ವಿರಾಜಪೇಟೆ: 2024-25ನೇ ಶೈಕ್ಷಣಿಕ ಸಾಲಿನ ಅತ್ಯುತ್ತಮ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್ಡಿಎಂಸಿ) ಪ್ರಶಸ್ತಿಯನ್ನು ಸಮೀಪದ ಬೇಟೋಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಡೆದುಕೊಂಡಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಪುಷ್ಟಿ ಯೋಜನೆಯಡಿ ಸಮೀಕ್ಷೆ ಕೈಗೊಂಡು ಜಿಲ್ಲೆಯಿಂದ ಆಯ್ಕೆ ಮಾಡಿದ ಮೂರು ಶಾಲೆಗಳ ಪೈಕಿ ಬೇಟೋಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿರಾಜಪೇಟೆ ತಾಲ್ಲೂಕಿನ ಏಕೈಕ ಶಾಲೆಯಾಗಿದೆ.
ಶಾಲೆಯು ಪ್ರಶಸ್ತಿಗೆ ಆಯ್ಕೆಗೊಂಡ ಹಿನ್ನೆಲೆಯಲ್ಲಿ ಶಾಲೆಯ ಅಭಿವೃದ್ಧಿಗಾಗಿ ಇಲಾಖೆ ₹1 ಲಕ್ಷ ಮೊತ್ತದ ಬಹುಮಾನವನ್ನು ಬಿಡುಗಡೆಗೊಳಿಸಿದೆ. ಇಲಾಖೆಯ ಸೂಚನೆಯಂತೆ ಬಹುಮಾನದ ಹಣದಲ್ಲಿ ಖರೀದಿಸಿದ ಲ್ಯಾಪ್ ಟಾಪ್ನ್ನು ಬುಧವಾರ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಮೀತಲತಂಡ ಎಂ.ಇಸ್ಮಾಯಿಲ್ ಅವರು ಶಾಲೆಯ ಮುಖ್ಯ ಶಿಕ್ಷಕಿ ಸೀತಾಗೆ ಹಸ್ತಾಂತರಿಸಿದರು.
ಈ ಸಂದರ್ಭ ಮಾತನಾಡಿದ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಮೀತಲತಂಡ ಎಂ.ಇಸ್ಮಾಯಿಲ್, ಮೊದಲಿನಿಂದಲೂ ಗುಣಮಟ್ಟದ ಶಿಕ್ಷಣದ ಮೂಲಕ ಬೇಟೋಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗಮನ ಸೆಳೆದಿದೆ. ಈ ಕಾರಣದಿಂದ ಖಾಸಗಿ ಶಾಲೆಗೆ ಪೈಪೋಟಿ ನೀಡುವ ಹಂತಕ್ಕೆ ಬೆಳೆದು ನಿಂತಿದೆ. ಇಚ್ಛಾಶಕ್ತಿಯೊಂದಿದ್ದರೆ ಸರ್ಕಾರಿ ಶಾಲೆ ಸರ್ವತೋಮುಖವಾಗಿ ಅಭಿವೃದ್ಧಿಗೊಳಿಸಬಹುದು ಎಂಬುದಕ್ಕೆ ಈ ಶಾಲೆಯ ಉತ್ತಮ ಉದಾಹರಣೆಯಾಗಿದೆ ಎಂದರು.
ವಿರಾಜಪೇಟೆಯ ಜಯಪ್ರಕಾಶ್ ನಾರಾಯಣ್ ಪ್ರೌಢಶಾಲೆಯ ಶಿಕ್ಷಕಿ ಸೀತಾ, ಎಸ್ಡಿಎಂಸಿ ಸದಸ್ಯ ವನಿತಾ ಕುಮಾರ, ಶಾಲೆಯ ದೈಹಿಕ ಶಿಕ್ಷಕ ತಿಮ್ಮಯ್ಯ, ಸಹ ಶಿಕ್ಷಕ ಶ್ರೀನಿವಾಸ್, ಸುಜಾತ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.