ಸೋಮವಾರಪೇಟೆ: ಹಾಕಿ ಆಟದ ಬಗ್ಗೆ ಹೆಚ್ಚಿನ ಒಲವು ಇರುವ ಕೊಡಗಿನಲ್ಲಿ ಹಾಕಿ ಅಕಾಡೆಮಿ ಸ್ಥಾಪನೆಯಾಗುವ ಅವಶ್ಯಕತೆಯಿದೆ ಎಂದು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅಭಿಪ್ರಾಯಪಟ್ಟರು.
ಮಂಗಳವಾರ ಪತ್ರಿಕಾಭವನದಲ್ಲಿ ನಗರ ಪತ್ರಕರ್ತರ ಸಂಘ ಹಾಗೂ ಪತ್ರಿಕಾಭವನ ಟ್ರಸ್ಟ್ ಆಶ್ರಯದಲ್ಲಿ ಅಂತರರಾಷ್ಟ್ರೀಯ ಹಾಕಿ ಆಟಗಾರ ಎಸ್.ವಿ.ಸುನಿಲ್ಗೆ ಏರ್ಪಡಿಸಿದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಾಕಿ ಅಕಾಡೆಮಿ ಸ್ಥಾಪನೆಯಾದರೆ ಸ್ಥಳೀಯ ಪ್ರತಿಭಾವಂತ ಕ್ರೀಡಾಪಟುಗಳಿಗೆ ಸೂಕ್ತ ವೇದಿಕೆ ಸಿಗುತ್ತದೆ ಎಂದರು.
ಅಂತರರಾಷ್ಟ್ರೀಯ ಮಟ್ಟದಲ್ಲಿ ಜಿಲ್ಲೆಗೆ ಕೀರ್ತಿ ತಂದಿರುವ ಸೋಮವಾರಪೇಟೆಯ ಹಾಕಿ ಕ್ರೀಡಾಪಟು ಎಸ್.ವಿ.ಸುನಿಲ್ ಅವರಿಗೆ ಸರ್ಕಾರದಿಂದ ಉಚಿತ ನಿವೇಶನ ಒದಗಿಸುವುದಾಗಿ ಭರವಸೆ ನೀಡಿದರು. ರಾಷ್ಟ್ರೀಯ ಹಾಕಿತಂಡದ ನಾಯಕತ್ವವನ್ನು ಮುಂದಿನ ದಿನಗಳಲ್ಲಿ ಸುನಿಲ್ ವಹಿಸಿಕೊಳ್ಳುವಂತಾಗಲಿ ಎಂದು ಹಾರೈಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಎಸ್.ವಿ.ಸುನಿಲ್, ನಾನು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿ ಕೊಳ್ಳಲು ಸೋಮವಾರಪೇಟೆಯ ಬ್ಲೂಸ್ಟಾರ್ ಹಾಕಿ ಸಂಸ್ಥೆಯ ಪ್ರೋತ್ಸಾಹವೇ ಕಾರಣ. 2012 ರ ಇಂಗ್ಲೆಂಡ್ ಒಲಿಂಪಿಕ್ಸ್ಗೆ ಅರ್ಹತೆ ಗಳಿಸುವುದು ಮುಂದಿನ ಗುರಿಯಾಗಿದೆ ಎಂದು ನುಡಿದರು.
ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ಎಸ್.ಮಹೇಶ್ ಅಧ್ಯಕ್ಷತೆ ವಹಿಸಿದ್ದರು. ಕೊಡಗು ಹಾಕಿ ಸಂಸ್ಥೆಯ ಉಪಾಧ್ಯಕ್ಷ ಬಿ.ಎಂ.ಸುರೇಶ್, ಬ್ಲೂಸ್ಟಾರ್ ಹಾಕಿ ಸಂಸ್ಥೆಯ ಸ್ಥಾಪಕ ಸದಸ್ಯ ಬಿ.ಡಿ.ಮಂಜುನಾಥ್ ಮಾತನಾಡಿದರು.
ನಗರ ಪತ್ರಕರ್ತರ ಸಂಘದ ಅಧ್ಯಕ್ಷ ಕೋವರ್ಕೊಲ್ಲಿ ಇಂದ್ರೇಶ್ ವೇದಿಕೆಯಲ್ಲಿದ್ದರು. ಬಳಿಕ ಹಾಕಿ ಪ್ರೇಮಿಗಳೊಂದಿಗೆ ಸುನಿಲ್ ಸಂವಾದ ನಡೆಸಿದರು. ವಿಜಯ್ ಹಾನಗಲ್ ಸ್ವಾಗತಿಸಿ, ಹಿರಿಕರ ರವಿ ನಿರೂಪಿಸಿ ಸೈಯದ್ ಇರ್ಫಾನ್ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.