ADVERTISEMENT

ಸಂಭ್ರಮದ ಜಯದೇವ ಜಾನುವಾರು ಜಾತ್ರೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2013, 5:55 IST
Last Updated 4 ಫೆಬ್ರುವರಿ 2013, 5:55 IST
ಶನಿವಾರಸಂತೆ ಬಳಿ ಗುಡುಗಳಲೆ ಜಯದೇವ ಜಾನುವಾರುಗಳ ಜಾತ್ರೆಯಲ್ಲಿ ಹಾಸನ ಜಿಲ್ಲೆಯ ಮಾರಿಗುಡಿಕೊಪ್ಪಲು ಗ್ರಾಮದ ರೈತ ದೇವೇಗೌಡ ಪ್ರದರ್ಶನಕ್ಕೆ ತಂದಿರುವ 75 ಸಾವಿರ ರೂಪಾಯಿ ಬೆಲೆ ಬಾಳುವ ರಾಸುಗಳು ಜನರನ್ನು ಆಕರ್ಷಿಸುತ್ತಿವೆ.
ಶನಿವಾರಸಂತೆ ಬಳಿ ಗುಡುಗಳಲೆ ಜಯದೇವ ಜಾನುವಾರುಗಳ ಜಾತ್ರೆಯಲ್ಲಿ ಹಾಸನ ಜಿಲ್ಲೆಯ ಮಾರಿಗುಡಿಕೊಪ್ಪಲು ಗ್ರಾಮದ ರೈತ ದೇವೇಗೌಡ ಪ್ರದರ್ಶನಕ್ಕೆ ತಂದಿರುವ 75 ಸಾವಿರ ರೂಪಾಯಿ ಬೆಲೆ ಬಾಳುವ ರಾಸುಗಳು ಜನರನ್ನು ಆಕರ್ಷಿಸುತ್ತಿವೆ.   

ಶನಿವಾರಸಂತೆ: ಗುಡುಗಳಲೆಯ ಮೈದಾನದಲ್ಲಿ ನಡೆಯುತ್ತಿರುವ ಜಯದೇವ ಜಾನುವಾರು ಜಾತ್ರೆಗೆ ಫೆ. 6 ಕಡೆ ದಿನ. ಈ ಬಾರಿ   ರಾಸುಗಳ ಸಂಖ್ಯೆ ಕಡಿಮೆಯಾಗಿದ್ದರೂ ಗ್ರಾಮೀಣ ಜನರನ್ನು ಬಹಳವಾಗಿ ಆಕರ್ಷಿಸಿದೆ.

ಜಾತ್ರೆಗೆ ಬಂದಿರುವ ರಾಸುಗಳ ಸಂಖ್ಯೆ 2 ಸಾವಿರ ದಾಟಿದೆ. ಜೋಡಿ ಎತ್ತುಗಳು 25 ಸಾವಿರ ರೂಪಾಯಿಂದ 75 ಸಾವಿರ ರೂಪಾಯಿಯವರೆಗೂ ಮಾರಾಟವಾಗುತ್ತಿವೆ.

ಹಾಸನ ಜಿಲ್ಲೆಯ ವಿವಿಧೆಡೆಯಿಂದ ಅಧಿಕ ಸಂಖ್ಯೆಯಲ್ಲಿ ರಾಸುಗಳು ಬಂದಿವೆ. ಹಾಸನ ಜಿಲ್ಲೆಯ ಮಾರಿಗುಡಿ ಕೊಪ್ಪಲು ಗ್ರಾಮದ ರೈತ ದೇವೇಗೌಡ ತಂದಿರುವ 3 ವರ್ಷದ ಜೊತೆ ಹೋರಿಗಳೇ ಜಾತ್ರೆಯಲ್ಲಿ ಅಧಿಕ ಬೆಲೆ ಬಾಳುವ ರಾಸುಗಳಾಗಿವೆ. ಇವುಗಳ ಬೆಲೆ ಬರೋಬ್ಬರಿ 75 ಸಾವಿರ ರೂಪಾಯಿ. ಹಂಡ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಶನಿವಾರಸಂತೆ ಗ್ರಾಮ ಪಂಚಾಯಿತಿ ಹಾಗೂ ಜಾತ್ರಾ ಸಮಿತಿಯ ಜಂಟಿ ಆಶ್ರಯದಲ್ಲಿ ಜಾನುವಾರುಗಳ ಜಾತ್ರೆ ನಡೆಯುತ್ತಿದೆ.

ನಿತ್ಯ ಸಂಜೆ ಸಾಂಸ್ಕೃತಿಕ ಮತ್ತು ಮನೋರಂಜನಾ ಕಾರ್ಯಕ್ರಮಗಳು ನಡೆಯುತ್ತಿವೆ. ಶನಿವಾರ ರಾತ್ರಿ ಮೈಸೂರಿನ ಪುಟ್ಟು ಮೆಲೋಡೀಸ್‌ನಿಂದ ರಸಮಂಜರಿ, ಬೆಂಗಳೂರು ತಂಡದಿಂದ ಲೇಸರ್ ಶೋ ನಡೆಯಿತು. ಭಾನುವಾರ ಮಧ್ಯಾಹ್ನ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ನಡೆಯಿತು.

ಹಿಂದಿನ ವೈಭವವನ್ನು ಮತ್ತೆ ಗಳಿಸಿಕೊಂಡು ಜಾನುವಾರು ಜಾತ್ರೆಯನ್ನು ಉಳಿಸಿಕೊಳ್ಳಬೇಕಾಗಿದೆ. ಜಾತ್ರಾ ಸಮಿತಿಯೊಂದಿಗೆ ಜನಪ್ರತಿನಿಧಿಗಳ ಸಹಕಾರ ಅಗತ್ಯ ಎಂದು ಜಾತ್ರಾ ಸಮಿತಿ ಅಧ್ಯಕ್ಷ ಎಂ.ಜೆ.ಪರಮೇಶ್ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.