ADVERTISEMENT

ರಿಯಾಯಿತಿ ಪಾಸು ನವೀಕರಣ: ಅಂಗವಿಕಲರಿಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2013, 6:14 IST
Last Updated 4 ಏಪ್ರಿಲ್ 2013, 6:14 IST

ಮಡಿಕೇರಿ: ಅಂಗವಿಕಲರಿಗೆ ವಿತರಿಸಿರುವ 2012ನೇ ಸಾಲಿನ ರಿಯಾಯಿತಿ ದರದ ಬಸ್‌ಪಾಸ್‌ಗಳ ಅವಧಿ ಮುಕ್ತಾಯಗೊಂಡಿರುವ ಹಿನ್ನೆಲೆಯಲ್ಲಿ ಸದರಿ ಪಾಸ್‌ಗಳನ್ನು ನವೀಕರಿಸಿಕೊಳ್ಳುವಂತೆ ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.

2012ನೇ ಸಾಲಿನಲ್ಲಿ ವಿತರಿಸಲಾದ ಹಳೇ ಬಸ್‌ಪಾಸ್, ಇತ್ತೀಚಿನ ಎರಡು ಫುಲ್‌ಸ್ಕೇಪ್ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಹಾಗೂ ರೂ.550 ನೀಡಿ ಪಾಸ್‌ಗಳನ್ನು ನವೀಕರಿಸಿಕೊಳ್ಳಬಹುದಾಗಿದೆ.

ಅಂಗವಿಕಲ ರಿಯಾಯಿತಿ ದರದ ಪಾಸುಗಳನ್ನು ಏ.8ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿರಾಜಪೇಟೆ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದಲ್ಲಿ, ಏ.9ರಂದು ಸೋಮವಾರಪೇಟೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಹಾಗೂ ಏ.10ರಂದು ಮಡಿಕೇರಿ ತಾಲ್ಲೂಕಿನ ಮಡಿಕೇರಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಪಾಸುಗಳನ್ನು ನವೀಕರಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ:08272-222829ನ್ನು ಸಂಪರ್ಕಿಸಬಹುದು.

ಸೇನಾ ನೇಮಕಾತಿ ರ‌್ಯಾಲಿ
ಮಡಿಕೇರಿ: ಸೇನೆಯಲ್ಲಿ ಭರ್ತಿಗಾಗಿ ಯೂನಿಟ್ ಕೋಟಾದಡಿ ಆರ್ಮಿ ರಿಕ್ರೂಟ್‌ಮೆಂಟ್ ರ‌್ಯಾಲಿಯನ್ನು ಮಧ್ಯಪ್ರದೇಶದ ಇಂದಿರಾಗಾಂಧಿ ಮೈದಾನ, 2 ಟೆಕ್ನಿಕಲ್ ಟ್ರೈನಿಂಗ್ ಸೆಂಟರ್ (ಸಿಗ್ನಲ್ಸ್)ನಲ್ಲಿ ಏ.18 ರಿಂದ ಸೇವಾ ನಿರತ, ಮಾಜಿ ಸೈನಿಕ ಹಾಗೂ ಮೃತ ಮಾಜಿ ಸೈನಿಕರ ಗಂಡು ಮಕ್ಕಳುಗಳಿಗೆ ಹಾಗೂ ಸೇವಾ ನಿರತ ಸೈನಿಕರ ಅಣ್ಣ ಅಥವಾ ತಮ್ಮಂದಿರಿಗೂ ಸೈನಿಕ ತಾಂತ್ರಿಕ, ಸೈನಿಕ ಜಿಡಿ ಮತ್ತು ಟ್ರೇಡ್‌ಮ್ಯೋನ್ ಹುದ್ದೆಗಳಿಗೆ ಭರ್ತಿ ರ‌್ಯಾಲಿ ನಡೆಯಲಿದೆ.

ಹೆಚ್ಚಿನ ಮಾಹಿತಿಗಾಗಿ ಜಂಟಿ ನಿರ್ದೇಶಕರ ಕಾರ್ಯಾಲಯ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಮಡಿಕೇರಿರವರನ್ನು ಕಚೇರಿ ವೇಳೆಯಲ್ಲಿ ಖುದ್ದಾಗಿ ಸಂಪರ್ಕಿಸಬಹುದಾಗಿದೆ ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.