ADVERTISEMENT

ಶಿಕ್ಷಣ ಹಕ್ಕು ಕಾಯ್ದೆ : ಸೀಟು ನೀಡದ ಶಾಲೆಗಳ ವಿರುದ್ಧ ದೂರು

​ಪ್ರಜಾವಾಣಿ ವಾರ್ತೆ
Published 22 ಜೂನ್ 2013, 11:01 IST
Last Updated 22 ಜೂನ್ 2013, 11:01 IST

ಗೋಣಿಕೊಪ್ಪಲು: ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಅಡಿಯಲ್ಲಿ ಖಾಸಗಿ ಶಾಲೆಗಳಲ್ಲಿ ಶೇ 25ರಷ್ಟು ಸೀಟು ನೀಡಬೇಕು. ಆದರೆ, ಕೆಲವು ಶಾಲೆಗಳು ಈ ಸೀಟುಗಳನ್ನು ಪೂರ್ಣ ಪ್ರಮಾಣದಲ್ಲಿ ನೀಡದೆ ಸರ್ಕಾರಕ್ಕೆ ವಂಚಿಸಿವೆ. ಇಂತಹ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲು ಮೇಲಾಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದು ವಿರಾಜಪೇಟೆ ತಾಲ್ಲೂಕು ಕ್ಷೇತ್ರಶಿಕ್ಷಣ ಸಂಯೋಜ ಬಿ.ಪಿ. ಉತ್ತಪ್ಪ ಹೇಳಿದರು.

ಪೊನ್ನಂಪೇಟೆಯಲ್ಲಿ ಗುರುವಾರ ನಡೆದ ತಾಲ್ಲೂಕು ಪಂಚಾಯಿತಿ ತ್ರೈಮಾಸಿಕ ಪ್ರಗತಿ ಪರಿಶೀಲಾ ಸಭೆಯಲ್ಲಿ ಶಿಕ್ಷಣ ಇಲಾಖೆ ಬಗ್ಗೆ ಮಾಹಿತಿ ನೀಡಿದ ಅವರು, ಗೋಣಿಕೊಪ್ಪಲಿನ ಕಾಪ್ಸ್ (ಕೂರ್ಗ್ ಪಬ್ಲಿಕ್ ಸ್ಕೂಲ್)ನಲ್ಲಿ ಕಡ್ಡಾಯ ಶಿಕ್ಷಣ ನಿಯಮದ ಅನ್ವಯ ಒಂದು ಸೀಟು ನೀಡಲು ನಿರಾಕರಿಸಿದ್ದಾರೆ. ಉಳಿದಂತೆ ಇತರ ಶಾಲೆಗಳ ಪ್ರವೇಶಕ್ಕೆ ಬಂದ 183 ಅರ್ಜಿಗಳಲ್ಲಿ 181 ವಿದ್ಯಾರ್ಥಿಗಳಿಗೆ ಸೀಟು ದೊರಕಿಸಿ ಕೊಡಲಾಗಿದೆ ಎಂದು ಹೇಳಿದರು.

ಮದ್ಯದ ಅಂಗಡಿಗಳಲ್ಲಿ ಮಾರುಕಟ್ಟೆ ಬೆಲೆಗಿಂತ ಮದ್ಯಕ್ಕೆ ಅಧಿಕ ಬೆಲೆ ತೆಗೆದುಕೊಳ್ಳಲಾಗುತ್ತಿದೆ. ಇದರಿಂದ ಗ್ರಾಹರಿಕೆಗೆ ಹೊರೆಯಾಗುತ್ತಿದೆ. ಇಂತಹ ಮದ್ಯದಂಗಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಜತೆಗೆ ಮದ್ಯದ ದರಪಟ್ಟಿಯನ್ನು ಗ್ರಾಹಕರಿಗೆ ಕಾಣುವಂತೆ ಲಗತ್ತಿಸಬೇಕು. ಈ  ಬಗ್ಗೆ ಮದ್ಯ ಮಾರಾಟ ಮಾಲೀಕರಿಗೆ ಅರಿವು ಮೂಡಿಸಬೇಕು ಎಂದು ತಾಲ್ಲೂಕು  ಪಂಚಾಯಿತಿ ಅಧ್ಯಕ್ಷ ಅರುಣ್ ಭೀಮಯ್ಯ ಅಬಕಾರಿ ಇನ್ಸ್‌ಪೆಕ್ಟರ್ ಸೋಮಣ್ಣ ಅವರಿಗೆ ಸೂಚಿಸಿದರು.

ನಿರ್ಮಿತಿ ಕೇಂದ್ರದವರು ಗುತ್ತಿಗೆ ಪಡೆದಿರುವ ಹಲವು ಕಟ್ಟಡ ಕಾಮಗಾರಿ ತಾಲ್ಲೂಕಿನಾದ್ಯಂತ ನೆನಗುದಿಗೆ ಬಿದ್ದಿದೆ. ಇವುಗಳನ್ನು ಪೂರ್ಣಗೊಳಿಸುವ ಇರಾದೆ ನಿರ್ಮಿತಿ ಕೇಂದ್ರಕ್ಕೆ ಇದ್ದಂತ್ತಿಲ್ಲ. ಇದರ ಬಗ್ಗೆ ಸೂಕ್ತ ಕ್ರಮಕಗೊಳ್ಳಬೇಕು ಎಂದು ಹಲವು ಸದಸ್ಯರು ಸಭೆಯಲ್ಲಿ ಒತ್ತಾಯಿಸಿದರು.

ಅಂಗನವಾಡಿ ಕಾರ್ಯಕರ್ತೆಯರನ್ನು ಸರ್ಕಾರದ ಎಲ್ಲ ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತಿದೆ. ದಯಮಾಡಿ ಅವರಿಗೆ ಮಾತೃಇಲಾಖೆಯಲ್ಲಿ ಕೆಲಸಮಾಡಲು ಬಿಡಿ ಎಂದು ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಮಹಾಮಂಡಳದ ಅಧ್ಯಕ್ಷೆ ಕಾವೇರಮ್ಮ ಹಾಗೂ ಕ್ಷೇಮನಿಧಿ ಅಧ್ಯಕ್ಷೆ ಗೌರಮ್ಮ ಮನವಿ ಮಾಡಿಕೊಂಡರು.

ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ತೀತಿರ ಊರ್ಮಿಳಾ ಸೋಮಯ್ಯ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ವಾಟೇರಿರ ಬೋಪಣ್ಣ, ಕಾರ್ಯನಿರ್ವ ಹಣಾಧಿಕಾರಿ ಅಲೆಗ್ಸಾಂಡರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.