ADVERTISEMENT

ಹನ್ನೆರಡು ತಂಡಗಳು ಮುಂದಿನ ಹಂತಕ್ಕೆ

ಆತಿಥೇಯ ಕುಲ್ಲೇಟಿರ ತಂಡದ ಮುನ್ನಡೆ: ಕುಲ್ಲೇಟಿರ ಕಪ್ ಹಾಕಿಟೂರ್ನಿ

​ಪ್ರಜಾವಾಣಿ ವಾರ್ತೆ
Published 9 ಮೇ 2018, 12:44 IST
Last Updated 9 ಮೇ 2018, 12:44 IST
ಹನ್ನೆರಡು ತಂಡಗಳು ಮುಂದಿನ ಹಂತಕ್ಕೆ
ಹನ್ನೆರಡು ತಂಡಗಳು ಮುಂದಿನ ಹಂತಕ್ಕೆ   

ನಾಪೋಕ್ಲು: ಇಲ್ಲಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕುಲ್ಲೇಟಿರ ಕಪ್ ಹಾಕಿ ಉತ್ಸವದ ಮಂಗಳವಾರದ ಪಂದ್ಯಗಳಲ್ಲಿ ಅನ್ನಾಡಿಯಂಡ, ಮಂಡೇಪಂಡ, ಮಾಚಿಮಾಡ, ಮೇಕೇರಿರ,ಕುಲ್ಲೇಟಿರ ಸೇರಿದಂತೆ 12ತಂಡಗಳು ಮುನ್ನಡೆ ಸಾಧಿಸಿವೆ.

ಮೈದಾನ ಒಂದರಲ್ಲಿ ನಡೆದ ಮೊದಲ ಪಂದ್ಯದಲ್ಲಿ ಅನ್ನಾಡಿಯಂಡ ತಂಡವು ತಿರುತೆರ ತಂಡವನ್ನು 3-1 ಗೋಲುಗಳ ಅಂತರದಿಂದ ಮಣಿಸಿ ಮುಂದಿನ ಸುತ್ತಿಗೆ ಪ್ರವೇಶಿಸಿತು. ಅನ್ನಾಡಿಯಂಡ ತಂಡದ ಆಟಗಾರರಾದ ನಿಖಿಲ್, ಸಜನ್, ನವೀನ್, ತಲಾ ಒಂದು ಗೋಲು ಗಳಿಸಿದರೆ ತಿರುತೆರ ತಂಡದ ಪರ ಗೌತಮ್ ಒಂದು ಗೋಲು ಗಳಿಸಿದರು. ಎರಡನೇ ಪಂದ್ಯದಲ್ಲಿ ಮಂಡೇಪಂಡ ತಂಡವು ಬಾಚಿರ ತಂಡದ ವಿರುದ್ದ 4-0 ಅಂತರದ ಗೆಲುವು ಸಾಧಿಸಿತು.
ಮಂಡೇಪಂಡ ತಂಡದ ಗೌತಮ್ 2 ಬೋಪಣ್ಣ 1 ಹಾಗೂ ದಿಲನ್ ಒಂದು ಗೋಲು ಗಳಿಸಿದರು.

ಮೂರನೇ ಪಂದ್ಯದಲ್ಲಿ ಕೂತಂಡ ತಂಡವು ಕಂಗಾಂಡ ತಂಡದ ವಿರುದ್ಧ 3-1 ಅಂತರದ ಗೆಲುವು ಸಾಧಿಸಿ ಮುಂದಿನ ಸುತ್ತು ಪ್ರವೇಶಿಸಿತು. ಕೂತಂಡ ತಂಡದ ಪರ ಸಂತೋಷ್ ಎರಡು ಗೋಲು ಗಳಿಸಿದರೆ ಬೋಪಣ್ಣ ಒಂದು ಗೋಲು ಗಳಿಸಿದರು.

ADVERTISEMENT

ಕಂಗಾಂಡ ತಂಡದ ಮುತ್ತಪ್ಪ ಒಂದು ಗೋಲು ಹೊಡೆದರು. ನಾಲ್ಕನೇ ಪಂದ್ಯದಲ್ಲಿ ಪೆಮ್ಮಂಡ ತಂಡವು ಮಾಚಿಮಾಡ ತಂಡದ ವಿರುದ್ಧ 3-1 ಅಂತರದ ಗೆಲುವು ಸಾಧಿಸಿತು. ಪೆಮ್ಮಂಡ ತಂಡದ ಅಪ್ಪಣ್ಣ ಸೋಮಣ್ಣ ಬೋಪಣ್ಣ ತಲಾ ಒಂದು ಗೋಲು ಗಳಿಸಿದರು. ಮಾಚಿಮಾಡ ತಂಡದ ದರ್ಶನ್ ಒಂದು ಗೋಲು ದಾಖಲಿಸಿದರು. ಇಟ್ಟೀರ ಮತ್ತು ಮೇಕೇರಿರ ತಂಡಗಳ ನಡುವೆ ನಡೆದ ಐದನೇ ಪಂದ್ಯದಲ್ಲಿ ಮೇಕೆರಿರ ತಂಡವು ಟೈಬ್ರೇಕರ್ ಮೂಲಕ ಇಟ್ಟೀರ ತಂಡದ ವಿರುದ್ದ 4-3 ಅಂತರದ ಗೆಲುವು ಸಾಧಿಸಿತು. ಆರನೇ ಪಂದ್ಯದಲ್ಲಿ ಆತಿಥೇಯ ಕುಲ್ಲೇಟಿರ ತಂಡವು ಮದ್ರೀರ ತಂಡದ ವಿರುದ್ಧ 3-0 ಅಂತರದ ಮುನ್ನಡೆಯೊಂದಿಗೆ ಮುಂದಿನ ಹಂತ ಪ್ರವೇಶಿಸಿತು. ಕುಲ್ಲೇಟಿರ ತಂಡದ ನಂದಾನಾಚಪ್ಪ, ಶುಭಂ ಹಾಗೂ ಯತೀನ್ ತಲಾ ಒಂದು ಗೋಲು ಗಳಿಸಿದರು.‌

ಮೈದಾನ ಎರಡರಲ್ಲಿ ನಡೆದ ಮೊದಲ ಪಂದ್ಯದಲ್ಲಿ ಬಾಳೆಯಡ ತಂಡವು ಪುಲಿಯಂಡ ತಂಡದ ವಿರುದ್ಧ 2-0 ಅಂತರದ ಗೆಲುವು ಸಾಧಿಸಿತು. ಬಾಳೆಯಡ ತಂಡದ ಪವನ್ ಸೋಮಯ್ಯ ಹಾಗೂ ಸುತನ್ ತಲಾ ಒಂದು ಗೋಲು ಗಳಿಸಿದರು. ಚೆರುಮಂದಂಡ ಹಾಗೂ ಮಾಚಂಗಡ ತಂಡಗಳ ನಡುವೆ ನಡೆದ ಎರಡನೇ ಪಂದ್ಯದಲ್ಲಿ ಚೆರುಮಂದಂಡ ತಂಡವು 3-2 ಅಂತರದ ಮುನ್ನಡೆ ಸಾಧಿಸಿತು. ಚೆರುಮಂದಂಡ ತಂಡದ ಪರ ಕವನ್ ಕಾರ್ಯಪ್ಪ ಒಂದು ಗೋಲು ಗಳಿಸಿದರೆ ಸೋಮಣ್ಣ ಎರಡು ಗೋಲು ದಾಖಲಿಸಿದರು.

ಮಾಚಂಗಡ ತಂಡದ ಪರ ದರ್ಶನ್ ಪೂವಯ್ಯ ಹಾಗೂ ಅಯ್ಯಪ್ಪ ತಲಾ ಒಂದು ಗೋಲು ಹೊಡೆದರು. ಕಾಂಡಂಡ ಮತ್ತು ಚಂದಪಂಡ ತಂಡಗಳ ನಡುವಿನ ಮೂರನೇ ಪಂದ್ಯದಲ್ಲಿ ಕಾಂಡಂಡ ತಂಡವು 3-1 ಅಂತರದ ಗೆಲುವು ಸಾಧಿಸಿತು. ಅಜಯ್ ಅಯ್ಯಪ್ಪ ಒಂದು ಗೋಲು ಹೊಡೆದರೆ ಕಿರಣ್ ಮಂದಯ್ಯ ಎರಡು ಗೋಲು ದಾಖಲಿಸಿದರು. ಂದಪಂಡ ತಂಡದ ಪರ ಆಕಾಶ್ ಚೆಂಗಪ್ಪ ಒಂದು ಗೋಲು ದಾಖಲಿಸಿದರು.
ಮುಂಡೋಟಿರ ಮತ್ತು ಮುಕ್ಕಾಟಿರ(ಬೋಂದ) ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮುಂಡೋಟಿರ ತಂಡವು 2-0 ಅಂತರದಲ್ಲಿ ಸೋಲನ್ನು ಅನುಭವಿಸಿತು.

ಮುಕ್ಕಾಟಿರ ತಂಡದ ಪರ ವಸಂತ್ ಬೋಪಣ್ಣ ಹಾಗೂ ಚರಣ್ ನಾಚಪ್ಪ ತಲಾ ಒಂದು ಗೋಲು ಗಳಿಸಿದರು. ಐಚಂಡ ಮತ್ತು ಮಾಚಂಡ ತಂಡಗಳ ನಡುವಿನ ಪಂದ್ಯದಲ್ಲಿ ಮಾಚಂಡ ತಂಡವು 3-0 ಅಂತರದ ಗೆಲುವು ಪಡೆಯಿತು. ಮಾಚಂಡ ತಂಡದ ಪರ ಪ್ರಿನ್ಸ್ ಎರಡು ಗೋಲು ದಾಖಲಿಸಿದರೆ ನೂತನ್ ಒಂದು ಗೋಲು ದಾಖಲಿಸಿದರು. ಆರನೇ ಪಂದ್ಯದಲ್ಲಿ ಕೋಡಂಡ ತಂಡವು ಕರ್ತಮಾಡ (ಬಿರುನಾಣಿ) ತಂಡದ ವಿರುದ್ದ ಸೋಲನ್ನು ಅನುಭವಿಸಿತು.

ಕರ್ತಮಾಡ ತಂಡದ ಅಯ್ಯಪ್ಪ ಎರಡು ಹಾಗೂ ರಿಕಿನ್ಗಣಪತಿ ಒಂದು ಗೋಲು ಗಳಿಸಿ ಕರ್ತಮಾಡ ತಂಡದ ಗೆಲುವಿಗೆ ಕಾರಣರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.