ಮಡಿಕೇರಿ: ನಗರದಲ್ಲಿರುವ ರಾಜ್ಯ ಸಂರಕ್ಷಿತ ಸ್ಮಾರಕ ರಾಜರ ಗದ್ದುಗೆಯನ್ನು ಜಿಲ್ಲಾಡಳಿತ ಉಳಿಸಬೇಕು ಎಂದು ಹಿಂದಿನ ‘ರಾಜರ ಗದ್ದುಗೆ ವ್ಯವಸ್ಥಾಪನಾ ಸಮಿತಿ’ಯ ಅಧ್ಯಕ್ಷ ಹಾಗೂ ಪಶ್ಚಿಮ ಘಟ್ಟಗಳ ಕಾರ್ಯಪಡೆಯ ಮಾಜಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ ಒತ್ತಾಯಿಸಿದರು.
ಇಲ್ಲಿನ ರಾಜರ ಗದ್ದುಗೆಗಳಿಗೆ ಸೇರಿದ ಜಾಗದಲ್ಲಿರುವ ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸಿ ಗದ್ದುಗೆ ಸಂರಕ್ಷಿಸಬೇಕು ಎಂದು ಹಿಂದೆಯೇ ಹೈಕೋರ್ಟ್ ಆದೇಶಿಸಿದೆ. ಈ ಕುರಿತು ಸರ್ಕಾರವೂ ಕಳೆದ ವರ್ಷ ನವೆಂಬರ್ 4ರಂದು ಆದೇಶ ಹೊರಡಿಸಿ, ಇದಕ್ಕೆ 15 ದಿನಗಳ ಕಾಲಮಿತಿಯನ್ನೂ ನಿಗದಿಗೊಳಿಸಿದೆ. ಆದರೆ, ಈಗ 7 ತಿಂಗಳು ಕಳೆದರೂ ಜಿಲ್ಲಾಡಳಿತ ಯಾವುದೇ ಕ್ರಮ ವಹಿಸಿಲ್ಲ ಎಂದು ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.
‘ಇದು ನ್ಯಾಯಾಲಯ ಆದೇಶದ ಸ್ಪಷ್ಟ ಉಲ್ಲಂಘನೆ’ ಎಂದ ಅವರು, ‘ಜಿಲ್ಲಾಡಳಿತ ಇನ್ನಾದರೂ ನ್ಯಾಯಾಲಯದ ಆದೇಶಕ್ಕೆ ಗೌರವ ನೀಡಿ ಆದೇಶವನ್ನು ಪರಿಪಾಲನೆ ಮಾಡಬೇಕು’ ಎಂದು ಮನವಿ ಮಾಡಿದರು.
ನ್ಯಾಯಾಲಯದ ಆದೇಶ ಬಂದು ಇಷ್ಟು ತಿಂಗಳಾದರೂ ಜಿಲ್ಲಾಡಳಿತ ಏಕೆ ಮೀನಾಮೇಷ ಎಣಿಸುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ. ರಾಜಕೀಯ ಒತ್ತಡಕ್ಕೆ ಮಣಿಯದೇ ಆದೇಶ ಪಾಲಿಸಬೇಕು. ರಾಜಕೀಯ ಒತ್ತಡಕ್ಕಿಂತ ನ್ಯಾಯಾಲಯದ ಆದೇಶ ದೊಡ್ಡದು ಎಂಬುದನ್ನು ಮರೆಯಬಾರದು ಎಂದರು.
ಒಂದು ವೇಳೆ ಜಿಲ್ಲಾಡಳಿತ ನ್ಯಾಯಾಲಯದ ಆದೇಶವನ್ನು ಪಾಲಿಸದೇ ಇದೇ ರೀತಿ ಉದಾಸೀನ ಧೋರಣೆ ತಳೆದರೆ ಹೋರಾಟ ಮಾಡಬೇಕಾಗುತ್ತದೆ ಎಂದೂ ಎಚ್ಚರಿಕೆ ನೀಡಿದರು.
ಒತ್ತುವರಿ ತೆರವು ಕುರಿತು ನ್ಯಾಯಾಲಯ ನೀಡಿರುವ ಆದೇಶವನ್ನು ಪಾಲಿಸದ ಜಿಲ್ಲಾಡಳಿತದ ವಿರುದ್ಧ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತರು ಸರ್ಕಾರಕ್ಕೆ ಪತ್ರ ಬರೆದ್ದಿದ್ದರು. ನಂತರ, ಪ್ರವಾಸೋದ್ಯಮ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿ ಒತ್ತುವರಿ ತೆರವಿಗೆ ಸೂಚಿಸಿ, ಆದೇಶಿಸಿದ್ದರು. ಇಷ್ಟಾದರೂ, ಜಿಲ್ಲಾಡಳಿತ ಆದೇಶ ಪಾಲಿಸಿ, ರಾಜರ ಗದ್ದುಗೆ ಉಳಿಸುವ ಕಡೆಗೆ ಚಿಂತನೆ ಹರಿಸಿಲ್ಲ ಎಂದು ಕಿಡಿಕಾರಿದರು.
ಕೊಡಗನ್ನು ಆಳ್ವಿಕೆ ಮಾಡಿದ ವೀರರಾಜ, ಲಿಂಗರಾಜ ಹಾಗೂ ರಾಜಗುರು ರುದ್ರಮುನಿ ಸೇರಿದಂತೆ ಇನ್ನಿತರರ ಸಮಾಧಿಗಳಿರುವ ರಾಜರ ಗದ್ದುಗೆ ಪ್ರದೇಶವು 19.86 ಎಕರೆ ವಿಸ್ತೀರ್ಣದಲ್ಲಿದೆ. ಇದರಲ್ಲಿ 1.18 ಎಕರೆ ಪ್ರದೇಶದಲ್ಲಿ ಒಟ್ಟು 28 ಮಂದಿ ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಿಸಿದ್ದಾರೆ. ಈ ಕಟ್ಟಡಗಳನ್ನು ತೆರವು ಮಾಡಬೇಕು ಎಂದು ನ್ಯಾಯಾಲಯ ಹಾಗೂ ಸರ್ಕಾರ ಆದೇಶ ಹೊರಡಿಸಿದೆ ಎಂದರು.
ಅಖಿಲ ಭಾರತ ವೀರಶೈವ ಮಹಾಸಭಾದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಎಚ್.ವಿ.ಶಿವಪ್ಪ, ಪ್ರಧಾನ ಕಾರ್ಯದರ್ಶಿ ಸಾಂಬಶಿವಯ್ಯ, ಖಜಾಂಚಿ ಉದಯಕುಮಾರ್, ‘ಮುಡಾ’ ಮಾಜಿ ಅಧ್ಯಕ್ಷ ರಮೇಶ್ ಹೊಳ್ಳ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಧರ್ಮಪ್ಪ ಭಾಗವಹಿಸಿದ್ದರು.
ರಾಜಸೀಟ್ನಲ್ಲಿ ಗಾಜಿನ ಸೇತುವೆ; ಹೆಚ್ಚಿದ ವಿರೋಧ ಮಡಿಕೇರಿಯ ಐತಿಹಾಸಿಕ ರಾಜಸೀಟ್ ಉದ್ಯಾನದಲ್ಲಿ ಗಾಜಿನ ಸೇತುವೆ (ಗ್ಲಾಸ್ ಬ್ರಿಡ್ಜ್) ನಿರ್ಮಾಣಕ್ಕೆ ವಿರೋಧ ಮುಂದುವರಿದಿದ್ದು ಹಿಂದಿನ ‘ರಾಜರ ಗದ್ದುಗೆ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರವಿ ಕುಶಾಲಪ್ಪ ಪ್ರಬಲವಾಗಿ ವಿರೋಧಿಸಿದರು. ಮಾತ್ರವಲ್ಲ ಒಂದು ವೇಳೆ ವಿರೋಧ ಲೆಕ್ಕಿಸದೇ ನಿರ್ಮಾಣಕ್ಕೆ ಮುಂದುವರಿದರೆ ‘ರಾಜಾಸೀಟ್ ಉಳಿಸಿ’ ಅಭಿಯಾನ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
‘ಈಗ ಕದ್ದುಮುಚ್ಚಿ ಟೆಂಡರ್ ಕರೆದಿರುವುದನ್ನು ನೋಡಿದರೆ ಇದೊಂದು ಹಣ ಮಾಡುವ ಯೋಜನೆ’ ಎಂದು ಎನ್ನಿಸುತ್ತಿದೆ ಎಂದು ಆರೋಪಿಸಿದ ಅವರು ‘ಇವರಿಗೆ ಗಾಜಿನ ಸೇತುವೆಯಂತಹ ಪ್ರವಾಸೋದ್ಯಮ ಚಟುವಟಿಕೆಗಳನ್ನು ಕೈಗೊಳ್ಳಲು ಐತಿಹಾಸಿಕ ರಾಜಾಸೀಟ್ ಉದ್ಯಾನವೇ ಬೇಕಾ’ ಎಂದು ಪ್ರಶ್ನಿಸಿದರು. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಬೆಳೆಯಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಹಾಗೆಂದು ಈಗಾಗಲೇ ಸಾಕಷ್ಟು ಬೆಳೆದಿರುವ ಪ್ರವಾಸಿತಾಣದಲ್ಲೇ ಹೊಸ ಪ್ರವಾಸೋದ್ಯಮ ಚಟುವಟಿಕೆ ಮಾಡಬಾರದು. ಹೊಸ ಹೊಸ ಬಗೆಯ ಪ್ರವಾಸೋದ್ಯಮ ಚಟುವಟಿಕೆಗಳನ್ನು ಹೊಸ ಹೊಸ ಸ್ಥಳಗಳಲ್ಲಿ ಮಾಡಬೇಕು. ಆಗ ಪ್ರವಾಸೋದ್ಯಮ ಬೆಳೆಯುತ್ತದೆ ಎಂದು ಪ್ರತಿಪಾದಿಸಿದರು. ಶಾಸಕ ಡಾ.ಮಂತರ್ಗೌಡ ಅವರು ಇನ್ನಾದರೂ ಗಂಭೀರವಾಗಿ ಯೋಚಿಸಬೇಕು.
ಭೂಕುಸಿತವಾಗುವ ಸ್ಥಳಕ್ಕೆ ತೀರಾ ಸಮೀಪದಲ್ಲೇ ಇರುವ ರಾಜಾಸೀಟ್ನಲ್ಲಿ ಗಾಜಿನ ಸೇತುವೆ ಮಾಡಿದರೆ ಪರಿಸರಕ್ಕೆ ಹಾನಿಯಾಗಲಿದೆ ಎಂಬುದನ್ನು ಮನಗಾಣಬೇಕು. ಜೊತೆಗೆ ವಾಹನ ನಿಲುಗಡೆ ಸಮಸ್ಯೆ ಸಂಚಾರ ದಟ್ಟಣೆಯಿಂದ ಇಲ್ಲಿನ ಜನರು ಇಲ್ಲಿ ಓಡಾಡುವುದೂ ಕಷ್ಟಕರವಾಗಲಿದೆ ಎಂಬುದನ್ನು ಅರಿತುಕೊಂಡು ಈ ಯೋಜನೆಯನ್ನು ಇಲ್ಲಿಗೆ ನಿಲ್ಲಿಸಬೇಕು ಎಂದು ಮನವಿ ಮಾಡಿದರು. ‘ಕೈಮುಗಿದು ಜನರನ್ನು ಕೇಳುತ್ತೇನೆ. ಒಂದು ವೇಳೆ ರಾಜಾಸೀಟ್ನಲ್ಲಿ ಗಾಜಿನ ಸೇತುವೆ ನಿರ್ಮಾಣವಾದರೆ ರಾಜಾಸೀಟ್ ಉಳಿಸಿ ಎಂಬ ಅಭಿಯಾನಕ್ಕೆ ಜನರು ಬೆಂಬಲ ನೀಡಬೇಕು. ಈ ಕುರಿತು ಸಹಿ ಸಂಗ್ರಹ ಚಳವಳಿಯನ್ನೂ ನಡೆಸಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.