ಸುಂಟಿಕೊಪ್ಪ: ಸಮೀಪದ ಚೆಟ್ಟಳ್ಳಿ ವ್ಯಾಪ್ತಿಯ ಕಂಡಕೇರೆಯ ಕಾಫಿಬೋರ್ಡ್ನ ಕಾಫಿ ತೋಟದಲ್ಲಿ ಬುಧವಾರ ಬೀಡುಬಿಟ್ಟಿದ್ದ 4 ಕಾಡಾನೆಗಳಲ್ಲಿ ಒಂದು ಹೆಣ್ಣಾನೆಗೆ ಅರಣ್ಯ ಇಲಾಖೆಯ ಸಿಬ್ಬಂದಿ ರೇಡಿಯೊ ಕಾಲರ್ ಅಳವಡಿಸುವಲ್ಲಿ ಸಫಲರಾಗಿದ್ದಾರೆ.
ಚೆಟ್ಟಳ್ಳಿ ವಿಭಾಗದಲ್ಲಿ ಈಚೆಗೆ ಕಾಡಾನೆಗಳ ಹಾವಳಿ ಹೆಚ್ಚಾಗಿದೆ ಎಂದು ಕಾಫಿ ಬೆಳೆಗಾರರು ಅರಣ್ಯ ಅಧಿಕಾರಿಗಳಿಗೆ ದೂರು ನೀಡಿದ್ದರು. ಈ ಬಗ್ಗೆ ಮಡಿಕೇರಿ ಎಸಿಎಫ್ ಚಿಣ್ಣಪ್ಪ, ಉಪ ಸಂರಕ್ಷಣಾಧಿಕಾರಿ ರಂಜನ್, ಕುಶಾಲನಗರ ವಲಯ ಅರಣ್ಯಾಧಿಕಾರಿ ಅರುಣ್ ಈ ವಿಭಾಗದಲ್ಲಿ ಸಿಬ್ಬಂದಿಯೊಂದಿಗೆ ಬೆಳಗಿನಿಂದಲೇ ಕಾರ್ಯಾಚರಣೆ ನಡೆಸಿದಾಗ 4 ಕಾಡಾನೆಗಳು ಕಾಫಿಬೋರ್ಡ್ನ ತೋಟದ ಕೆರೆಯ ಬಳಿ ಪತ್ತೆಯಾದವು.
ಆನಂತರ ಸಾಕಾನೆಗಳಾದ ಭೀಮ, ಅಭಿಮನ್ಯು ಅವರ ಜತೆ ಮಾವುತರಾದ ವಸಂತ, ರಾಧಾಕೃಷ್ಣ ಅವರನ್ನು ಸ್ಥಳಕ್ಕೆ ಕರೆಸಿ ಡಾ.ಮುಜಿಬು ಹಾಗೂ ಅರಣ್ಯ ಇಲಾಖಾ ವೀಕ್ಷಕರು, ಕಾವಾಡಿಗಳ ಸಮ್ಮುಖದಲ್ಲಿ ಒಂದು ಹೆಣ್ಣಾನೆಗೆ ಅರಿವಳಿಕೆ ಮದ್ದನ್ನು ನೀಡಿ ರೇಡಿಯೊ ಕಾಲರ್ ಅಳವಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.