ಗೋಣಿಕೊಪ್ಪಲು: ಸಮೀಪದ ಪಿಎಚ್ಎಸ್ ಕಾಲೊನಿಯಲ್ಲಿ ಸೋಮವಾರ ಬೆಳಿಗ್ಗೆ ವಾಯುವಿಹಾರಕ್ಕೆ ಹೊರಟಿದ್ದ ರಂಗಸ್ವಾಮಿ (53) ಅವರ ಮೇಲೆ ಕಾಡಾನೆ ದಾಳಿ ಮಾಡಿ ಕೊಂದು ಹಾಕಿದೆ.
ಮುಂಜಾನೆ 6 ಗಂಟೆ ವೇಳೆಯಲ್ಲಿ ಮನೆಯಿಂದ ತಮ್ಮ ಸಾಕು ನಾಯಿ ಕರೆದುಕೊಂಡು ವಾಯು ವಿಹಾರಕ್ಕೆ ಹೊರಟ ರಂಗಸ್ವಾಮಿ, ಸ್ವಲ್ಪ ದೂರ ಹೋಗುವಷ್ಟರಲ್ಲಿ ಕಾಫಿ ತೋಟದಿಂದ ರಸ್ತೆಗೆ ಕಾಡಾನೆ ದಿಢೀರನೆ ನುಗ್ಗಿದೆ. ಈ ವೆಳೆ ಭಯಭೀತರಾಗಿ ಕುಸಿದು ಬಿದ್ದ ರಂಗಸ್ವಾಮಿ ಮೇಲೆ ದಾಳಿ ನಡೆಸಿದ ಆನೆ, ಅವರ ಬಲಗಾಲನ್ನು ತುಳಿದಿದೆ. ಅಷ್ಟೊತ್ತಿಗೆ ಅಕ್ಕಪಕ್ಕದಲ್ಲಿದ್ದ ಜನತೆ ಕೂಗಿ ಆನೆಯನ್ನು ಓಡಿಸಿದ್ದಾರೆ.
ಗಾಯಗೊಂಡ ರಂಗಸ್ವಾಮಿಯನ್ನು ಕೂಡಲೇ ಗೋಣಿಕೊಪ್ಪಲು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯಲಾಯಿತು. ಮಾರ್ಗ ಮಧ್ಯೆ ರಂಗಸ್ವಾಮಿ ಮೃತಪಟ್ಟರು.
ಎಲೆಕ್ಟ್ರಿಕಲ್ಸ್ ಗುತ್ತಿಗೆದಾರರಾಗಿದ್ದ ರಂಗಸ್ವಾಮಿ ಅವರಿಗೆ ಮೂವರು ಪುತ್ರರು ಹಾಗೂ ಪತ್ನಿ ಇದ್ದಾರೆ.
ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪೊನ್ನಂಪೇಟೆ ರಸ್ತೆಯ ರುದ್ರಭೂಮಿಯಲ್ಲಿ ಸಂಜೆಮೃತರ ಅಂತ್ಯಸಂಸ್ಕಾರ ನೆರವೇರಿತು.
ಮುಂಜಾನೆ 4.55ರ ವೇಳೆಯಲ್ಲಿ ಪೊನ್ನಂಪೇಟೆಯಿಂದ ಗೋಣಿಕೊಪ್ಪಲಿಗೆ ಜಾಗಿಂಗ್ ಬರುತ್ತಿದ್ದ ‘ಪ್ರಜಾವಾಣಿ’ ವಿತರಕಿ ಜಮುನಾ ವಸಂತ್ ಅವರನ್ನೂ ಅರುವತ್ತೊಕ್ಕಲು ಸರ್ವದೈವತಾ ಶಾಲೆ ಎದುರಿನ ರಸ್ತೆ ಬದಿಯಲ್ಲಿ ಇದೇ ಆನೆ ಬೆದರಿಸಿದೆ. ಹೆದರಿ ಓಡಿ ಬಂದ ಜಮುನಾ ವಸಂತ್, ಆನೆ ಬಗ್ಗೆ ಪಕ್ಕದ ಮನೆಯವರಿಗೆ ಮಾಹಿತಿ ನೀಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.