4 ಅಕ್ಟೋಬರ್ 2011, 5:25 IST
ಮರಳು ಕಲಾಕೃತಿಗೆ ಮರುಳಾದ ಜನ
ಮರಳು ಕಲಾಕೃತಿಗೆ ಮರುಳಾದ ಜನ   

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮೊದಲ ಬಾರಿಗೆ ಮರಳು ಕಲಾಕೃತಿಯ ಪ್ರದರ್ಶನವು ಮಡಿಕೇರಿಯ ಗಾಂಧಿ ಮಂಟಪದ ಹಿಂಬದಿ ಇರುವ ಸೆಂಟ್ರಲ್ ವರ್ಕ್‌ಶಾಪ್‌ನಲ್ಲಿ ಸೋಮವಾರದಿಂದ ಆಯೋಜಿಸ ಲಾಗಿದ್ದು, ಇದನ್ನು ವೀಕ್ಷಿಸಲು ಶಾಲಾಮಕ್ಕಳು ಸೇರಿದಂತೆ ನೂರಾರು ಜನರು ಆಗಮಿಸುತ್ತಿದ್ದಾರೆ.

ಮಡಿಕೇರಿ ದಸರಾ ಉತ್ಸವದ ಅಂಗವಾಗಿ ಮೈಸೂರಿನ ಕಲಾವಿದೆ, ಕೇವಲ 23 ವರ್ಷ ವಯಸ್ಸಿನ ಗೌರಿ ಅವರು ಮಹಿಷಾಸುರ ಮರ್ಧಿನಿ ಮರಳು ಕಲಾಕೃತಿಯನ್ನು ರಚಿಸಿದ್ದು, ಮೂರು ಲೋಡ್ ಮರಳಿನಲ್ಲಿ ಮೂಡಿಬಂದಿರುವ ಮಹಿಷಾಸುರ ಮರ್ಧಿನಿಯನ್ನು ಕಂಡು ವೀಕ್ಷಕರು ನಿಬ್ಬೆರಗಾಗಿದ್ದಾರೆ.

ಕಳೆದ ಏಪ್ರಿಲ್‌ನಲ್ಲಿ ಸುತ್ತೂರಿನಲ್ಲಿ ಕಲಾಕೃತಿ ರಚಿಸುವ ಮೂಲಕ ಈ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ಅಪರೂಪದ ಯುವತಿ ಇವರಾಗಿದ್ದಾರೆ. ಮಡಿಕೇರಿಯಲ್ಲಿ ರಚಿಸಿರುವ ಈ ಕಲಾಕೃತಿಯು ಅವರ ಮೂರನೇ ಕಲಾಕೃತಿಯಾಗಿದೆ.

ಇದನ್ನು ರಚಿಸಲು ಎರಡು ದಿನಗಳ ಸಮಯ ತೆಗೆದುಕೊಂಡಿರುವ ಗೌರಿ ಅವರಿಗೆ ಅವರ ತಂದೆ ಬಿ.ಎಂ. ನಂಜುಂಡಸ್ವಾಮಿ ಕೈಜೋಡಿಸಿದ್ದು ವಿಶೇಷವಾಗಿತ್ತು.

ಕಲಾಕೃತಿಯ ಪ್ರದರ್ಶನವನ್ನು ಜಿ.ಪಂ. ಅಧ್ಯಕ್ಷ ರವಿ ಕುಶಾಲಪ್ಪ ಉದ್ಘಾಟಿಸಿದರು. ನಗರಸಭೆ ಅಧ್ಯಕ್ಷ ಎಚ್.ಎಂ. ನಂದಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಚಂದ್ರೇಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ ಅಣ್ಣಿಗೇರಿ, ಹಿರಿಯ ಉಪವಿಭಾಗಾಧಿಕಾರಿ ಡಾ.ಎಂ.ಆರ್. ರವಿ, ನಗರಸಭೆ ಆಯುಕ್ತ ಶಶಿಕುಮಾರ್, ಇತರರು ಹಾಜರಿದ್ದರು.

ಈ ಕಲಾಕೃತಿಯ ಪ್ರದರ್ಶನವನ್ನು ಅ.7ರವರೆಗೆ ಇಡಲಾಗುವುದು ಎಂದು ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಎಚ್.ಟಿ. ಅನಿಲ್ ತಿಳಿಸಿದರು.

ಮೈಸೂರು ದಸರಾದಲ್ಲಿ ಕೃಷ್ಣಾರ್ಜುನ: ಮಹಾಭಾರತದ ಯುದ್ಧದಲ್ಲಿ ಅರ್ಜುನನಿಗೆ ಸಾರಥಿಯಾಗಿ ಶ್ರೀಕೃಷ್ಣ ರಥವನ್ನು ಓಡಿಸುತ್ತಿರುವ (ಭಗವದ್ಗೀತೆ ಪ್ರಸಂಗ) ದೃಶ್ಯದ ಮರಳು ಕಲಾಕೃತಿಯನ್ನು ಮೈಸೂರು ದಸರಾ ಉತ್ಸವದಲ್ಲಿ ರಚಿಸುವುದಾಗಿ ಗೌರಿ ಅವರು ಸುದ್ದಿಗಾರರಿಗೆ ತಿಳಿಸಿದರು. ಇದಲ್ಲದೇ, ಮೈಸೂರಿನಲ್ಲಿ ಮರಳು ಕಲಾಕೃತಿಗಳ ಸಂಗ್ರಹಾಲಯವನ್ನು ಸ್ಥಾಪಿಸುವ ಬಯಕೆ ಇರುವುದಾಗಿ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.