ಮಡಿಕೇರಿ: ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಕೊಡಗಿನ ಅರಣ್ಯ ಪ್ರದೇಶವನ್ನು ಸೇರ್ಪಡೆಗೊಳಿಸಿರುವುದನ್ನು ವಿರೋಧಿಸಿ ಜುಲೈ 12 ರಂದು ಕೊಡಗು ಬಂದ್ಗೆ ಜಿಲ್ಲಾ ಬಿಜೆಪಿ ಕರೆ ನೀಡಿದೆ.
ನಗರದಲ್ಲಿ ಶುಕ್ರವಾರ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಮುಖಂಡ ರೊಡನೆ ನಡೆದ ಸಭೆಯಲ್ಲಿ ಈ ತೀರ್ಮಾನ ಮಾಡಲಾಗಿದೆ ಎಂದು ಶಾಸಕ ಅಪ್ಪಚ್ಚು ರಂಜನ್ ತಿಳಿಸಿದರು.
ಕೊಡಗು ಸೇರಿದಂತೆ ರಾಜ್ಯದ ಪಶ್ಚಿಮ ಘಟ್ಟ ಶ್ರೇಣಿಯ ಪ್ರದೇಶವನ್ನು ವಿಶ್ವಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಿರುವುದನ್ನು ಜಿಲ್ಲಾ ಬಿಜೆಪಿ ವಿರೋಧಿಸುವುದಾಗಿ ತಿಳಿಸಿದರು.
ವಿಶ್ವಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸುವುದರಿಂದ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನೂ ನಡೆಸುವಂತ್ತಿಲ್ಲ. ಜಿಲ್ಲೆಯ ಜನರು ಹಲವು ತಲೆಮಾರಿನಿಂದ ಅರಣ್ಯವನ್ನು ರಕ್ಷಣೆ ಮಾಡುತ್ತಿದ್ದು, ವಿಶ್ವಪಾರಂಪರಿಕ ತಾಣದ ಹೆಸರಿನಲ್ಲಿ ಹೊರದೇಶದವರತು ಜಿಲ್ಲೆಗೆ ಬಂದು ದಬ್ಬಾಳಿಕೆ ಮಾಡಲು ಅವಕಾಶ ನೀಡುವುದಿಲ್ಲ ಎಂದರು.
ಕೇಂದ್ರ ಸರ್ಕಾರದ ಈ ನಿಲುವಿನಿಂದ ಪ್ರಜಾಪ್ರಭುತ್ವ ವ್ಯವಸ್ಥೆಗೆ ದಕ್ಕೆ ಬಂದಂತಾಗಿದೆ. ಜಿಲ್ಲೆಯ ಅಭಿವೃದ್ಧಿ ಕಾರ್ಯಕ್ಕೆ ಯುನೆಸ್ಕೋ ತೀರ್ಮಾನದಿಂದ ಭಾರಿ ಪೆಟ್ಟಾಗಿದೆ ಎಂದು ವಿಷಾದಿಸಿದರು.
ಈ ಹಿನ್ನಲೆಯಲ್ಲಿ ಜುಲೈ 12 ರಂದು ಬೆಳಿಗ್ಗೆ 6 ರಿಂದ ಸಂಜೆ 6 ತನಕ ಸ್ವಯಂ ಪ್ರೇರಿತ ಬಂದ್ಗೆ ಕರೆ ನೀಡಿದ್ದು, ಜಿಲ್ಲೆಯ ಜನತೆ ಸಹಕರಿಸುವಂತೆ ಅವರು ಕೋರಿದರು.
ಕೇಂದ್ರ ಸರ್ಕಾರ ವಿಶ್ವ ಪಾರಂಪರಿಕ ಪಟ್ಟಿಯಿಂದ ಜಿಲ್ಲೆಯನ್ನು ಕೈಬಿಡದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಒಂದು ವಾರದ ನಿರಂತರ ಬಂದ್ಗೂ ಕರೆ ನೀಡಿ, ಕೇಂದ್ರ ಸರ್ಕಾರಿ ಕಚೇರಿಗೆಳಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಡಿ. ಮಂಜುನಾಥ್ ಮಾತನಾಡಿ, ವಿಶ್ವ ಪಾರಂಪರಿಕ ತಾಣಗಳಿಂದ ಸಮಸ್ಯ ಗೊಳಾಗಾಗುವ ಇತರೆ ಜಿಲ್ಲೆಯಲ್ಲಿಯೂ ಜುಲೈ 12 ರಂದು ಬಂದ್ ನಡೆಸುವಂತೆ ಆಯಾ ಕ್ಷೇತ್ರದ ಶಾಸಕರನ್ನು ಮನವಿ ಮಾಡುವುದಾಗಿ ತಿಳಿಸಿದರು.
ವಿಶ್ವಪಾರಂಪರಿಕ ತಾಣಕ್ಕೆ ಸ್ವಾಗತ ಕೋರಿದ ಪಶ್ಚಿಮ ಘಟ್ಟ ಕಾರ್ಯಪಡೆಯ ಅಧ್ಯಕ್ಷ ಅನಂತಹೆಗಡೆ ಆಶಿಸರು ನೈತಿಕ ಹೊಣೆ ಹೊತ್ತು, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಕೊಡಗು ಬಿಜೆಪಿ ಪರವಾಗಿ ಒತ್ತಾಯಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರವಿಕುಶಾಲಪ್ಪ, ಉಪಾಧ್ಯಕ್ಷೆ ಎಚ್.ಎಂ.ಕಾವೇರಿ, ಸದಸ್ಯರಾದ ರಾಜಾರಾವ್, ಕಾಂತಿ ಬೆಳ್ಯಪ್ಪ, ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.