ADVERTISEMENT

ಹಾರಂಗಿ ಉದ್ಯಾನಕ್ಕೆ ಸಂಗೀತ ಕಾರಂಜಿ ಮೆರುಗು

ರಘು ಹೆಬ್ಬಾಲೆ
Published 25 ಡಿಸೆಂಬರ್ 2017, 9:27 IST
Last Updated 25 ಡಿಸೆಂಬರ್ 2017, 9:27 IST
ಕುಶಾಲನಗರ ಸಮೀಪದ ಹಾರಂಗಿ ಜಲಾಶಯದ ಮುಂಭಾಗದ ಉದ್ಯಾನ
ಕುಶಾಲನಗರ ಸಮೀಪದ ಹಾರಂಗಿ ಜಲಾಶಯದ ಮುಂಭಾಗದ ಉದ್ಯಾನ   

ಕುಶಾಲನಗರ: ಕೊಡಗು ಜಿಲ್ಲೆಯ ಪ್ರಮುಖ ಪ್ರವಾಸಿತಾಣಗಳಲ್ಲಿ ಒಂದಾಗಿರುವ ಹಾರಂಗಿ ಜಲಾಶಯದ ಮುಂಭಾಗದಲ್ಲಿ ನಿರ್ಮಾಣಗೊಂಡಿರುವ ಸುಂದರ ಉದ್ಯಾನಕ್ಕೆ ಇನ್ನು ಸಂಗೀತ ಕಾರಂಜಿ ಮೆರುಗು ನೀಡಲಿದೆ.

ಮೈಸೂರು ಕೆಆರ್ಎಸ್ ಬೃಂದಾವನ ಮಾದರಿಯಲ್ಲಿ ಸುಮಾರು ₹ 5 ಕೋಟಿ ವೆಚ್ಚದಲ್ಲಿ ಜಲಾಶಯದ ಮುಂಭಾಗದ 33 ಎಕರೆ ಪ್ರದೇಶದಲ್ಲಿ ಉದ್ಯಾನ ನಿರ್ಮಿಸಲಾಗಿದೆ. ಇದರೊಂದಿಗೆ ₹ 2 ಕೋಟಿ ವೆಚ್ಚದಲ್ಲಿ ಸಂಗೀತ ಕಾರಂಜಿಯನ್ನು ನಿರ್ಮಾಣ ಮಾಡಲಾಗಿದೆ. ಸಂಗೀತ ಕಾರಂಜಿಯೊಂದಿಗೆ ವಿವಿಧ ಶೈಲಿಯ 18 ಕಾರಂಜಿಗಳು ಪ್ರವಾಸಿಗರನ್ನು ಸೆಳೆಯಲು ಸಿದ್ಧಗೊಂಡಿವೆ.

ಏಕಕಾಲದಲ್ಲಿ ಐನೂರಕ್ಕೂ ಹೆಚ್ಚು ಮಂದಿ ಕುಳಿತು ಸಂಗೀತ ಕಾರಂಜಿಯ ನೃತ್ಯವೈಭವವನ್ನು ವೀಕ್ಷಿಸಿಸಲು ವೇದಿಕೆ ಕೂಡ ನಿರ್ಮಿಸಲಾಗಿದೆ ಎಂದು ಸಹಾಯಕ ಎಂಜಿನಿಯರ್ ಎಸ್.ಎನ್.ನಾಗರಾಜು ಹೇಳಿದರು.

ADVERTISEMENT

‘ಜಿಲ್ಲೆಗೆ ಜ. 9ರಂದು ಭೇಟಿ ನೀಡಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಕಾರಂಜಿ ಉದ್ಘಾಟನೆ ಮಾಡಿಸಲು ಇಲಾಖೆ ಸಿದ್ಧತೆ ನಡೆಸಿದೆ. ಸಂಗೀತ ಕಾರಂಜಿ ಕಾಮಗಾರಿ ಪೂರ್ಣಗೊಂಡಿದ್ದು, ವಿದ್ಯುತ್ ಸಂಪರ್ಕ ಕೂಡ ಅಳವಡಿಸಲಾಗಿದೆ.

ಉದ್ಯಾನಕ್ಕಾಗಿ 250 ಕೆ.ವಿ.ವಿದ್ಯುತ್ ಸಂಪರ್ಕದ ಪ್ರತ್ಯೇಕ ವಿದ್ಯುತ್‌ ಪರಿವರ್ತಕ ಕೂಡ ಅಳವಡಿಸಲಾಗಿದೆ. ವಾರದೊಳಗೆ ವಿದ್ಯುತ್ ಕಾರ್ಯಾರಂಭವಾಗಲಿದೆ’ ಎಂದು ಅಣೆಕಟ್ಟೆ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಧರ್ಮರಾಜ್ ತಿಳಿಸಿದರು.

ಪ್ರವಾಸಿಗರ ಭದ್ರತೆಯ ದೃಷ್ಟಿಯಿಂದ ₹ 30 ಲಕ್ಷ ವೆಚ್ಚದಲ್ಲಿ ಉದ್ಯಾನದ ಪ್ರವೇಶ ಧ್ವಾರದಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ, ಭದ್ರತಾ ಸಿಬ್ಬಂದಿಗೆ ವಾಕಿಟಾಕಿ, ಬೈನಾಕ್ಯುಲರ್, ಬ್ಯಾರಿಕೇಡ್ ಮತ್ತಿತರರ ಉಪಕರಣಗಳನ್ನು ಒದಗಿಸಲಾಗಿದೆ.

ಮಳೆಗಾಲದಲ್ಲಿ ಹಾರಂಗಿ ಜಲಾಶಯದಿಂದ ದುಮ್ಮಿಕಿ ಹಾಲಿನ ನೊರೆಯಂತೆ ಹರಿಯುವ ಜಲಧಾರೆಯನ್ನು ವೀಕ್ಷಿಸಲು ಡ್ಯಾಂ ಪಕ್ಕದಲ್ಲಿ ತೂಗು ಸೇತುವೆ ನಿರ್ಮಿಸುವ ಮೂಲಕ ಜಲಾಶಯದ ಅಂದವನ್ನು ಹೆಚ್ಚಿಸಬೇಕು ಎಂಬುದು ಪ್ರವಾಸಿಗರ ಬೇಡಿಕೆಯಾಗಿದೆ.

* * 

ಉದ್ಯಾನಕ್ಕಾಗಿ 250 ಕೆ.ವಿ. ಸಾಮರ್ಥ್ಯದ ಪ್ರತ್ಯೇಕ ವಿದ್ಯುತ್‌ ಪರಿವರ್ತಕ ಅಳವಡಿಸಲಾಗಿದ್ದು, ವಿದ್ಯುತ್ ಪರಿವೀಕ್ಷರ ಪರಿಶೀಲನೆ ಬಳಿಕ ಸಂಗೀತ ಕಾರಂಜಿಗೆ ಚಾಲನೆ ನೀಡಲಾಗುವುದು
ಧರ್ಮರಾಜ್ಸ, ಹಾಯಕ ಕಾರ್ಯಪಾಲಕ ಎಂಜಿನಿಯರ್, ನೀರಾವರಿ ಇಲಾಖೆ ಹಾರಂಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.