ಸೋಮವಾರಪೇಟೆ: ಸಮೀಪದ ಕಿಬ್ಬೆಟ್ಟ ಗ್ರಾಮದ ಅಯ್ಯಪ್ಪ ಕಾಲೊನಿ ಸಮೀಪ ಕಳೆದ ಮೂರು ದಿನಗಳ ಹಿಂದೆ ನಿರ್ಮಿಸಿದ್ದ ಶೆಡ್ಗಳನ್ನು ಬುಧವಾರ ಅರಣ್ಯ ಇಲಾಖೆ ಸಿಬ್ಬಂದಿ ತೆರವುಗೊಳಿಸಿದರು.
ಚೌಡ್ಲು ಗ್ರಾಮ ಪಂಚಾಯಿತಿಗೆ ಸೇರಿದ ಅಯ್ಯಪ್ಪ ಕಾಲೊನಿಯಲ್ಲಿರುವ ಸರ್ವೆ ನಂ. 56/1ರಲ್ಲಿನ ಜಾಗ ಅರಣ್ಯ ಇಲಾಖೆ-ಗ್ರಾಮಸ್ಥರು ಎಂದು ಆರ್ ಟಿಸಿಯಲ್ಲಿ ಬರುತ್ತಿದ್ದು, ಈ ಜಾಗದಲ್ಲಿ ಸ್ಥಳೀಯರಾದ ಕಿಟ್ಟು ಹಾಗೂ ವಸಂತ್ ಎಂಬವರು ಶೆಡ್ ಗಳನ್ನು ನಿರ್ಮಿಸಿಕೊಂಡಿದ್ದರು. ಈ ಬಗ್ಗೆ ಮಾಹಿತಿ ಪಡೆದ ಡಿಸಿಎಫ್ ಅಭಿಷೇಕ್, ಎಸಿಎಫ್ ಗೋಪಾಲ್, ಆರ್ಎಫ್ಒ ಶೈಲೇಂದ್ರಕುಮಾರ್, ಉಪ ವಲಯ ಅರಣ್ಯಾಧಿಕಾರಿ ಪ್ರಶಾಂತ್ ಅವರು ಸ್ಥಳಕ್ಕೆ ಭೇಟಿ ನೀಡಿ, ಶೆಡ್ ನಿರ್ಮಿಸುತ್ತಿರುವ ಜಾಗ ಅರಣ್ಯಕ್ಕೆ ಸೇರಿದ್ದು, ಇಲ್ಲಿ ಅತಿಕ್ರಮಣ ಮಾಡಬಾರದು ಎಂದರು.
ಅರಣ್ಯ ಜಾಗದ ಅತಿಕ್ರಮಣವಾದರೆ ಕಾನೂನು ಪ್ರಕಾರ ಕ್ರಮ ವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದ ಅರಣ್ಯ ಇಲಾಖೆಯ ಸಿಬ್ಬಂದಿ, ಎರಡು ಶೆಡ್ ಗಳನ್ನು ತೆರವುಗೊಳಿಸಿದರು. ಕಳೆದ ಮೂರು ದಿನಗಳಿಂದ ಈ ಜಾಗದಲ್ಲಿ ಶೆಡ್ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ಇಂದು ಕೆಲವರು ಉಳಿದ ಜಾಗದಲ್ಲಿ ಕಾಡು ಕಡಿದು ಶೆಡ್ ನಿರ್ಮಿಸಿಕೊಳ್ಳಲು ಮುಂದಾದ ಸಂದರ್ಭ ಅಧಿಕಾರಿಗಳು ತಡೆಯೊಡ್ಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.