ADVERTISEMENT

`ರಕ್ಷಣೆಗೆ ನಾವಿದ್ದೇವೆ; ಹೆದರಬೇಡಿ'

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2013, 6:32 IST
Last Updated 19 ಏಪ್ರಿಲ್ 2013, 6:32 IST

ಕುಶಾಲನಗರ: ವಿಧಾನಸಭ ಚುನಾವಣೆ ಹಿನ್ನೆಲೆಯಲ್ಲಿ ಪೊಲೀಸರು ಗುರುವಾರ ಪಟ್ಟಣದಲ್ಲಿ ಪಥ ಸಂಚಲನ ನಡೆಸಿದರು.

ಜಿಲ್ಲಾ ಮತ್ತು ಕೇಂದ್ರ ಮೀಸಲು ಪಡೆಯ ಪೊಲೀಸರು ಕಮಾಂಡರ್‌ಗಳಾದ ಅರುಣ್ ಕುಮಾರ್ ಮತ್ತು ಅನಿಲ್ ಪಾಂಡೆ ನೇತೃತ್ವದಲ್ಲಿ ಪಥಸಂಚಲನ ನಡೆಸಿದರು. ಬಿಹಾರ ರಾಜ್ಯದ ವಿಶೇಷ ಕಾರ್ಯಪಡೆಯ 150 ಮಂದಿ ಪೊಲೀಸರು, ಜಿಲ್ಲಾ ಸಶಸ್ತ್ರ ಪಡೆಯ ಪೊಲೀಸರು, ಕುಶಾಲನಗರ ಪೊಲೀಸ್ ಠಾಣೆಯ ಪೊಲೀಸರು ಪಥಸಂಚಲನದಲ್ಲಿ ಪಾಲ್ಗೊಂಡಿದ್ದರು.

ಪಥಸಂಚಲನಕ್ಕೆ ಚಾಲನೆ ನೀಡಿದ ಸೋಮವಾರಪೇಟೆ ವಿಭಾಗ ಉಪ ಪೊಲೀಸ್ ಅಧೀಕ್ಷಕ ಪೌಲ್ ಎಸ್. ವರ್ಮಾ ಮಾತನಾಡಿ, ಚುನಾವಣೆ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಸೂಕ್ತ ರಕ್ಷಣೆ ನೀಡಲು ಪೊಲೀಸ್ ಇಲಾಖೆ ಸನ್ನದ್ಧವಾಗಿದೆ. ಶಾಂತಿಯುತ ಮತದಾನ ನಡೆಯಲು ಸಾರ್ವಜನಿಕರು ಸಹಕಾರ ನೀಡಬೇಕು. ಜೊತೆಗೆ ಮತದಾರರು ಯಾವುದೇ ಭಯವಿಲ್ಲದೆ ಮತದಾನ ಮಾಡಲು ಎಲ್ಲ ರೀತಿ ರಕ್ಷಣೆ ನೀಡಲು ಪೊಲೀಸರು ಸಿದ್ಧರಾಗಿದ್ದಾರೆ ಎಂದು ಹೇಳಿದರು.

ಐಬಿಯಿಂದ ಹೋರಾಟ ಪಥಸಂಚಲನ ಕಾರ್ಯಪ್ಪ ವೃತ್ತದ ಮೂಲಕ ರಥಬೀದಿ, ಮಾರುಕಟ್ಟೆ ರಸ್ತೆ, ಐಬಿ ರಸ್ತೆ, ದಂಡಿನಪೇಟೆ, ಅಯ್ಯಪ್ಪ ಸ್ವಾಮಿ ರಸ್ತೆ ಮೂಲಕ ಸಾಗಿ ಬೈಚನಹಳ್ಳಿ ಬಳಿ ಸಮಾಪನಗೊಂಡಿತು. ಈ ಸಂದರ್ಭ ಕುಶಾಲನಗರ ವೃತ್ತ ನಿರೀಕ್ಷಕ ಗಣೇಶ್, ಠಾಣಾಧಿಕಾರಿ ಚಿಕ್ಕಸ್ವಾಮಿ ಇತರರು ಇದ್ದರು.

ಪೊಲೀಸ್ ವೀಕ್ಷಕರ ಭೇಟಿ
ಮಡಿಕೇರಿ: ಜಿಲ್ಲೆಯ ಪೊಲೀಸ್ ವೀಕ್ಷಕರಾಗಿ ಅತುಲ್ ಕರ್ವಾಲ್ ಅವರು ಕೊಡಗು ಜಿಲ್ಲೆಗೆ ಈಗಾಗಲೇ ಆಗಮಿಸಿ ಜಿಲ್ಲಾಧಿಕಾರಿ ಡಾ. ಎನ್.ವಿ. ಪ್ರಸಾದ್ ಅವರಿಂದ ಚುನಾವಣಾ ಸಿದ್ಧತೆ ಬಗ್ಗೆ ಮಾಹಿತಿ ಪಡೆದ್ದ್ದಿದಾರೆ.

ಚುನಾವಣೆಗೆ ಸಂಬಂಧಿಸಿದಂತೆ ಶಾಂತಿ-ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಾರ್ವಜನಿಕರು, ರಾಜಕೀಯ ಪಕ್ಷಗಳ ಮುಖಂಡರು ಮತ್ತಿತರರು ಕೈಜೋಡಿಸಬೇಕಿದೆ. ಜಿಲ್ಲೆಯಲ್ಲಿ ಯಾವುದೇ ರೀತಿಯ ದೂರು, ಮಾಹಿತಿಗೆ ಸಂಬಂಧಿಸಿದಂತೆ ಮೊ: 944879 5583 ಮೂಲಕ ಕರೆ ಮಾಡಬಹುದಾಗಿದೆ. ಚುನಾವಣಾ ವೀಕ್ಷಕರ ಸಂಪರ್ಕಧಿಕಾರಿಯಾಗಿ ಮಡಿಕೇರಿ ನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ವೆಂಕಟೇಗೌಡ (94808 04945) ಕಾರ್ಯನಿರ್ವಹಿಸಿಲಿದ್ದಾರೆ ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.