ಮೈಸೂರು: ಪ್ರತಿ ತಿಂಗಳ ಮೂರನೇ ಗುರುವಾರದಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯುವ ಕುಂದುಕೊರತೆ ವಿಚಾರಣೆ ಮತ್ತು ಫೋನ್ ಇನ್ ಕಾರ್ಯಕ್ರಮದಲ್ಲಿ ಈ ಬಾರಿ ಕುಂದು ಕೊರತೆಗಳು ಕಾಡಿದವು!
ಕಾರ್ಯಕ್ರಮದ ಆರಂಭದಲ್ಲಿಯೇ ಅತಿ ಮುಖ್ಯವಾಗಿ ಫೋನ್ ಕೈಕೊಟ್ಟರೆ, ಪರ್ಯಾಯ ವ್ಯವಸ್ಥೆ ಮಾಡಿಕೊಂಡು ಜಿಲ್ಲಾಧಿಕಾರಿಗಳು ಅಹವಾಲಿನ ಕರೆಗಳನ್ನು ಸ್ವೀಕರಿಸಲು ಆರಂಭಿಸಿದಾಗ, ಸರ್ಕಾರಿ ಇಲಾಖೆಗಳ ನೌಕರರಿಂದಲೇ ಹಲವು ಕರೆಗಳು ಬಂದವು.
ಜಿಲ್ಲೆಯ ಎಲ್ಲ ಇಲಾಖೆಗಳ ಅಧಿಕಾರಿಗಳ ಸಮ್ಮುಖದಲ್ಲಿ ಬೆಳಿಗ್ಗೆ ಬಂದ ಮೊದಲ ಕರೆಯನ್ನು ಸ್ವೀಕರಿಸಿದ ಜಿಲ್ಲಾಧಿಕಾರಿ ಸಿ. ಶಿಖಾ ಅವರು ಮಾತನಾಡಿದ್ದು ಆ ಬದಿಯ ವ್ಯಕ್ತಿಗೆ ಕೇಳಿಸದೇ ತೊಂದರೆಯಾಯಿತು. ‘ಹಲೋ ನಮಸ್ಕಾರ ನಾನು ಡಿಸಿ ಮಾತನಾಡ್ತೇನೆ, ನಿಮ್ಮ ಸಮಸ್ಯೆ ಕುರಿತು ಹೇಳಿ’ ಎಂದು ಆತ್ಮೀಯವಾಗಿ ವಿಚಾರಿಸಿದ್ದು, ತಾಂತ್ರಿಕ ದೋಷದ ಕಾರಣ ಆ ಬದಿಯವರಿಗೆ ಕೇಳಿಸಲಿಲ್ಲ.
ಆಗ ಡಿಸಿಯವರೇ ಸ್ಥಳ ಬದಲಿಸಬೇಕಾಯಿತು. ಪ್ರತಿ ಕಾರ್ಯಕ್ರಮದಲ್ಲಿಯೂ ಡಿಸಿ ಕಚೇರಿಯ ತಹಶೀಲ್ದಾರ ರಂಗನಾಥ್, ಜಿಲ್ಲಾಧಿಕಾರಿಗಳ ಆಪ್ತ ಸಹಾಯಕರು, ದೂರು ದಾಖಲೆ ಸಿಬ್ಬಂದಿ ಕುಳಿತುಕೊಳ್ಳುವ ಸ್ಥಳವೇ ಈ ಬಾರಿ ಫೋನ್ ಇನ್ ನೇರ ಕಾರ್ಯಕ್ರಮಕ್ಕೆ ಬಳಕೆಯಾಯಿತು. ಇಲ್ಲಿಂದಲೇ ಫೋನ್ ಮೂಲಕ ಜನರ ಅಹವಾಲು ಸ್ವೀಕರಿಸಿದರು.
ಸರ್ಕಾರಿ ನೌಕರರ ಅಹವಾಲು: ಜಮೀನು ತಕರಾರು, ವಿದ್ಯುತ್, ಒತ್ತುವರಿ ಸಮಸ್ಯೆಗಳ ಕುರಿತು ನಿರಂತರವಾಗಿ ಬಂದ ಕರೆಗಳ ನಡುವೆ ಎರಡು ಕರೆಗಳ ಗಮನ ಸೆಳೆದವು.
ಅದರಲ್ಲಿ ಒಂದು ಕೃಷಿ ಇಲಾಖೆಯ ನೌಕರ ಮತ್ತು ಇನ್ನೊಂದು ಶಿಕ್ಷಕಿಯಿಂದ ಬಂದ ಕರೆಗಳಾಗಿದ್ವವು. ನಂಜನಗೂಡಿನ ಕೃಷಿ ಇಲಾಖೆಯ ನೌಕರರಿಗೆ ಸಂಬಳ ಬಂದಿಲ್ಲ ಎಂಬ ದೂರು ಆಲಿಸಿದ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾ ಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲ್ ಅವರನ್ನು ವಿಚಾರಿಸಿದರು.
‘ಜಿಲ್ಲಾ ಪಂಚಾಯಿತಿಯಿಂದ ಹಣ ಬಿಡುಗಡೆಯಾಗಿದೆಯೇ ಎಂಬುದನ್ನು ಪರಿಶೀಲಿಸಿ. ಸರ್ಕಾರಿ ನೌಕರರು ಸಾರ್ವಜನಿಕ ಕುಂದುಕೊರತೆ ಕಾರ್ಯಕ್ರಮದಲ್ಲಿ ದೂರು ನೀಡುತ್ತಾರೆ ಎಂದರೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ನೌಕರರ ಸಮಸ್ಯೆಗೆ ಸ್ಪಂದಿಸುತ್ತಿಲ್ಲವೇ? ಇಂತಹ ಸಣ್ಣಪುಟ್ಟ ತೊಂದರೆಗಳನ್ನು ಇಲಾಖಾಮಟ್ಟದಲ್ಲಿಯೇ ಪರಿಹರಿಸ ಬೇಕು’ ಎಂದು ಹೇಳಿದರು.
ತದನಂತರವೂ ಸರ್ಕಾರಿ ಶಾಲೆಯ ಶಿಕ್ಷಕಿ ವಿಜಯಲಕ್ಷ್ಮೀ ಅವರು ತಿ. ನರಸೀಪುರದಿಂದ ಕರೆ ಮಾಡಿ, ‘ನನ್ನ ಪತಿ ಡಿ. ಗುಂಪಿನ ನೌಕರರಾಗಿದ್ದಾರೆ. ಅವರ ಎರಡೂ ಮೂತ್ರಪಿಂಡಗಳು ಅನಾರೋಗ್ಯಕ್ಕೆ ತುತ್ತಾಗಿವೆ. ಇಲಾಖೆಯಿಂದ ವೈದ್ಯಕೀಯ ಮುಂಗಡ ಕೋರಿದ್ದೇನೆ.
ಆದರೆ, ಸಾಕಷ್ಟು ಕಾಲ ಕಳೆದರೂ ಮಂಜೂರಾಗಿಲ್ಲ’ ಎಂದು ದೂರಿದರು. ಕೂಡಲೇ ಸ್ಪಂದಿಸಿದ ಡಿಸಿ ಶಿಖಾ, ‘ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಪರಿಶೀಲನೆ ನಡೆಸಿ, ಕೂಡಲೇ ಮುಂಗಡ ಮಂಜೂರು ಮಾಡಬೇಕು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದರು.
ಅಕ್ರಮ ಗಣಿಗಾರಿಕೆ: ಹೆಗ್ಗಡದೇವನಕೋಟೆ ತಾಲ್ಲೂಕಿನ ಕೊಡಚಿ ಗ್ರಾಮದ ಸಮೀಪ ನಡೆಯುತ್ತಿದೆ ಎನ್ನಲಾದ ಅಕ್ರಮ ಕಲ್ಲು ಗಣಿಗಾರಿಕೆಯ ಕುರಿತು ಎಂ. ಡಿ. ಕುಮಾರಸ್ವಾಮಿ ಅವರ ದೂರು ಸ್ವೀಕರಿಸಿದ ಜಿಲ್ಲಾಧಿಕಾರಿಗಳು, ಗಣಿಗಾರಿಕೆ ನಿರ್ಬಂಧಿಸಿ, ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ತಹಶೀಲ್ದಾರ್ ಅವರಿಗೆ ಸೂಚಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.