ADVERTISEMENT

ಕೊಟ್ಟಗೇರಿ, ಗೋಣಿಕೊಪ್ಪಲು, ಪೊನ್ನಂಪೇಟೆಯಲ್ಲಿ ಆಚರಣೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2024, 18:24 IST
Last Updated 14 ಡಿಸೆಂಬರ್ 2024, 18:24 IST
ಗೋಣಿಕೊಪ್ಪಲು ಬಳಿಯ ಬಾಳೆಲೆ ಕೊಟ್ಟಗೇರಿಯಲ್ಲಿ ಒಕ್ಕಲಿಗರ ಸೋಮಯ್ಯ ಅವರ ಕುಟುಂಬದ ಸದಸ್ಯರು ಹುತ್ತರಿ ಕದಿರನ್ನು ಕೈಯಲ್ಲಿ ಹಿಡಿದು ಸಂಭ್ರಮಿಸಿದರು
ಗೋಣಿಕೊಪ್ಪಲು ಬಳಿಯ ಬಾಳೆಲೆ ಕೊಟ್ಟಗೇರಿಯಲ್ಲಿ ಒಕ್ಕಲಿಗರ ಸೋಮಯ್ಯ ಅವರ ಕುಟುಂಬದ ಸದಸ್ಯರು ಹುತ್ತರಿ ಕದಿರನ್ನು ಕೈಯಲ್ಲಿ ಹಿಡಿದು ಸಂಭ್ರಮಿಸಿದರು   

ಗೋಣಿಕೊಪ್ಪಲು : ಕೊಡಗಿನ ಸಂಭ್ರಮದ ಸುಗ್ಗಿ ಹಬ್ಬ ಪುತ್ತರಿಯನ್ನು ಪೊನ್ನಂಪೇಟೆ ತಾಲ್ಲೂಕಿನಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು.

ಬಾಳೆಲೆ ಬಳಿಯ ಕೊಟ್ಟಗೇರಿಯ ಒಕ್ಕಲಿಗರ ಕುಟುಂಬ ಸೋಮಯ್ಯ ಅವರ ಗದ್ದೆಯಲ್ಲಿ ಕುಟುಂಬದ ಸದಸ್ಯರೆಲ್ಲ ಸೇರಿ ಭಕ್ತಿಯಿಂದ ಹುತ್ತರಿ ಕದಿರು ತೆಗೆದರು.  ಕದಿರುನ್ನು ಕೈಯಲ್ಲಿ ಹಿಡಿದು 'ಪೊಲಿ ಪೊಲಿ ದೇವ .... ' ಎಂದು ಕೂಗುತ್ತಾ, ಭಜಿಸುತ್ತಾ ಮನೆಯತ್ತ ತೆರಳಿದರು. ಮನೆಯ ಬಾಗಿಲಲ್ಲಿ ಕದಿರು ತಂದವರ ಕಾಲಿಗೆ ನೀರು ಹಾಕಿ ಒಳಗೆ ಬರಮಾಡಿಕೊಳ್ಳಲು ಕಾದು ನಿಂತಿದ್ದ ಮನೆಯ ಒಡತಿ ಕದಿರು ಹಿಡಿದ ಮನೆಯ ಯಜಮಾನನ ಬಾಯಿಗೆ ಒಳಲೆಯಲ್ಲಿ ಹಾಲು ಕುಡಿಸಿ, ಕಾಲಿಗೆ ನಮಸ್ಕರಿಸಿ. ಬರಮಾಡಿಕೊಂಡರು.

ಮನೆಯ ಹಜಾರದ ನೆಲ್ಲಕ್ಕಿ ನೆಡುಬಾಡೆಯಲ್ಲಿನ ತೂಕ್ ಬೊಳಚದ (ತೂಗು ದೀಪ)  ಮುಂದೆ ಹಾಸಿದ್ದ ಚಾಪೆಯ ಮೇಲೆ ಕದಿರು ಇರಿಸಿ, ತೂಗು ದೀಪಕ್ಕೆ ನಮಸ್ಕರಿಸಿ ‘ಈ ವರ್ಷ ಹೊಸ ಅನ್ನ ಹೆಚ್ಚಲಿ ದೇವರೆ, ಜತೆಗೆ ಮನೆ ಮಂದಿಗೆ ಹಾಗೂ  ಜನರಿಗೆ ಯಾವುದೇ ನೋವು, ಕಷ್ಟಗಳು ಬಾರದಿರಲಿ' ಎಂದು ಬೇಡಿಕೊಂಡರು.  ಹಬ್ಬದ ವಿಶೇಷ ತಿನಿಸುಗಳಾದ ಗೆಣಸು, ತೊಂಬಿಟ್ಟು ಮೊದಲಾದವುಗಳನ್ನು ಸವಿದು ಆನಂದಿಸಿದರು.

ADVERTISEMENT

ಗದ್ದೆಯಲ್ಲಿ ಕದಿರು ತೆಗೆಯವುದಕ್ಕೆ ಮುನ್ನ ಕದಿರು ತೆಗೆಯುವ ಜಾಗವನ್ನು ಸ್ವಚ್ಚಗೊಳಿಸಿ ಮಾವಿನ ಎಲೆಯ ತೋರಣ ಕಟ್ಟಿ, ಬಾಳೆ ಕಂಬ ನೆಟ್ಟು ಅಲಂಕಾರ ಮಾಡಲಾಗಿತ್ತು. ಕದಿರು ತೆಗೆಯುವುದಕ್ಕೆ ಎಲ್ಲರೂ ಸಾಲಾಗಿ ತೆರಳಿ ಗದ್ದೆ ಬದಿಯಲ್ಲಿ ಪೊಲಿ ಪೊಲಿ ದೇವ ಎಂದು ಕೂಗುತ್ತಾ ನಿಂತಿದ್ದರು. ಕದಿರು ಕೊಯ್ಯಲು ಗದ್ದೆಗೆ ಇಳಿದ ವ್ಯಕ್ತಿ ಮೊದಲು ಕುಡುಗೋಲು, ಬಂದೂಕು ಇಟ್ಟು ಹಣ್ಣು, ಕಾಯಿ, ಎಲೆ, ಅಡಿಕೆಯೊಂದಿಗೆ ಅರಸಿನ, ಕುಂಕುಮ ಹಚ್ಚಿ ಪೂಜಿಸಿದರು. ಬಳಿಕಕದಿರು ತೆಗೆದು ಗದ್ದೆಯ ಬದುಗಳಲ್ಲಿ ನಿಂತಿದ್ದವರಿಗೆ ನೀಡಿದರು.

 ಗೋಣಿಕೊಪ್ಪಲಿನ ಉಮಾಮಹೇಶ್ವರಿ ದೇವಸ್ಥಾನ, ಪೊನ್ನಂಪೇಟೆಯ ಬಸವೇಶ್ವರ ದೇವಸ್ಥಾನಗಳಲ್ಲಿ ಆಚರಣೆಗೆ ಜನರು ಸಡಗರದ  ಸಾಮೂಹಿಕವಾಗಿ ಕದಿರು ತೆಗೆದರು. ಪೊನ್ನಂಪೇಟೆಯ ಬಸವೇಶ್ವರ ದೇವಸ್ಥಾನದ ನೂರಾರು ಭಕ್ತರು ಮಂಗಳವಾದ್ಯದೊಂದಿಗೆ ದೇವಸ್ಥಾನದ ಗದ್ದೆಯಾದ ಗೌರಿ ಕೆರೆ ಬಳಿಗೆ ತೆರಳಿದರು. ಕದಿರು ಪೂಜಿಸಿ ತೆಗೆದ ಬಳಿಕ , ವಾದ್ಯದೊಂದಿಗೆ ಕದಿರು ಹಿಡಿದು ದೇವಸ್ಥಾನಕ್ಕೆ ಹಿಂತಿರುಗಿದರು. ದೇವಸ್ಥಾನದ ಮುಂಭಾಗದಲ್ಲಿ ಕದಿರು ಹಿಡಿದು ಕೊಡವ ವಾಲಗದ ಕುಣಿತಕ್ಕೆ ತಕ್ಕಂತೆ ಹೆಜ್ಜೆಹಾಕಿ ಕುಣಿದು ಸಂಭ್ರಮಿಸಿದರು.

ಗೋಣಿಕೊಪ್ಪಲಿನಲ್ಲಿಯೂ ನೂರಾರು ಜನರು ವಾದ್ಯಮೇಳದೊಂದಿಗೆ ಹರಿಶ್ಚಂದ್ರಪುರದ ಗದ್ದೆಗೆ ಸಾಲಾಗಿ ತೆರಳಿ ಕದಿರು ತಂದರು. ಪಟ್ಟಣದ ಮುಖ್ಯ ರಸ್ತೆಯಲ್ಲಿ ಸಾಗಿ ಉಮಮಹೇಶ್ವರಿ ದೇವಸ್ಥಾನಕ್ಕೆ ಬಂದು ಕದಿರಿಗೆ,  ಮನೆಗೆ ತೆರಳಿದರು. ಬಂಗಾರದ ಬಣ್ಣದಲ್ಲಿ ಕಂಗೊಳಿಸುತ್ತಿದ್ದ ಚಂದ್ರನ ಬೆಳಕಿನಲ್ಲಿ ಚುಮುಚುಮು ಚಳಿಯೊಂದಿಗೆ ಕದಿರು ಹಿಡಿದ ಭಕ್ತರು ಸಂಭ್ರಮಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.