ನಾಪೋಕ್ಲು: ಪ್ರಥಮ ಪ್ರಯತ್ನ ಯಶಸ್ವಿಯಾದರೆ ಕೊನೆಯವರೆಗೂ ಶುಭಫಲ ದೊರೆಯುತ್ತದೆ. ಆಟಿ ಹಬ್ಬದ ಆಚರಣೆಗಳು ಹಲವು ಭಾಗಗಳಲ್ಲಿ ನಡೆದಿದ್ದರೂ ಇದು ಎಲ್ಲರಿಗೂ ಮಾದರಿಯಾಗಿದೆ ಎಂದು ಕೊಡಗು ಗೌಡ ಸಮಾಜಗಳ ಅಧ್ಯಕ್ಷ ಆನಂದ ಕರಂದ್ಲಾಜೆ ಅಭಿಪ್ರಾಯ ವ್ಯಕ್ತಪಡಿಸಿದರು.
ಗೌಡ ಸಮಾಜ ಚೇರಂಬಾಣೆ ಮತ್ತು ಗೌಡ ಮಹಿಳಾ ಒಕ್ಕೂಟ ಚೇರಂಬಾಣೆ ಆಶ್ರಯದಲ್ಲಿ ಕಾರುಗುಂದ ಗೌಡ ಸಮಾಜದಲ್ಲಿ ಆಯೋಜಿಸಿದ್ದ ಆಟಿ ಜಂಬರ 2025 ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಂಬರದಲ್ಲಿ ಅಧಿಕ ಪ್ರಮಾಣದ ಸಾಂಪ್ರದಾಯಿಕ ತಿನಿಸುಗಳನ್ನು ಮಾಡಿ ಪ್ರದರ್ಶನ ಮಾಡಿರುವುದು ಶ್ಲಾಘನೀಯ. ಇಂತಹ ಅಚ್ಚುಕಟ್ಟಾದ ಕಾರ್ಯಕ್ರಮಕ್ಕೆ ಪೈಪೋಟಿ ನೀಡುವುದು ಕೂಡ ಕಷ್ಟವೇ ಎಂದರು.
ಸಾಂಪ್ರದಾಯಿಕ ತಿಂಡಿ ತಿನಿಸುಗಳ ಪ್ರದರ್ಶನದ ಉದ್ಘಾಟನೆ ಮಾಡಿದ ಕೊಡಗು ದಕ್ಷಿಣ ಕನ್ನಡ ಒಕ್ಕಲಿಗ ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಮೂಟೇರ ಪುಷ್ಪಾವತಿ ರಮೇಶ್ ಮಾತನಾಡಿ, ಸಾಂಪ್ರದಾಯಿಕ ತಿಂಡಿ ತಿನಿಸುಗಳನ್ನು ಪ್ರದರ್ಶನಕ್ಕೆ ಇರಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಪ್ರಶಂಶನೀಯ. ಚೇರಂಬಾಣೆ ಗೌಡ ಮಹಿಳಾ ಒಕ್ಕೂಟ ಆಯೋಜಿಸಿರುವ ಇಂತಹ ಉತ್ತಮ ಕಾರ್ಯಕ್ರಮಗಳಿಂದ ಸಂಘಟನೆ ಬಲವರ್ಧನೆ ಸಾಧ್ಯ ಎಂದರು.
ಸಾಂಪ್ರದಾಯಿಕ ಹಾಗೂ ಪಾರಂಪರಿಕ ವಸ್ತುಗಳ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ನಿವೃತ್ತ ಪ್ರಾಂಶುಪಾಲರಾದ ಆನೇರ ಜಾನಕಿ ಮೋಹನ್, ಭಾರಿ ಸಂಖ್ಯೆಯಲ್ಲಿ, ಸಮಯೋಚಿತ ಮತ್ತು ಸಾಂದರ್ಭಿಕವಾಗಿ ಈ ಭಾಗದ ಜನರನ್ನು ಒಂದುಗೂಡಿಸಲು ಆಯೋಜಿಸಿದ ಈ ಕಾರ್ಯಕ್ರಮ ಪುಸ್ತಕ ರೂಪದಲ್ಲಿ ಹೊರಬಂದು ಶಾಶ್ವತವಾಗಿಯೇ ಜನ ಮಾನಸದಲ್ಲಿ ಉಳಿಯುವಂತಾಗಬೇಕು ಎಂದರು.
ಭಾಗಮಂಡಲದ ಕಾವೇರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಜಿ. ದಿವಾಕರ ಅವರು ನಮ್ಮ ಸಾಂಪ್ರದಾಯಿಕ ಆಹಾರಗಳು ಅಳಿಸಿ ಹೋಗುವ ಕಾಲಕ್ಕೆ ಇಂತಹ ಕಾರ್ಯಕ್ರಮ ಪುನಃಶ್ಚೇತನ ನೀಡಿದೆ. ಹಾಗೆಯೇ ನಮ್ಮ ಆಚಾರ ವಿಚಾರವನ್ನು ಮುಂದಿನ ಪೀಳಿಗೆಗೆ ತಿಳಿಸಿ ಬೆಳೆಸುವ ದೃಷ್ಟಿಯಿಂದ ಮಹಿಳಾ ಒಕ್ಕೂಟದ ಸಹೋದರಿಯರು ಉತ್ತಮ ಹೆಜ್ಜೆ ಇಟ್ಟಿದ್ದಾರೆ. ಸುಮಾರು 170 ತಿಂಡಿ ತಿನಿಸುಗಳ ಪ್ರದರ್ಶನ ಮತ್ತು ನೂರಕ್ಕೂ ಹೆಚ್ಚು ಪಾರಂಪರಿಕ ವಸ್ತುಗಳ ಪ್ರದರ್ಶನ ಆಯೋಜಿಸುವುದು ಎಂದರೆ ಸುಲಭದ ಮಾತಲ್ಲ. ಇದು ನಮ್ಮ ಸಂಸ್ಕೃತಿಯ ಶ್ರೀಮಂತಿಕೆಯನ್ನು ತೋರಿಸಿದ ಕಾರ್ಯಕ್ರಮ ಎಂದರು.
ಆಟಿ ಜಂಬರವನ್ನು ಸಮಾಜದ ಅಧ್ಯಕ್ಷ ಕೊಡಪಾಲು ಗಣಪತಿ ಉದ್ಘಾಟಿಸಿ, ಚೇರಂಬಾಣೆಗೌಡ ಸಮಾಜದ ಬೆನ್ನೆಲುಬಾಗಿ ರಚನೆಯಾಗಿರುವ ಮಹಿಳಾ ಒಕ್ಕೂಟದ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮಹಿಳಾ ಒಕ್ಕೂಟದ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೊಡಗು ಗೌಡ ಸಮಾಜಗಳ ಒಕ್ಕೂಟದ ನಿರ್ದೇಶಕರಾದ ಪೇರಿಯನ ಉದಯ, ಪುದಿಯ ನೆರವನ ರೇವತಿ ರಮೇಶ್, ತಲಕಾವೇರಿ ದೇವತಕ್ಕರಾದ ಕೋಡಿ ಮೋಟಯ್ಯ ಭಾಗಮಂಡಲ ಪ್ರಗತಿಪರ ಜೇನು ಕೃಷಿಕರ ಸಂಘದ ಅಧ್ಯಕ್ಷರಾದ ಹೊಸೂರು ಸತೀಶ್ ಕುಮಾರ್, ತುಮ್ತಜಿ ಗಣೇಶ್, ಸಮಾಜದ ಉಪಾಧ್ಯಕ್ಷರಾದ ಕೆಕ್ಕಡ ದಿನೇಶ್, ಮಹಿಳಾ ಒಕ್ಕೂಟದ ಉಪಾಧ್ಯಕ್ಷರಾದ ಹೊಸೊಕ್ಲು ಲತಾ ಮೊಣ್ಣಪ್ಪ, ಕೂರನ ಸುಶೀಲ ಅಪ್ಪಾಜಿ, ಚೊಕ್ಕಾಡಿ ಪ್ರೇಮ ರಾಘವಯ್ಯ ಪಾಲ್ಗೊಂಡಿದ್ದರು.
ಜನಮನ್ನಣೆ ಗಣಿಸಿದ ಆಟಿ ಜಂಬರ
ಮಧ್ಯಾಹ್ನದ ಭೋಜನಕ್ಕಾಗಿ ಆಟಿ ವಿಶೇಷ ಖಾದ್ಯಗಳನ್ನು ತಯಾರಿಸಲಾಗಿತ್ತು. ಗೌಡ ಸಮಾಜ ಹಾಗೂ ವೇದಿಕೆಯನ್ನು ಸಂಪೂರ್ಣವಾಗಿ ಕಾಡು ಹೂವು ಮತ್ತು ಹಣ್ಣುಗಳಿಂದ ಅಲಂಕರಿಸಲಾಗಿತ್ತು. ಮಧ್ಯಾಹ್ನದ ನಂತರ ವಿದ್ಯಾರ್ಥಿಗಳಿಗೆ ಅರೆ ಭಾಷೆ ರಸಪ್ರಶ್ನೆ ಸ್ಪರ್ಧೆ ಸಾಂಸ್ಕೃತಿಕ ಕಾರ್ಯಕ್ರಮ ಮನರಂಜಿಸಿದವು. ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರುಗಿದ ಆಟಿ ಜಂಬರ 2025 ಜನ ಮನ್ನಣೆ ಗಳಿಸುವಲ್ಲಿ ಯಶಸ್ವಿಯಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.