ಕುಶಾಲನಗರ: ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಚೆಟ್ಟಳ್ಳಿ ಕಂಡಕೆರೆ ನಿವಾಸಿ ಮಾಜಿ ಸೈನಿಕ ಗಿರೀಶ್ ಮೃತದೇಹ ಶನಿವಾರ ಬೊಳ್ಳೂರು ಕಾವೇರಿ ನಿಸರ್ಗಧಾಮ ಪಕ್ಕದ ಗ್ರೀನ್ ಲ್ಯಾಂಡ್ ಹೋಟೆಲ್ ಹಿಂಭಾಗ ಕಾವೇರಿ ನದಿಯಲ್ಲಿ ಪತ್ತೆಯಾಗಿದೆ.
ಬುಧವಾರ ರಾತ್ರಿಯಿಂದ ಕಾಣೆಯಾಗಿದ್ದ ಚೆಟ್ಟಳ್ಳಿ ಕಂಡಕೆರೆ ನಿವಾಸಿ ಗಿರೀಶ್ (46) ಇವರ ಸ್ಕೂಟಿ ಕೀ ಮತ್ತು ಹೆಲ್ಮೆಟ್ ಸಹಿತ ಗುಡ್ಡೆಹೊಸೂರು ತೆಪ್ಪದಕಂಡಿ ಬಳಿ ಪತ್ತೆಯಾಗಿತ್ತು. ಮೊಬೈಲ್ ಕೂಡ ಸ್ವಿಚ್ ಆಫ್ ಆಗಿರುವ ಹಿನ್ನೆಲೆಯಲ್ಲಿ ಕುಟುಂಬಸ್ಥರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆತ್ಮಹತ್ಯೆ ಶಂಕೆ ಹಿನ್ನೆಲೆಯಲ್ಲಿ ಗುರುವಾರ, ಶುಕ್ರವಾರ ಇಡೀ ದಿನ ಕಾವೇರಿ ನದಿಯಲ್ಲಿ ಶೋಧ ಕಾರ್ಯ ನಡೆಸಲಾಯಿತು.
ಅಗ್ನಿಶಾಮಕ ದಳ, ರಿವರ್ ರಾಫ್ಟ್ ಸಿಬ್ಬಂದಿ ಕಣಿವೆ, ಹೆಬ್ಬಾಲೆ ತನಕ ಶೋಧ ಕಾರ್ಯ ನಡೆಸಿದ್ದರು. ಎರಡನೇ ದಿನ ಶುಕ್ರವಾರ ಕೂಡ ಕಾವೇರಿ ಸೇತುವೆ ಬಳಿ ಶೋಧ ಕಾರ್ಯ ನಡೆಸಲಾಯಿತು. ಶನಿವಾರ ಬೆಳಿಗ್ಗೆ ನದಿಯಲ್ಲಿ ಗಿರೀಶ್ ಮೃತದೇಹ ತೇಲಿಬಂದಿದ್ದು ನಿಸರ್ಗಧಾಮದ ಬಳಿ ಪತ್ತೆಯಾಗಿದೆ. ಗಿರೀಶ್ ಅವಗೆ ಪತ್ನಿ, ಇಬ್ಬರು ಮಕ್ಕಳು ಇದ್ದಾರೆ.
ಕಣಿವೆ ಬಳಿ ಮೃತದೇಹವೊಂದು ತೇಲಿಹೋದ ಬಗ್ಗೆ ಸ್ಥಳೀಯರ ಮಾಹಿತಿ ಆಧರಿಸಿ ಪರಿಶೀಲಿಸಿದಾಗ ನೆರೆ ಜಿಲ್ಲೆಯ ಚಿಕ್ಕಕಮರವಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಅಪರಿಚಿತ ಗಂಡಸಿನ ಮೃತದೇಹ ಕೊಳತೆ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.