ಸೋಮವಾರಪೇಟೆ: ಮುಕ್ಕೋಡ್ಲು ಗ್ರಾಮದಲ್ಲಿ ಅರಣ್ಯ ಇಲಾಖೆ ಫಸಲಿಗೆ ಬಂದಿದ್ದ ಏಲಕ್ಕಿ ಹಾಗೂ ಕಾಫಿ ಗಿಡಗಳನ್ನು ಕಡಿದು ಹಾಕಿರುವ ಇಲಾಖೆ ಸಿಬ್ಬಂದಿಯನ್ನು ಕೂಡಲೇ ಅಮಾನತು ಮಾಡಬೇಕೆಂದು ಒತ್ತಾಯಿಸಿ ತಾಲ್ಲೂಕು ರೈತ ಹೋರಾಟ ಸಮಿತಿ ಪದಾಧಿಕಾರಿಗಳು ಜಿಲ್ಲಾ ಉಸ್ತವಾರಿ ಸಚಿವರಿಗೆ ಸೋಮವಾರ ಮನವಿ ಮಾಡಿದರು.
ಗ್ರಾಮದ ಕಾಳಚಂಡ ನಾಣಿಯಪ್ಪ ಎಂಬುವವರ ತೋಟ ಹಾಗೂ ಫಸಲನ್ನು ಅರಣ್ಯ ಇಲಾಖೆ ಸಿಬ್ಬಂದಿ ನಾಶ ಪಡಿಸಿದ್ದು, 33/2 ತೋಟದ ಸ್ಥಳವನ್ನು ಹದ್ದು ಬಸ್ತು ಸರ್ವೆ ಮಾಡಿಸಿ, ಸರ್ವೆ ಇಲಾಖೆಯಿಂದ ಸಂಬಂಧಿಸಿದ ಸ್ಥಳ ಪೈಸಾರಿ ಜಾಗ ಎಂದು ಅಧಿಕೃತ ದಾಖಲೆಯನ್ನು ಪಡೆದ ನಂತರವೂ ಅರಣ್ಯ ಇಲಾಖೆ ಈ ಕ್ರಮ ಕೈಗೊಂಡಿರುವುದು ಅಕ್ಷಮ್ಯ ಅಪರಾಧ ಎಂದಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಭೋಸರಾಜು ಅವರಿಗೆ ಮನವಿ ಸಲ್ಲಿಕೆ ಸಂದರ್ಭ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ ಗೌಡ, ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಇದ್ದರು.
ರೈತ ಹೋರಾಟ ಸಮಿತಿ ಅಧ್ಯಕ್ಷ ಕೆ.ಬಿ.ಸುರೇಶ್, ಪದಾಧಿಕಾರಿಗಳಾದ ಕಲ್ಕಂದೂರು ಪ್ರಕಾಶ್, ಡಿ.ಕೆ.ದೇವರಾಜ್ ಹಾಗೂ ಕೂತಿ ದಿವಾಕರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.