ವಿರಾಜಪೇಟೆ: ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಸಾಗುವ ಕಾಲುದಾರಿಯಲ್ಲಿ ಸಿಸಿಟಿಇ ಕ್ಯಾಮರಾ ಅಳವಡಿಸುವ ಮೂಲಕ ಪುಂಡಪೋಕರಿಗಳ ಹಾವಳಿಗೆ ಕಡಿವಾಣ ಹಾಕಲು ಪುರಸಭೆ ಮುಂದಾಗಿದೆ.
ಪಟ್ಟಣದ ಗಡಿಯಾರ ಕಂಬದ ಬಳಿಯಿಂದ ಸರ್ಕಾರಿ ಬಸ್ ನಿಲ್ದಾಣದೆಡೆಗೆ ಸಾಗುವ ಕಾಲುದಾರಿಯಲ್ಲಿ ಜನರಲ್ ತಿಮ್ಮಯ್ಯ ರಸ್ತೆಯ ಕಡೆಗೆ ಹೋಗುವ ಕಾಲುದಾರಿಯ ಜಂಕ್ಷನ್ನಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರ ರಕ್ಷಣೆಗೆ ಪುರಸಭೆ ವತಿಯಿಂದ ಗುರುವಾರ ಸಿಸಿಟಿವಿ ಕ್ಯಾಮರಾ ಅಳವಡಿಸಲಾಯಿತು.
ಪಟ್ಟಣದ ಹೃದಯ ಭಾಗವಾಗಿರುವ ಗಡಿಯಾರ ಕಂಬದ ಬಳಿಯಿಂದ ಸರ್ಕಾರಿ ಬಸ್ ನಿಲ್ದಾಣ, ಶಾಂತಿನಗರ, ಗೋಣಿಕೊಪ್ಪಲು ರಸ್ತೆ ಸೇರಿದಂತೆ ಸುತ್ತಮುತ್ತಲಿನ ಭಾಗಗಳಿಗೆ ಹೋಗಲು ಪಾದಚಾರಿಗಳಿಗೆ ಈ ಒಳದಾರಿ ಅತ್ಯಂತ ಸಮೀಪದ ಮಾರ್ಗವಾಗಿದೆ. ಇದರಿಂದ ಸಾಕಷ್ಟು ಮಂದಿ ಈ ಕಾಲುದಾರಿಯಲ್ಲಿ ಸಂಚರಿಸುತ್ತಾರೆ. ವಿಶೇಷವಾಗಿ, ಪ್ರತಿನಿತ್ಯ ಈ ಕಾಲುದಾರಿಯಲ್ಲಿ ಹೆಚ್ಚಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು ಸಂಚರಿಸುತ್ತಾರೆ.
ನಿರ್ಜನ ಹಾದಿಯಾಗಿರುವ ಈ ಒಳಹಾದಿಯಲ್ಲಿ ಪುಂಡಪೋಕರಿಗಳು ಹಾಗೂ ಕಿಡಿಗೇಡಿಗಳಿಂದ ದಾರಿಹೋಕರಿಗೆ ಸಮಸ್ಯೆಯಾಗುತ್ತಿದೆ ಎನ್ನುವ ದೂರು ಈ ಹಿಂದೆ ಕೇಳಿ ಬಂದಿತ್ತು. ಪೊಲೀಸ್ ಇಲಾಖೆಯು ಈ ಕುರಿತು ಗಮನಹರಿಸಿತ್ತು. ಆದರೆ, ಪುಂಡಪೋಕರಿಗಳ ಹಾವಳಿಗೆ ಸಂಪೂರ್ಣ ಕಡಿವಾಣ ಬಿದ್ದಿರಲಿಲ್ಲ. ಜೊತೆಗೆ, ಕೆಲ ಪುಂಡಪೋಕರಿಗಳ ವರ್ತನೆಯಿಂದ ಈ ದಾರಿಯಲ್ಲಿ ಸಾಗಲು ಮಹಿಳೆಯರು ಸೇರಿದಂತೆ ಸಾರ್ವಜನಿಕರಿಗೆ ಮುಜುಗರವೂ ಆಗುತ್ತಿತ್ತು. ಇದರೊಂದಿಗೆ ನಿರ್ಜನ ಹಾದಿಯಲ್ಲಿ ಸಂಚರಿಸಲು ವಿದ್ಯಾರ್ಥಿನಿಯರು ಸೇರಿದಂತೆ ಮಹಿಳೆಯರಿಗೆ ಆತಂಕವಾಗುತ್ತಿತ್ತು.
ಕ್ಯಾಮರಾ ಅಳವಡಿಸುವ ಸಂದರ್ಭ ಸ್ಥಳಕ್ಕೆ ಭೇಟಿ ನೀಡಿದ ಪುರಸಭೆಯ ಅಧ್ಯಕ್ಷೆ ದೇಚಮ್ಮ ಕಾಳಪ್ಪ ಅವರು ಮಾತನಾಡಿ, ‘ಪುರಸಭೆಯ ಮುಖ್ಯಾಧಿಕಾರಿ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಸಿಸಿಟಿವಿ ಕ್ಯಾಮೆರಾವನ್ನು ನಿರ್ವಹಿಸಲಿದ್ದಾರೆ’ ಎಂದರು. ಸ್ಥಳದಲ್ಲಿ ಪುರಸಭೆಯ ಮುಖ್ಯಾಧಿಕಾರಿ ನಾಚಪ್ಪ, ಸದಸ್ಯರಾದ ಎಸ್.ಎಚ್.ಮತೀನ್, ಮಹಮ್ಮದ್ ರಾಫಿ, ಪುರಸಭೆಯ ಆರೋಗ್ಯ ಅಧಿಕಾರಿ ಕೋಮಲಾ ಸೇರಿದಂತೆ ಪುರಸಭೆಯ ಸಿಬ್ಬಂದಿಗಳು ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಥಳದಲ್ಲಿದ್ದರು.
ಮಳೆಯಿಂದ ಕೆಸರುಮಯವಾಗಿ ಕಾಲುದಾರಿಯಲ್ಲಿ ಓಡಾಡಲು ಆಗದಿರುವಂತಹ ಸ್ಥಿತಿಯ ಕುರಿತು ಕೆಲದಿನಗಳ ಹಿಂದೆ ಸಾರ್ವಜನಿಕರಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ಷೇಪ ವ್ಯಕ್ತವಾಗಿತ್ತು. ಕೂಡಲೇ ಪುರಸಭೆಯ ವತಿಯಿಂದ ಕಾಲುದಾರಿಯಲ್ಲಿ ಅಗತ್ಯವಿರುವೆಡೆ ಕೆಂಪುಕಲ್ಲಿನ ಇಟ್ಟಿಗೆಯನ್ನು ಹಾಸಿ ಸಾರ್ವಜನಿಕರ ಓಡಾಟಕ್ಕೆ ತಾತ್ಕಾಲಿಕವಾಗಿ ಅನುಕೂಲ ಮಾಡಿಕೊಡಲಾಗಿತ್ತು. ಇದೀಗ ಸಿಸಿಟಿವಿ ಕ್ಯಾಮರಾ ಅಳವಡಿಸುವ ಮೂಲಕ ಪುಂಡರ ಹಾವಳಿಗೆ ಕೂಡ ಕಡಿವಾಣ ಹಾಕಲು ಪುರಸಭೆ ಹಾಗೂ ಪೊಲೀಸ್ ಇಲಾಖೆ ಮುಂದಾಗಿದೆ. ಪುರಸಭೆಯ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಈ ಕಾಲುದಾರಿ ಅಭಿವೃದ್ಧಿಗೆ ಮನವಿ ಮಾಡಿದ್ದಾರೆ.
ಕಾಲುದಾರಿಯಲ್ಲಿ ಸಂಚರಿಸುವ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರಿಗೆ ರಕ್ಷಣೆ ನೀಡುವ ದೃಷ್ಟಿಯಿಂದ ಕ್ಯಾಮೆರಾ ಅಳವಡಿಸಲಾಗಿದೆ– ದೇಚಮ್ಮ ಕಾಳಪ್ಪ, ಅಧ್ಯಕ್ಷೆ ವಿರಾಜಪೇಟೆ ಪುರಸಭೆ.
ಹಗಲು ಹಾಗೂ ರಾತ್ರಿ ಈ ರಸ್ತೆಯಲ್ಲಿ ಓಡಾಡಲು ಸಮಸ್ಯೆಯಾಗುತ್ತಿತ್ತು. ಸಿಸಿಟಿವಿ ಕ್ಯಾಮರಾ ಹಾಗೂ ಕೆಂಪುಕಲ್ಲು ಹಾಕಿ ರಸ್ತೆ ಸರಿಪಡಿಸಿರುವುದರಿಂದ ಅನುಕೂಲವಾಗಿದೆ.– ಮಣಿ, ಶಾಂತಿನಗರ ನಿವಾಸಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.