ಮಡಿಕೇರಿ: ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಕೊಡಗು ಜಿಲ್ಲೆಯಲ್ಲಿ ವೈದ್ಯರಿಗೆ ಹೆಚ್ಚಿನ ಸಮಸ್ಯೆಗಳು ಕಾಡುತ್ತಿದ್ದು, ಬಹುತೇಕ ವೈದ್ಯರು ಇಲ್ಲಿ ಕಾರ್ಯನಿರ್ವಹಿಸಲು ಇಷ್ಟಪಡದೇ ಬೇರೆ ಜಿಲ್ಲೆಗಳಿಗೆ ವರ್ಗಾವಣೆಯಾಗಿ ಹೋಗುತ್ತಿದ್ದಾರೆ. ಕಳೆದೊಂದು ವಾರದಿಂದ ಈಚೆಗೆ ಮೂವರು ವೈದ್ಯರು ವರ್ಗಾವಣೆಗೊಂಡಿದ್ದಾರೆ. ಇನ್ನು ಕೂಡ ಕೊಡಗು ವೈದ್ಯರಿಗೆ ಆಕರ್ಷಣೀಯವಾಗಿ ಕಾಣುತ್ತಿಲ್ಲ.
ಸಾಕಷ್ಟು ಕೊರತೆಗಳ ಮಧ್ಯೆಯೂ ಆಯುಷ್ಮಾನ್ ಭಾರತ್ ಯೋಜನೆಯ ಅನುಷ್ಠಾನದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮುಂಚೂಣಿಯಲ್ಲಿದೆ.
ವಿಶೇಷವಾಗಿ, ಇಲ್ಲಿ ವೈದ್ಯರನ್ನು ಕಾಡುವ ಸಮಸ್ಯೆ ಎಂದರೆ ವಸತಿಗೃಹಗಳ ಕೊರತೆ, ಖಾಲಿ ಹುದ್ದೆಗಳಿಂದ ಸೃಷ್ಟಿಯಾಗುವ ಅಗಾಧ ಒತ್ತಡ, ಪತಿ ಮತ್ತು ಪತ್ನಿ ಬೇರೆ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುವುದು. ಹೀಗೇ ಕೆಲವಾರು ಪ್ರಮುಖ ಸಮಸ್ಯೆಗಳಿಂದ ವೈದ್ಯರು ಬಳಲುತ್ತಿದ್ದಾರೆ.
ಕಿರಿಯ ವೈದ್ಯರಿಗೆ ಇಲ್ಲಿ ಹಾಸ್ಟೆಲ್ ಸೌಲಭ್ಯ ಇಲ್ಲ. ಅವರು ಬಾಡಿಗೆ ಮನೆ ಮಾಡಿಕೊಂಡೇ ವಾಸಿಸಬೇಕಿದೆ. ಮಡಿಕೇರಿಯಂತಹ ಪ್ರವಾಸಿತಾಣದಲ್ಲಿ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಬಾಡಿಗೆ ಬಲು ದುಬಾರಿ. ಬರುವ ಶಿಷ್ಯವೇತನವೆಲ್ಲ ಬಾಡಿಗೆ ಪಾವತಿ, ಓಡಾಟದ ಖರ್ಚಿಗೆ ಆಗುತ್ತದೆ ಎಂದು ಹೆಸರು ಬಹಿರಂಗಪಡಿಸಲು ಬಯಸದ ಕಿರಿಯ ವೈದ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಜನರ ಒತ್ತಡವೂ ಹೆಚ್ಚಿದೆ. ನಮಗಂತೂ ಭದ್ರತೆಯೇ ಇಲ್ಲ’ ಎಂದು ಮತ್ತೊಬ್ಬ ಕಿರಿಯ ವೈದ್ಯರು ಹೇಳಿದರು.
ಈ ರೀತಿ ಸಮಸ್ಯೆಗಳಿಂದ ಕಿರಿಯ ವೈದ್ಯರು ತಮ್ಮ ತರಬೇತಿ ಮುಗಿಸಿದ ತಕ್ಷಣ ಬೇರೆ ಊರುಗಳಿಗೆ ತೆರಳುತ್ತಿದ್ದಾರೆ.
‘ಕೆಲಸ ಖಾಲಿ ಇದ್ದಾಗ್ಯೂ ಇಲ್ಲಿ ಕೆಲಸ ಮಾಡುವವರ ಪತ್ನಿಗೆ ಕೆಲಸ ಕೊಡುವುದಿಲ್ಲ. ಪತಿ, ಪತ್ನಿ ಬೇರೆ ಬೇರೆ ಜಿಲ್ಲೆಗಳಲ್ಲಿ ಎಷ್ಟು ವರ್ಷ ತಾನೆ ಇರಲು ಸಾಧ್ಯ. ಹಾಗಾಗಿ, ಪತಿ, ಪತ್ನಿ ಬೇರೆ ಬೇರೆ ಕಡೆ ಇರುವವರು ವರ್ಗಾವಣೆಗಾಗಿ ಸದಾ ಪ್ರಯತ್ನಿಸುತ್ತಿರುತ್ತಾರೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಹಿರಿಯ ವೈದ್ಯರೊಬ್ಬರು ಹೇಳುತ್ತಾರೆ.
ಇನ್ನು ಇಲ್ಲಿ ಕಚೇರಿ ಸಿಬ್ಬಂದಿಯ ಕೊರತೆಯೂ ಸಾಕಷ್ಟಿದೆ. ಬಹಳಷ್ಟು ಬಾರಿ ವೈದ್ಯರು ಕಚೇರಿ ಕೆಲಸವನ್ನೂ ಮಾಡಬೇಕಿದೆ. ಇಂತಹ ಅವಸ್ಥೆ ಬೇಡ ಎಂದೇ ಬಹುತೇಕ ವೈದ್ಯರು ಇಲ್ಲಿ ಕಾರ್ಯನಿರ್ವಹಿಸಲು ಬಯಸುವುದಿಲ್ಲ ಎಂದು ಮತ್ತೊಬ್ಬ ಹಿರಿಯ ವೈದ್ಯರು ಹೇಳುತ್ತಾರೆ.
ಜಿಲ್ಲೆಯಲ್ಲಿ 47 ತಜ್ಞ ವೈದ್ಯರು ಇರಬೇಕಾದ ಕಡೆ ಕೇವಲ 19 ಮಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ.
///
ಇನ್ಫೋಗ್ರಾಫ್ಗೆ...
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಖಾಲಿ ಹುದ್ದೆಗಳು
ಹುದ್ದೆಗಳು;ಮಂಜುರಾದ ಹುದ್ದೆಗಳು;ಭರ್ತಿಯಾಗಿರುವುವು;ಖಾಲಿ ಇರುವ ಹುದ್ದೆಗಳು
ಪ್ರಾಧ್ಯಾಪಕರು;21;20;01
ಸಹ ಪ್ರಾಧ್ಯಾಪಕರು;41;34;07
ಸಹಾಯಕ ಪ್ರಾಧ್ಯಾಪಕರು;60;28;32
ಸೀನಿಯರ್ ರೆಸಿಡೆಂಟ್;43;03;40
ಇತ್ತೀಚೆಗೆ 19 ಮಂದಿಯನ್ನು ತಜ್ಞ ವೈದ್ಯರನ್ನು ನೇಮಕಾತಿ ಮಾಡಿಕೊಂಡು ಕೊರತೆ ನೀಗಿಸಲಾಗುತ್ತಿದೆ. ವೈದ್ಯಕೇತರ ಸಿಬ್ಬಂದಿಯನ್ನೂ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆಡಾ.ಎ.ಜೆ.ಲೋಕೇಶ್ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಮತ್ತು ನಿರ್ದೇಶಕ
ಹಲವು ಬೇಡಿಕೆಗಳ ಈಡೇರಿಕೆಗೆ ವೈದ್ಯರ ಒತ್ತಾಯ
ಹೊಸ ಕಟ್ಟಡ ಬೇಗ ಪೂರ್ಣಗೊಳ್ಳಬೇಕು ವೈದ್ಯರ ಜೊತೆಗೆ ಶೂಶ್ರೂಷಕರು ಅರೆವೈದ್ಯಕೀಯ ಸಿಬ್ಬಂದಿ ಭದ್ರತಾ ಸಿಬ್ಬಂದಿ ಸ್ವಚ್ಛತಾ ಸಿಬ್ಬಂದಿ ಸೇರಿದಂತೆ ಇನ್ನಿತರ ಸಿಬ್ಬಂದಿಯನ್ನು ನೇಮಕ ಮಾಡಬೇಕು ಎಂದು ಹಾಲಿ ಕೆಲಸ ಮಾಡುತ್ತಿರುವ ವೈದ್ಯರು ಒತ್ತಾಯಿಸುತ್ತಾರೆ. ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಸೇರಿದ ಬೋಧನಾ ಆಸ್ಪತ್ರೆಯಲ್ಲಿರುವ ಹೊರಠಾಣೆಯಲ್ಲಿ ಪೊಲೀಸರು ದೂರು ಸ್ವೀಕರಿಸುವುದಿಲ್ಲ. ಹಾಗಿದ್ದರೆ ಈ ಹೊರಠಾಣೆ ಇದ್ದು ಏನು ಪ್ರಯೋಜನ ಎಂದೂ ಅವರು ಪ್ರಶ್ನಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.