ADVERTISEMENT

ರಂಜಿಸಿದ ದೇಸಿ ಹಾಡು, ಪಾಶ್ಚಿಮಾತ್ಯ ಸಂಗೀತ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2012, 6:15 IST
Last Updated 6 ಫೆಬ್ರುವರಿ 2012, 6:15 IST
ರಂಜಿಸಿದ ದೇಸಿ ಹಾಡು, ಪಾಶ್ಚಿಮಾತ್ಯ ಸಂಗೀತ
ರಂಜಿಸಿದ ದೇಸಿ ಹಾಡು, ಪಾಶ್ಚಿಮಾತ್ಯ ಸಂಗೀತ   

ಗೋಣಿಕೊಪ್ಪಲು: ಸಂಗೀತ, ನೃತ್ಯ, ವಿವಿಧ ಬಗೆಯ ವೇಷ ಭೂಷಣಗಳ ಮೂಲಕ ಕಾವೇರಿ ಕಾಲೇಜಿನ ವಿದ್ಯಾರ್ಥಿಗಳು ಶನಿವಾರ ಕಾಲೇಜಿನ  ರಂಗಮಂದಿರದಲ್ಲಿ ಸಂಭ್ರಮವನ್ನು ಆಚರಿಸಿದರು.

ಪ್ರಸಕ್ತ ಶೈಕ್ಷಣಿಕ ಸಾಲಿನ ವಾರ್ಷಿಕೋತ್ಸವದಲ್ಲಿ ನಡೆದ ಸಾಂಸ್ಕೃತಿಕ  ಕಾರ್ಯಕ್ರಮದಲ್ಲಿ  ಪಾಲ್ಗೊಂಡಿದ್ದ ವಿದ್ಯಾರ್ಥಿಗಳು ವಿಭಿನ್ನ ಬಗೆಯ ಹಾಡುಗಳಿಗೆ  ಮೈ ನವಿರೇಳಿಸುವ ರೀತಿಯಲ್ಲಿ ನೃತ್ಯ ಮಾಡಿದರು. ದೇಸಿ ಹಾಡುಗಳ ಜತೆಗೆ ಪಾಶ್ಚಿಮಾತ್ಯ ಸಂಗೀತ ನೃತ್ಯವೂ  ಕಾರ್ಯಕ್ರಮದಲ್ಲಿ ಮೇಳೈಸಿತು.

ಪದವಿ ಹಾಗೂ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ಬಗೆಯ ನೃತ್ಯದ ಮೂಲಕ  ನೆರೆದಿದ್ದ  ಪ್ರೇಕ್ಷಕರಿಗೆ ಮನರಂಜನೆ ನೀಡಿದರು. ವೇದಿಕೆಯಲ್ಲಿ ಮಿನುಗುತ್ತಿದ್ದ  ನೃತ್ಯಪಟುಗಳಿಗೆ ಸಭಾಂಗಣದಲ್ಲಿದ್ದ ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸುತ್ತಾ ಸಾಥ್ ನೀಡಿದರು.

ವಿವಿಧ ಸ್ಪರ್ಧೆಗಳಲ್ಲಿ  ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದ ಕಾಲೇಜಿನ ಪೋಷಕರ ಹಾಗೂ ಉಪನ್ಯಾಸಕರ ಸಂಘದ ಅಧ್ಯಕ್ಷ ಮುರುವಂಡ ಪ್ರಕಾಶ್ ಮಾತನಾಡಿ, ವಿದ್ಯಾರ್ಥಿಗಳು ಉತ್ತಮವಾಗಿ ಓದಿ ತಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು. ಜತೆಗೆ ಕಾಲೇಜಿಗೂ ಕೀರ್ತಿ ತರಬೇಕು ಎಂದು ಸಲಹೆ ನೀಡಿದರು.

ಹಳೇ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಅಜಿತ್ ಅಯ್ಯಪ್ಪ ಮಾತನಾಡಿ, `ಉತ್ತಮ ವ್ಯಕ್ತಿತ್ವ ಬೆಳೆಸಿಕೊಂಡು ಕ್ರೀಡೆ ಕಡೆಗೆ ಹೆಚ್ಚಿನ ಒಲವು ತೋರಬೇಕು. ದೇಶದ ಹಿತಕ್ಕಾಗಿಯೂ ದುಡಿಯಬೇಕು. ಪ್ರತಿಭೆ ಇದ್ದರೆ ಏನನ್ನಾದರೂ ಸಾಧಿಸಬಹುದು. ಓದಿನ ಜತೆಗೆ ವ್ಯಾಸಂಗದ ಕಡೆಗೂ ಗಮನ ಹರಿಸಬೇಕು~ ಎಂದು ಅಭಿಪ್ರಾಯ ಪಟ್ಟರು.

ಪದವಿ ಕಾಲೇಜು ಪ್ರಾಚಾರ್ಯ ಪ್ರೊ. ಬಿದ್ದಪ್ಪ, ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಎಸ್.ಎಸ್.ಮಾದಯ್ಯ, ಪದವಿ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರೊ.ಸಿ.ಎಂ.ನಾಚಪ್ಪ, ಪದವಿಪೂರ್ವ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಡಯಾನ, ಪ್ರೊ. ಜ್ಯೋತಿ ಹಾಜರಿದ್ದರು.  ಚೈತ್ರ ವಂದಿಸಿದರು. ಪ್ರೊ.ಭಾರತಿ ಹಾಗೂ ಅಶ್ವಿನಿ ನಿರೂಪಿಸಿದರು.

ಜಾತ್ರೆಗೆ ಬಂದ ರೈತ ಸಾವು
ಶನಿವಾರಸಂತೆ: ಗುಡುಗಳಲೆಯಲ್ಲಿ ನಡೆಯುತ್ತಿರುವ ಶ್ರೀಜಯದೇವ ಜಾನುವಾರುಗಳ ಜಾತ್ರೆಯಲ್ಲಿ ಶನಿವಾರ ಸಾಮಗ್ರಿ ಖರೀದಿಗಾಗಿ ಬಂದಿದ್ದ ರೈತರೊಬ್ಬರು ನೀರಿನ ಟ್ಯಾಂಕ್ ಬಳಿ ಬಿದ್ದು ಮೃತಪಟ್ಟಿರುವ ಘಟನೆ ಭಾನುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಮೆಣಸ ಗ್ರಾಮದ ರೈತ ಚಂದ್ರಪ್ಪ (55)ಶನಿವಾರ ಗುಡುಗಳಲೆ ಜಾತ್ರೆ ನೋಡಿಕೊಂಡು ಮನೆಗೆ ಸಾಮಾನು ತರುವುದಾಗಿ ಪತ್ನಿಗೆ ತಿಳಿಸಿ ಬಂದಿದ್ದರು.

ಭಾನುವಾರ ಬೆಳಗ್ಗೆ ಚಂದ್ರಪ್ಪ ಮೃತಪಟ್ಟಿರುವ ವಿಚಾರ ಪತ್ನಿ ಜಯಮ್ಮನಿಗೆ ದೂರವಾಣಿ ಮೂಲಕ ತಿಳಿಯಿತು. ಜಯಮ್ಮ ನೀಡಿದ ದೂರನ್ನು ಶನಿವಾರಸಂತೆ ಪೊಲೀಸರು ದೂರು ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.