ADVERTISEMENT

ಮಡಿಕೇರಿ ಅಭಿವೃದ್ಧಿ ಶ್ವೇತಪತ್ರ ಹೊರಡಿಸಿ: ಬಿಜೆಪಿ

ರೈತರಿಗೆ ಮುಳುವಾಗುತ್ತಿರುವ ಸಿ ಮತ್ತು ಡಿ ಜಾಗ ಸಮಸ್ಯೆ ಪರಿಹರಿಸಿ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 5:32 IST
Last Updated 21 ನವೆಂಬರ್ 2025, 5:32 IST
   

ಸೋಮವಾರಪೇಟೆ: ‘ಮಡಿಕೇರಿ ಕ್ಷೇತ್ರದಲ್ಲಿ ಫ್ಲೆಕ್ಸ್ ರಾಜಕೀಯ ಬಿಟ್ಟು, ಅಭಿವೃದ್ಧಿಗೆ ಆದ್ಯತೆ ನೀಡಿ. ₹1800 ಕೋಟಿ ಅನುದಾನ ನೀಡಲಾಗಿದೆ ಎನ್ನುವ ಕಾಂಗ್ರೆಸಿಗರು ಈ ಬಗ್ಗೆ ಶ್ವೇತಪತ್ರ ಹೊರಡಿಸಿ. ರೈತರಿಗೆ ಮುಳುವಾಗುತ್ತಿರುವ ಸಿ ಮತ್ತು ಡಿ ಜಾಗ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಿರಿ. ಕೇಂದ್ರ ಸರ್ಕಾರದ ಅನುದಾನವನ್ನು ತಮ್ಮದೆಂದು ಬಿಂಬಿಸಿಸುವ ಪ್ರಯತ್ನ  ಕೈಬಿಡಿ’ ಎಂದು ಮಂಡಲ ಬಿಜೆಪಿ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಂಡಲ ಬಿಜೆಪಿ ಅಧ್ಯಕ್ಷ ಗೌತಮ್ ಗೌಡ ಮಾತನಾಡಿ, ‘ಫ್ಲೆಕ್ಸ್ ವಿಚಾರದ ಬಗ್ಗೆ ಬಿಜೆಪಿ ಹೇಳಿಕೆಗೆ ಕಾಂಗ್ರೆಸ್ ಅಧ್ಯಕ್ಷ ಸತೀಶ್ , ಮಂತರ್ ಗೌಡ ಅವರ ಗಮನಕ್ಕೆ ಬಾರದೇ ಅಭಿಮಾನಿಗಳು ಫ್ಲೆಕ್ಸ್ ಅಳವಡಿಸಿರಬಹುದು ಎಂದು ನೀಡಿರುವ ಪ್ರತಿಕ್ರಿಯೆ ಹಾಸ್ಯಾಸ್ಪದ. ಶಾಸಕರು ರಸ್ತೆಯಲ್ಲಿ ಸಂಚರಿಸುವಾಗ ಗಮನಿಸಿಲ್ಲವೇ?   ಅಭಿಮಾನಿಗಳಿಗೆ ಹೇಳಿ ತೆಗೆಸಬಹುದಿತ್ತಲ್ಲವೇ? ಎಂದು ಪ್ರಶ್ನಿಸಿದರು. ಕ್ಷೇತ್ರದಲ್ಲಿ ಅಭಿವೃದ್ಧಿಯಂತೂ ಆಗುತ್ತಿಲ್ಲ; ಕನಿಷ್ಠ ಪಕ್ಷ ಸ್ವಚ್ಛತೆಯನ್ನಾದರೂ ಕಾಪಾಡಿಕೊಳ್ಳಲಿ. ಫ್ಲೆಕ್ಸ್ ಹಾಕುವುದು ತಪ್ಪಲ್ಲ. ಆದರೆ ಹಲವು ದಿನವಾದರೂ ತೆರವುಗೊಳಿಸಿಲ್ಲ. ಶಾಸಕರು ಬಂದ ಮೇಲೆ ಹೆಚ್ಚಾಗಿದೆ ’ ಎಂದು ಟೀಕಿಸಿದರು.

‘  ಕುಶಾಲನಗರ ಪಟ್ಟಣ ಪಂಚಾಯಿತಿ ಕಾಂಗ್ರೆಸ್ ಆಡಳಿತದಲ್ಲಿದೆ. ಗಣಪತಿ ದೇವಾಲಯ ರಥೋತ್ಸವ ಇದ್ದರೂ  ಸುತ್ತಲೂ ಮಂತರ್ ಗೌಡ ಜನ್ಮದಿನದ ಪೋಸ್ಟರ್ ಹಾಕಿದ್ದು,  ತೆರವುಗೊಳಿಸಿಲ್ಲ. ಇದೆಂಥಾ ಸಂಸ್ಕೃತಿ’ ಎಂದು ಪ್ರಶ್ನಿಸಿದರು.
ಕ್ಷೇತ್ರದ ಅಭಿವೃದ್ಧಿಗೆ 1800 ಕೋಟಿ ಅನುದಾನವನ್ನು ಶಾಸಕರು ತಂದಿದ್ದಾರೆ ಎಂದು ಕಾಂಗ್ರೆಸ್ ಹೇಳಿಕೆ ನೀಡಿದ್ದು, ಈ ಬಗ್ಗೆ ಕಾಂಗ್ರೆಸ್ ಶ್ವೇತ ಪತ್ರ ಹೊರಡಿಸಲಿ. ಎನ್‌ಡಿಆರ್‌ಎಫ್, ಕೇಂದ್ರ ಸರ್ಕಾರದ ಯೋಜನೆಗಳಿಗೆ ಶಾಸಕರು ಭೂಮಿಪೂಜೆ ನಡೆಸುತ್ತಿದ್ದಾರೆ. ₹ 900 ಕೋಟಿ ಅನುದಾನದಲ್ಲಿ ಯಾವ ಕೆಲಸ ಆಗಿದೆ? ಉಳಿದ ₹ 900 ಕೋಟಿ ಅನುದಾನದ ಕ್ರಿಯಾಯೋಜನೆ ಯಾವುದು? ಎಂಬ ಬಗ್ಗೆಯೂ ತಿಳಿಸಲಿ.  ಅನುದಾನ ಸಾರ್ವಜನಿಕ ಉಪಯೋಗಕ್ಕೆ ಬಳಕೆಯಾಗುತ್ತಿದೆಯೇ  ಎಂಬುದೂ ಬಹಿರಂಗವಾಗಲಿ ಎಂದು ಸವಾಲು ಹಾಕಿದರು.

ADVERTISEMENT

ಬಿಜೆಪಿ ಸರ್ಕಾರ ಇದ್ದಾಗ ಸಿ ಮತ್ತು ಡಿ ಜಾಗದಲ್ಲಿ ಕೃಷಿ ಮಾಡಿ , ಮನೆ ಕಟ್ಟಿಕೊಂಡಿರುವ ಮಂದಿಗೆ ನೋಟಿಸ್ ನೀಡಿಲ್ಲ.   ಶಾಸಕರಾಗಿದ್ದ ಅಪ್ಪಚ್ಚು ರಂಜನ್  ಹಕ್ಕುಪತ್ರ ನೀಡಿದ್ದರು. ಬಿಜೆಪಿ ಶಾಸಕ  25 ವರ್ಷ ಇದ್ದ ಸಂದರ್ಭ 5 ಸಾವಿರಕ್ಕೂ ಹೆಚ್ಚು ಮಂದಿಗೆ ಹಕ್ಕುಪತ್ರ ನೀಡಲಾಗಿತ್ತು. ಕಾಂಗ್ರೆಸ್‌ನವರೂ ಇದರ ಫಲಾನುಭವಿಯಾಗಿದ್ದಾರೆ ಎಂದು ಯುವ ಮೋರ್ಚಾ ಅಧ್ಯಕ್ಷ ಮಹೇಶ್ ತಿಮ್ಮಯ್ಯ  ಹೇಳಿದರು.

  ಪ್ರಧಾನ ಕಾರ್ಯದರ್ಶಿಳದ ಮೋಕ್ಷಿಕ್ ರಾಜ್, ದರ್ಶನ್ ಜೋಯಪ್ಪ, ಎಸ್.ಆರ್. ಸೋಮೇಶ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.