ಸಿದ್ದಾಪುರ (ಕೊಡಗು ಜಿಲ್ಲೆ): ಇಲ್ಲಿಗೆ ಸಮೀಪದಲ್ಲಿ ಹುಲಿ ದಾಳಿಗೆ ಮತ್ತೊಂದು ಹಸು ಮಂಗಳವಾರ ಮೃತಪಟ್ಟಿದೆ.
ಬಾಡಗಬಾಣಂಗಾಲ ಗ್ರಾಮದ ಘಟ್ಟದಳದ ನಿವಾಸಿ ಜಯಚಂದ್ರ ಅವರು ಹಸುವನ್ನು ಕಳೆದೆರಡು ದಿನಗಳ ಹಿಂದೆ ಮೇಯಲು ಬಿಟ್ಟಿದ್ದರು. ಆದರೆ, ಹಸು ಮನೆಗೆ ಹಿಂತಿರುಗಿ ಬಂದಿರಲಿಲ್ಲ. ಮಂಗಳವಾರ ಹಸುವನ್ನು ಹುಡುಕಿಕೊಂಡು ಹೋಗುವ ಸಂದರ್ಭದಲ್ಲಿ ಘಟ್ಟದಳದ ನಿವಾಸಿ ಕೆ.ಜಿ.ವಿವೇಕ್ ಅವರ ಕಾಫಿ ತೋಟದಲ್ಲಿ ಹಸು ಸತ್ತು ಬಿದ್ದಿರುವುದು ಕಂಡು ಬಂದಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹುಲಿ ಹಸುವನ್ನು ಕೊಂದು ಹಾಕಿದ್ದು, ಮತ್ತೆ ಹಸುವಿನ ಕಳೇಬರ ತಿನ್ನಲು ಬರಬಹುದು ಎಂಬ ಶಂಕೆಯಿಂದ ಅರಣ್ಯ ಇಲಾಖಾಧಿಕಾರಿಗಳು ಸ್ಥಳದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದಾರೆ. ತೋಟದ ವಿವಿಧ ಭಾಗದಲ್ಲಿ ಸುಮಾರು 6 ಕ್ಯಾಮೆರಾ ಅಳವಡಿಸಿದ್ದು, ಕಾರ್ಯಾಚರಣೆ ನಡೆಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರತಿದಿನ ಹಾಲು ಮಾರಾಟ ಮಾಡಿ ಬದುಕುತ್ತಿದ್ದ ಜಯಚಂದ್ರ ಅವರು ಹಸುವನ್ನು ಕಳೆದುಕೊಂಡು ನಷ್ಟಕ್ಕೆ ಒಳಗಾಗಿದ್ದಾರೆ. ಈ ಭಾಗದಲ್ಲಿ ಕೆಲ ದಿನಗಳ ಹಿಂದೆಯೂ ಹುಲಿ ದಾಳಿಗೆ ಹಸು ಮೃತಪಟ್ಟಿತ್ತು. ಹುಲಿ ಹಿಡಿಯುವ ಕಾರ್ಯಾಚರಣೆ ನಡೆಯುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.