ನಾಪೋಕ್ಲು: ಕೃಷಿ ಜೀವನ ಮತ್ತು ಔದ್ಯಮಿಕ ಕ್ಷೇತ್ರದ ಸಾಧನೆಯಷ್ಟೇ ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರದ ಸಾಧನೆ ಸಹ ಬಾಳಿನ ನೆಮ್ಮದಿಗೆ ಅವಶ್ಯಕ ಎಂದು ಮಡಿಕೇರಿ ಆಕಾಶವಾಣಿ ಕೇಂದ್ರದ ನಿವೃತ್ತ ಉದ್ಘೋಷಕ ಸುಬ್ರಾಯ ಸಂಪಾಜೆ ಹೇಳಿದರು.
ಸಮೀಪದ ಚೇರಂಬಾಣೆ ಗೌಡ ಸಮಾಜ ಮತ್ತು ಗೌಡ ಮಹಿಳಾ ಒಕ್ಕೂಟದ ವತಿಯಿಂದ ಸಮಾಜದ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾಗಿದ್ದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
‘ಕೊಡಗು ವಿಭಿನ್ನ ಸಂಸ್ಕೃತಿ ಸಂಪ್ರದಾಯವುಳ್ಳ ಬಹು ಭಾಷಿಕರ ನೆಲೆವೀಡು. ದೇಶಕ್ಕೆ ಕೀರ್ತಿ ತಂದುಕೊಟ್ಟ ಸೈನಿಕರ ಕ್ರೀಡಾಳುಗಳ ತವರು. ಈ ಎಲ್ಲ ಕ್ಷೇತ್ರಗಳ ಸಾಧನೆಯೊಂದಿಗೆ ಅರೆಭಾಷಿಕ ಜನಾಂಗ ಇತ್ತೀಚಿನ ದಿನಗಳಲ್ಲಿ ಸಂಗೀತ, ನೃತ್ಯ, ನಾಟಕ, ಭರತನಾಟ್ಯ ಹೀಗೆ ಲಲಿತಕಲೆಗಳು ಮತ್ತು ಸಾಹಿತ್ಯದ ವಿವಿಧ ಸಾಧನಾ ಪಥಗಳಲ್ಲಿ ದಿಟ್ಟ ಹೆಜ್ಜೆ ಇಡುತ್ತಿರುವುದು ಆಶಾದಾಯಕ ಬೆಳವಣಿಗೆ. ಇದು ಜನಾಂಗದ ಸರ್ವಾಂಗೀಣ ಪ್ರಗತಿಯ ಪ್ರತೀಕ ಎಂದರು. ಬಾನುಲಿಯಲ್ಲಿ ಬಿತ್ತರಗೊಳ್ಳುವ ಭಕ್ತಿಗೀತೆಗಳು, ಸುಪ್ರಭಾತ, ವೈವಿಧ್ಯಮಯ ಕಾರ್ಯಕ್ರಮಗಳು ಹಿರಿಯರ ಮುಂದಾಲೋಚನೆಯಿಂದ ಸಾಧ್ಯವಾಯಿತು. ಅಕಾಡೆಮಿಯ ಪಾತ್ರ ಗುರುತರವಾದುದು. ಮಹಿಳಾ ಸಂಘಟನೆಗಳ ಕ್ರಿಯಾಶೀಲತೆಯಂತೂ ಗಮನಾರ್ಹ’ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಿವೃತ್ತ ಉಪನ್ಯಾಸಕ ಕೂಡಕಂಡಿ ಎಂ.ನಂಜುಂಡ, ‘ಯಾವುದೇ ಸಮುದಾಯದ ಬೆಳವಣಿಗೆಯಲ್ಲಿ ಮಾಧ್ಯಮಗಳ ಪಾತ್ರ ಮುಖ್ಯವಾದುದು. ಈ ಗುಟ್ಟನ್ನರಿತು ಅರೆಭಾಷಿಕ ಜನಾಂಗ ತಮ್ಮ ಸರ್ವಾಂಗೀಣ ಏಳಿಗೆಯತ್ತ ಇನ್ನಷ್ಟು ಗಮನಹರಿಸಬೇಕು. ರೇಡಿಯೋ ಕಾರ್ಯಕ್ರಮಗಳು ಮನೆ ಮನೆ ತಲುಪಿವೆ. ಈ ಕೆಲಸ ಇನ್ನಷ್ಟು ಚುರುಕಾಗಬೇಕು’ ಎಂದರು.
ಅಧ್ಯಕ್ಷತೆ ವಹಿಸಿದ್ದ ಚೇರಂಬಾಣೆ ಗೌಡ ಸಮಾಜದ ಅಧ್ಯಕ್ಷ ಕೊಡಪಾಲು ಗಣಪತಿ ಮಾತನಾಡಿ, ‘ಮೊದಲ ದಿನಗಳಲ್ಲಿ ಸೋಬಾನೆಗೆ ಸೀಮಿತವಾಗಿದ್ದ ರೇಡಿಯೋ ಕಾರ್ಯಕ್ರಮಗಳು ಜನಾಂಗದ ಜನತೆ ಜಾಗೃತರಾದ ಕಾರಣ ವೈವಿಧ್ಯತೆಯನ್ನು ಪಡೆದುಕೊಂಡಿತು. ನಾಟಕ ರೂಪಕಗಳು ಅರೆಭಾಷೆಯಲ್ಲಿ ಪ್ರಸಾರವಾಗಿ ಜನಾಂಗದ ಜನತೆ ಹೆಮ್ಮೆ ಪಡುವಂತಾಯಿತು. ಈ ನಿಟ್ಟಿನಲ್ಲಿ ಮಹಿಳೆಯರ ಸಾಧನೆ ಮತ್ತು ಕೊಡುಗೆ ಹಿರಿದಾದುದು. ಜನಾಂಗದ ಗೌರವವನ್ನು ಎತ್ತರಿಸಿದ ಹಿರಿಮೆ ಮಹಿಳೆಯರಿಗೆ ಸೇರುತ್ತದೆ’ ಎಂದರು.
ಇದಕ್ಕೂ ಮೊದಲು ಪೂರ್ಣಕುಂಭ ಸ್ವಾಗತ ನೀಡಿ ಸಾಂಪ್ರದಾಯಿಕವಾಗಿ ಸುಬ್ರಾಯ ಸಂಪಾಜೆ ದಂಪತಿಯನ್ನು ಸ್ವಾಗತಿಸಲಾಯಿತು. ಸಮುದಾಯದ ವತಿಯಿಂದ ಬಾನುಲಿ ಸೇವೆಗಾಗಿ ಅವರನ್ನು ಸನ್ಮಾನಿಸಲಾಯಿತು. ಒಕ್ಕೂಟದ ಸದಸ್ಯರಿಂದ ಸೋಬಾನೆ ಪದ, ಕವನವಾಚನ, ಗೀತ ಗಾಯನ ಕಾರ್ಯಕ್ರಮಗಳು ನಡೆಯಿತು.
ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್, ಚೇರಂಬಾಣೆ ಗೌಡ ಸಮಾಜದ ಉಪಾಧ್ಯಕ್ಷ ಕೇಕಡ ದಿನೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.