ADVERTISEMENT

ಅಪಪ್ರಚಾರ: ಬಿಜೆಪಿ ಮುಖಂಡನ ವಿರುದ್ಧ ಡಿ.ಸಿ ದೂರು

​ಪ್ರಜಾವಾಣಿ ವಾರ್ತೆ
Published 10 ಜನವರಿ 2019, 6:45 IST
Last Updated 10 ಜನವರಿ 2019, 6:45 IST

ಮಡಿಕೇರಿ: ಕೇರಳದ ಶಬರಿಮಲೆಯ ಅಯ್ಯಪ್ಪ ದೇವಸ್ಥಾನಕ್ಕೆ ಇಬ್ಬರು ಮಹಿಳೆಯರು ಪ್ರವೇಶಿಸಿದ ವಿಚಾರದಲ್ಲಿ ಅಪಪ್ರಚಾರ ನಡೆಸಿದ್ದಾರೆಂದು ವರದರಾಜ್‌ ಎಂಬ ವ್ಯಕ್ತಿಯ ವಿರುದ್ಧ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರು ದೂರು ದಾಖಲಿಸಿದ್ದಾರೆ.

ಈತ ಬಿಜೆಪಿಯ ಸೋಮವಾರಪೇಟೆ ತಾಲ್ಲೂಕು ಘಟಕದ ಕಾರ್ಯದರ್ಶಿ.

ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ಖಂಡಿಸಿ ಜ.4ರಂದು ಕುಶಾನಗರದಲ್ಲಿ ಬಿಜೆಪಿ ನೇತೃತ್ವದಲ್ಲಿ ಪ್ರತಿಭಟನೆ ನಡೆದಿತ್ತು. ಈ ಪ್ರತಿಭಟನೆಯಲ್ಲಿ ವರದರಾಜ್‌ ಅವರು ‘ದೇವಸ್ಥಾನ ಪ್ರವೇಶಿಸಿದ ಮಹಿಳೆಯರಿಗೆ ವಿರಾಜಪೇಟೆ ಲಾಡ್ಜ್‌ನಲ್ಲಿ ವಾಸ್ತವ್ಯಕ್ಕೆ ಜಿಲ್ಲಾಧಿಕಾರಿ ಅವರೇ ಅವಕಾಶ ಮಾಡಿಕೊಟ್ಟಿದ್ದರು’ ಎಂದು ಆಪಾದಿಸಿದ್ದರು.

ADVERTISEMENT

ವರದರಾಜ್‌ ಅವರು ಸುಳ್ಳು ಆಪಾದನೆ ಮೇರೆಗೆ ಕರ್ತವ್ಯಕ್ಕೆ ಅಡ್ಡಿ ಉಂಟು ಮಾಡಿದ್ದಾರೆ ಎಂದು ಶ್ರೀವಿದ್ಯಾ ಕುಶಾಲನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಐಪಿಸಿ ಸೆಕ್ಷನ್‌ 504, 506, 509, ಹಾಗೂ 34ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಕನಕದುರ್ಗಾ ಹಾಗೂ ಬಿಂದು ಎಂಬ ಇಬ್ಬರು ಮಹಿಳೆಯರು ಜ.2ರಂದು ಅಯ್ಯಪ್ಪ ದೇವಸ್ಥಾನ ಪ್ರವೇಶಿಸುವ ಮೂಲಕ ಇತಿಹಾಸ ನಿರ್ಮಿಸಿದ್ದರು. ಡಿ. 29ರ ಮಧ್ಯಾಹ್ನ 12.15ಕ್ಕೆವಿರಾಜಪೇಟೆ ವಸತಿ ಗೃಹವೊಂದಕ್ಕೆ ಬಂದಿದ್ದಮಹಿಳೆಯರುಕೊಠಡಿ ಪಡೆದು ತಂಗಿದ್ದರು. 31ರಂದು ಕೊಠಡಿ ಖಾಲಿ ಮಾಡಿ ಕೇರಳದತ್ತ ಪ್ರಯಾಣಿಸಿದ್ದರು. ಬಿಂದು ಹೆಸರಿನಲ್ಲಿ ಕೊಠಡಿ ಬುಕ್ ಮಾಡಲಾಗಿತ್ತು. ದೇವಸ್ಥಾನ ಪ್ರವೇಶಿಸಿಲು ಇದೇ ವಸತಿಗೃಹದಲ್ಲಿ ಕಾರ್ಯ ಯೋಜನೆ ರೂಪಿಸಿದ್ದರು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.